ಜೀವನದಲ್ಲಿ ಸಪ್ತ ಸೂತ್ರಗಳನ್ನು ಅಳವಡಿಸಿಕೊಳ್ಳಲು ಕರೆ

ಜೀವನದಲ್ಲಿ ಸಪ್ತ ಸೂತ್ರಗಳನ್ನು ಅಳವಡಿಸಿಕೊಳ್ಳಲು ಕರೆ

ದಾವಣಗೆರೆ, ಜೂ.13- ಸತ್ಯ, ಶುದ್ಧ ಕಾಯಕದಿಂದ ಕೂಡಿದ 12ನೇ ಶತಮಾನದ ಬಸವಣ್ಣನವರ `ಸಪ್ತ ಸೂತ್ರಗಳನ್ನು’ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಿವೃತ್ತ ಪ್ರಾಂಶುಪಾಲ ಪ್ರೊ. ಅಮರ ಕಲಾ ಹಿರೇಮಠ್ ಕರೆ ನೀಡಿದರು .

ನಗರದ ಲೇಬರ್ ಕಾಲೋನಿಯಲ್ಲಿರುವ ನಾಗೂರು ಅಡಿವೆಪ್ಪನವರ ಮನೆಯಲ್ಲಿ ಏರ್ಪಡಿಸಿದ್ದ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರಂಗದ  ಚಿತ್ ಕಳೆಯನ್ನು ಇಷ್ಟಲಿಂಗದ ಮೂಲಕ ನೀಡಿದ ಬಸವಣ್ಣನವರ ನಡೆ ನುಡಿ ಒಂದಾಗಿತ್ತು ಎಂದರು.

ನಾನೆಂಬ  ಅಹಂಕಾರದಿಂದ ಮನುಷ್ಯ ಹೊರ ಬರಬೇಕು. ಮನುಷ್ಯನಲ್ಲಿರುವ ತನು ಗುಣಗಳಿಂದ  ಹೊರಬರಬೇಕೆಂದರೆ ಬಸವಣ್ಣನವರು  `ಕಾಯಕದ ಕಲ್ಪನೆ’ಯನ್ನು ಕೊಟ್ಟರು. ಇದರಿಂದ ಮನುಷ್ಯ ಸಮಾಜದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು, `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಸಪ್ತ ಸೂತ್ರಗಳನ್ನು  ಅಳವಡಿಸಿಕೊಂಡು ಪ್ರಾಮಾಣಿಕ ಜೀವನ ನಡೆಸಬೇಕೆಂದರು.

ನಾವು ಏನೇ ಕೆಲಸ ಮಾಡಿದರೂ ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಬೇಕು. ಮತ್ಸರ ಭಾವನೆಯಿಂದ ಮನುಷ್ಯ ಹೊರ ಬರಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಸವ ಬಳಗದ ಅಧ್ಯಕ್ಷ  ಹುಚ್ಚಪ್ಪ ಮೇಷ್ಟ್ರು ಮಾತನಾಡಿ, 12ನೇ ಶತಮಾನದ ಶ್ರೀ ಬಸವಣ್ಣನವರ ಅನುಭವ ಮಂಟಪದ ಕಲ್ಪನೆಯಂತೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಪಾರ್ಲಿಮೆಂಟ್ ನಿರ್ಮಿಸಿ, ಸಪ್ತಸೂತ್ರಗಳನ್ನು ಗೋಡೆಯ ಮೇಲೆ ಬರೆಸಿ ಹಾಕಿದ್ದಾರೆ. ಇದು ಶ್ಲ್ಯಾಘನೀಯ ಎಂದರು.  

ನ್ಯಾಯವಾದಿ ಅಶೋಕ್ ಬಣಕಾರ್ ಮಾತನಾಡಿ, ಶುದ್ಧ ಕಾಯಕದಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಅಂದಾಗ ಮನಸ್ಸು ಪ್ರಫುಲ್ಲವಾಗಿರುತ್ತದೆ ಎಂದರು.

ಶ್ರೀಮತಿ ಭುವನೇಶ್ವರಿ ತಾಯಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವೀರಪ್ಪ ಎಂ. ಬಾವಿ, ಶ್ರೀ ಅನ್ನದಾನೀಶ್ವರ ಮಠದ ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ, ಪ್ರಧಾನ ಕಾರ್ಯದರ್ಶಿ ಎನ್‌. ಅಡಿವೆಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಶ್ರೀಮತಿ ವೇದಾ, ಶ್ರೀಮತಿ ಶಿವಲೀಲಾ ಇವರುಗಳು ಶ್ರೀ ಬಸವ ಧ್ವಜಾರೋಹಣ ಮಾಡಿದರೆ, ಶ್ರೀಮತಿ ವೀಣಾ ಮಂಜುನಾಥ್  ಕಾರ್ಯಕ್ರಮ ನಿರೂಪಿಸಿದರು. ನಾಗೂರು ಅಡಿವಪ್ಪ ವಂದಿಸಿದರು.

error: Content is protected !!