ನಡೆ-ನುಡಿ ಕೃತಿಗಳಲ್ಲಿ ಕೌಶಲ್ಯವಿರಲಿ: ಡಾ.ಅಂಜನಪ್ಪ

ನಡೆ-ನುಡಿ ಕೃತಿಗಳಲ್ಲಿ ಕೌಶಲ್ಯವಿರಲಿ: ಡಾ.ಅಂಜನಪ್ಪ

ದಾವಣಗೆರೆ, ಜು. 17 – ಪ್ರತಿಭೆ ಪ್ರತಿಯೊಬ್ಬರಲ್ಲಿ ಇರುತ್ತದೆ. ಪ್ರತಿಭೆ ಎನ್ನುವುದು ಒಂದು ಕೌಶಲ್ಯವೇ ಸರಿ. ಆ ಪ್ರತಿಭೆ ಅಥವಾ ಕೌಶಲ್ಯವು ಪ್ರತಿಯೊಬ್ಬರ ನಡೆ-ನುಡಿ ಕೃತಿಗಳಲ್ಲಿ ಗೋಚರವಾಗಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಆರ್. ಅಂಜನಪ್ಪನವರು ಹೇಳಿದರು. 

 ಇಲ್ಲಿನ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ   ಹಾಗೂ ಕೌಶಲ ಅಭಿವೃದ್ಧಿ ಕೋಶದ ಅಡಿಯಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಕೌಶಲ್ಯ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಯಾವಾಗ ಅವಕಾಶಗಳು ಸಿಗುವುದಿಲ್ಲವೋ ಆಗ ಅವಕಾಶಗಳು ಹುಡುಕಿ ಬರುವ ಹಾಗೆ ಕೌಶಲ್ಯವನ್ನು ಬೆಳೆಸಿಕೊಂಡಾಗ ಅದಕ್ಕೆ ಹೆಚ್ಚು ಮಹತ್ವ. ಹಾಗಾಗಿ ವಿದ್ಯಾರ್ಥಿ ಮಿತ್ರರು ಪ್ರತಿಯೊಬ್ಬರು ವಿಶಿಷ್ಟ  ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ  ಕೌಶಲ್ಯ ಅಭಿವೃದ್ಧಿ ಕೋಶದ ಸಂಚಾಲಕರಾದ ವೆಂಕಟೇಶ್ ಬಾಬು ಮಾತನಾಡಿ, ಪ್ರತಿಯೊಬ್ಬರೂ ಕೌಶಲ್ಯವನ್ನು ಗಳಿಸುವ ಪ್ರಯತ್ನ ಮಾಡಬೇಕು ಕೌಶಲ್ಯ ಎಂಬುದು ಇತರರಿಗೆ ಹಂಚಿಕೊಳ್ಳಲು ಅಥವಾ ಕಳುಹಿಸಲಾಗದ ಸ್ವತ್ತು ಅದು ನಮ್ಮಲ್ಲಿ ನಾವೇ ಗಳಿಸಿಕೊಳ್ಳಬೇಕಾದ ಸ್ವತ್ತು ಹಾಗಾಗಿ ನಮ್ಮ ಕೌಶಲ್ಯವೂ ಇತರರಿಗೆ ಹಾಗೂ ಸಮಾಜಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾತ್ರ ವಹಿಸುವುದು ಮುಖ್ಯ ಎಂದರು. 

ಭಾರತವು ಯುವ ರಾಷ್ಟ್ರ ಪ್ರಪಂಚವು ಭಾರತವನ್ನು ಅತಿ ಉತ್ಸಾಹದಿಂದ ಎದುರು ನೋಡುತ್ತಿರುತ್ತದೆ ಏಕೆಂದರೆ ಭಾರತದ ಜನಸಂಖ್ಯೆಯು ಶೇ. 60 ಕ್ಕೂ ಹೆಚ್ಚು ಯುವ ಸಮುದಾಯವನ್ನೇ ಅವಲಂಬಿಸಿದೆ ನಮ್ಮ ಯುವಕರು ವಿಶಿಷ್ಟ ಕೌಶಲ್ಯಗಳನ್ನು ಬೆಳೆಸಿ ಕೊಂಡು ಉತ್ತಮ ಉದ್ಯೋಗದತ್ತ ಮುಖ ಮಾಡಿದರೆ ಆಗ ತಮ್ಮ ಸ್ವ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದೇಶ್ ಅವರು ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಯುವಕರ ಪಾತ್ರ   ಮುಖ್ಯ.  ಆರ್ಥಿಕ ಅಭಿವೃದ್ಧಿಯಲ್ಲಿ  ಇತರೆ ದೇಶಗಳನ್ನು ಹೋಲಿಸಿದಾಗ ಭಾರತದ ಯುವಕರು ಕೌಶಲ್ಯದೊಂದಿಗೆ ಉದ್ಯೋಗ ಮಾಡುತ್ತಾ ಹೋದರೆ ಅಭಿವೃದ್ಧಿಯಾಗಲು ಸಾಧ್ಯ. ಭಾರತವು ಆರ್ಥಿಕ ಜಗತ್ತಿನ ಮೊದಲ ಸ್ಥಾನಕ್ಕೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀಮತಿ ಗೀತಾ ದೇವಿ  ಮಾತನಾಡಿ, ಕೌಶಲ್ಯ ಹೇಗೆ ಅಭಿವೃದ್ಧಿಯಾಗುತ್ತದೆ ಎಂದು ತಮ್ಮ ಅನುಭವ ಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಬಸವರಾಜ್ ಹಾಗೂ ಸಾಯಿ ಕಿರಣ ಅವರು ಸ್ಕಿಲ್ ಪೋರ್ಟಲ್ ಕುರಿತು ವಿವರಣೆ ನೀಡಿದರು.

ಕಾರ್ಯಕ್ರಮವನ್ನು ಅಕ್ಷತಾ ನಿರೂಪಿಸಿದರೆ ಚೇತನ್ ಎಸ್. ಬ್ಯಾನಿ ಗೌಡ್ರು ಸ್ವಾಗತಿಸಿದರು ನಾಗರಾಜ್ ವಂದಿಸಿದರು ವಂದನ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದೇವೇಂದ್ರಪ್ಪ ಶಿವಕುಮಾರಿ ಉನ್ನತಿ ಶಿಕ್ಷಣ ಸಂಸ್ಥೆಯ ಪವನ್ ಹಾಗೂ ಅಪೂರ್ವ ಉಪಸ್ಥಿತರಿದ್ದರು.

error: Content is protected !!