ಮಲೇಬೆನ್ನೂರು, ಜು.19- ಕೊಕ್ಕನೂರು ಗ್ರಾ.ಪಂ ವ್ಯಾಪ್ತಿಯ ಜಿ.ಟಿ.ಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಜನಸಂಖ್ಯೆ ಹೆಚ್ಚಾದಷ್ಟು ಮಕ್ಕಳಿಗೆ ಶಿಕ್ಷಣ, ಆಹಾರ ಕೊರತೆ ಮತ್ತು ವಾಸಿಸಲು ಮನೆಗಳಿಗೆ ತುಂಬಾ ತೊಂದರೆ ಆಗುತ್ತದೆ. ಹಾಗಾಗಿ ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಇರುವಂತೆ ಅನುಸರಿಸಬೇಕು ಎಂದು ಕರೆ ನೀಡಿದರು.
ಒಂದು ಮಗುವಿಗೆ ಜನ್ಮ ನೀಡಿದ ತಕ್ಷಣ 2 ರಿಂದ 3 ವರ್ಷ ಅಂತರ ಕಾಪಾಡಲು ಒಪಿ, ಸಿಸಿ, ಐಯುಡಿ, ಪಿಪಿಐಯುಸಿಡಿ ಅಂತರ ಚುಚ್ಚುಮದ್ದುಗಳನ್ನು ಹಾಕಿಸಿಕೊಳ್ಳಿ ಮತ್ತು ಪುರುಷರು ನೋ ಸ್ಕಾಲ್ ಪೆಲ್ ವ್ಯಾಸಕ್ಟಮಿ ಎಂಬ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು. ಭೂಮಿ ಇದ್ದಷ್ಟೇ ಇದೆ. ಆದರೆ ಜನಸಂಖ್ಯೆ ಮಾತ್ರ ಹೆಚ್ಚಳವಾಗುತ್ತಿದೆ. ಜೊತೆಗೆ ಬಡತನ, ನಿರೋದ್ಯೋಗ, ಔಷಧಿಗಳ ಕೊರತೆ ಉದ್ಭವಿಸುತ್ತದೆ ಎಂದು ನಾಗರಾಜ್ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯೆ ಮಂಗಳ, ಹೊಲಿಗೆ ತರಬೇತಿದಾರರಾದ ರೇಖಾ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಮಮತಾ ಮತ್ತು ಇತರರು ಭಾಗವಹಿಸಿದ್ದರು.