ದಾವಣಗೆರೆ, ಜು.13- ಸಮಾಜ ದಲ್ಲಿ ಉತ್ತಮ ಸ್ಥಾನದಲ್ಲಿರುವ ವಿದ್ಯಾರ್ಥಿಗಳು, ತಾವು ಓದಿದ ಕಾಲೇಜು ಅಭಿವೃ ದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವೆಂಕಟೇಶ್ ಬಾಬು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ನ ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಪಡೆದ ನಂತರ ನಮಗೆ ಯಾರಾದರೂ ಸಹಾಯ ಮಾಡುತ್ತಾರೆ, ಯಾರಿಂದಲಾದರೂ ನಾವು ಮೇಲೆ ಬರುತ್ತೇವೆ ಎಂಬ ಕಲ್ಪನೆಯಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ, ನಮಗೆ ನಾವೇ ಗುರುಗಳಾಗಿ ಜೀವನವನ್ನು ರೂಪಿಸುವಲ್ಲಿ ತಲ್ಲೀನರಾಗಬೇಕು. ಜೀವನ ರೂಪುಗೊಂಡ ನಂತರ ನಾವು ಓದಿದ ಕಾಲೇಜಿಗೆ ಮತ್ತು ಅಲ್ಲಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದಾಗ ಕಾಲೇಜುಗಳು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಹಳೇ ವಿದ್ಯಾರ್ಥಿಗಳ ಜೊತೆಗೆ ಪ್ರಸ್ತುತ ವಿದ್ಯಾರ್ಥಿಗಳು ಜೊತೆಗೂಡಿದರೆ ಇನ್ನಷ್ಟು ಉತ್ತಮವಾದ ಕಾರ್ಯಗಳನ್ನು ಮಾಡಿ ಸರ್ಕಾರಿ ಮಹಿಳಾ ಕಾಲೇಜನ್ನು ಮಾದರಿಯಾಗಿ ರೂಪಿಸಬಹುದು ಎಂದು ಅಭಿಪ್ರಾಯಪಟ್ಟರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕರಿಬಸಪ್ಪ ಮಾತನಾಡಿ, ತಾವು ಓದಿದ ಶಾಲೆಗೆ ಕೊಡುಗೆ ನೀಡಿದಾಗ ಅದು ಸಾರ್ಥಕ ಜೀವನವಾಗುತ್ತದೆ ಎಂದು ಹೇಳಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವರಾಜ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶು ಪಾಲರಾದ ಪ್ರೊ. ಶೈಲಜಾ ಮಾತನಾಡುತ್ತಾ, ಹಳೇ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳ ಜೊತೆ ಸೇರಿದಾಗ ಉತ್ತಮ ಆಲೋಚನೆ ಬರುತ್ತವೆ ಹಾಗೆ ತಮ್ಮ ಅನುಭವಗಳನ್ನು ಪಸರಿಸಿದಾಗ ಅವರಿಗೂ ಕೂಡ ಪ್ರೋತ್ಸಾಹವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿ ಸಂಘದ ಸಂಚಾಲಕರಾದ ಅನುರಾಧ ಜಿ.ಎಸ್., ಕನ್ನಡ ವಿಭಾಗದ ಕಾವ್ಯಶ್ರೀ, ಅಧೀಕ್ಷಕ ಶೇಷಪ್ಪ, ಹಳೆ ವಿದ್ಯಾರ್ಥಿಗಳಾದ ನಾಗಮಣಿ ಮತ್ತು ಕಾವ್ಯ ಉಪಸ್ಥಿತರಿದ್ದರು