ಮಲೇಬೆನ್ನೂರು, ಜು.13- ಮಕ್ಕಳಿಗೆ ಈಗಿನಿಂದಲೇ ಚುನಾವಣಾ ನೀತಿಗಳನ್ನು ಹೇಳಿಕೊಡಬೇಕಾಗಿದೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.
ಬೆಳ್ಳೂಡಿ ಶಾಖಾಮಠದಲ್ಲಿ ನಡೆಯುತ್ತಿರುವ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯಲ್ಲಿ ಇಂದು ನಡೆದ ಮಕ್ಕಳ ಚುನಾವಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.
ಮಕ್ಕಳು ಅಭ್ಯರ್ಥಿಗಳಾಗಿದ್ದಾರೆ, ಇದು ಯಾವುದೇ ರೀತಿಯ ಚುನಾವಣೆಯಾಗಿರದೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಭಾ ನಾಯಕರನ್ನು ಆರಿಸಿಕೊಳ್ಳಲು ನಡೆಸಿದ ಅಪ್ಪಟ ಜನ ತಾಂತ್ರಿಕತೆಯಾಗಿ ಕಂಡುಬರುತ್ತದೆ ಮತ್ತು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ನೀತಿಗಳನ್ನು ಅರಿಯಲು ನೆರವಾಗಿದೆ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಚಂದ್ರಗುಪ್ತ ಮೌರ್ಯ ಪಬ್ಲಿಕ್ ಸ್ಕೂಲ್ನ ಕಾರ್ಯದರ್ಶಿ ಎಸ್. ನಿಂಗಪ್ಪ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯ ಮತದಾನದ ಮಹತ್ವ ಹಾಗೂ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣ ಬೆಳೆಸುವ ಸಲುವಾಗಿ ಶಾಲಾ ಸಂಸತ್ ಮಂತ್ರಿಮಂಡಲ ಚುನಾವಣೆ ನಡೆಸಲಾಗುತ್ತಿದೆ. ಸಾರ್ವತ್ರಿಕ ಚುನಾವಣೆಯಂತೆ ಶಾಲಾ ಮಕ್ಕಳ ಚುನಾವಣೆ ನಡೆಯುತ್ತದೆ ಎಂದು ಹೇಳಿದರು.
ಶಾಲಾ ಶೈಕ್ಷಣಿಕ ನಿರ್ದೇಶಕರಾದ ಶ್ರೀಮತಿ ಡಾ. ಶೃತಿ ಇನಾಂದಾರ್ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು, ನಿಮ್ಮ ನೆಚ್ಚಿನ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿದೆ. ಆದರೆ ಚುನಾವಣೆಗಳನ್ನು ಏಕೆ ಮಾಡುತ್ತಾರೆ? ಹೇಗೆ ನಡೆಯುತ್ತದೆ? ಚುನಾವಣೆಯಲ್ಲಿ ಆಯ್ಕೆಯಾಗಿ ಬರುವವರು? ಮಾಡಬೇಕಾಗಿರುವ ಕೆಲಸಗಳೇನು? ಎನ್ನುವ ಕುರಿತು ಮಾಹಿತಿ ಮಕ್ಕಳಿಗೆ ತಿಳಿಸುವ ಅಗತ್ಯವಾಗಿದೆ ಎಂದರು.