ಮಲೇಬೆನ್ನೂರು, ಜು.13- ಕುಂಬಳೂರು ಗ್ರಾಮದಲ್ಲಿ ಜಮೀನಿಗೆ ತೆರಳುವ ಮಾರ್ಗದ ರಸ್ತೆಯನ್ನು ರೈತರೇ ಸ್ವಯಂ ಪ್ರೇರಿತರಾಗಿ ಸ್ವಂತ ಹಣದಲ್ಲಿ ಅಭಿವೃಧ್ದಿ ಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗ್ರಾಮದ ತೋಟದ ಹಳ್ಳದ ರಸ್ತೆಯು ಒತ್ತುವರಿಯಾಗಿದ್ದು, ಭೂ ಅಳತೆ ಅಧಿಕಾರಿಗಳು ಇತ್ತೀಚೆಗೆ ಅಳತೆ ಮಾಡಿದ್ದು, ಒತ್ತುವರಿ ಮಾಡಿರುವುದು ಸೇರಿ ಹೆಚ್ಚುವರಿ ನಾಲ್ಕು ಗುಂಟೆ ಜಮೀನು ರಸ್ತೆಗೆ ಬಂದಿದ್ದು, ನೂರಾರು ರೈತರ 350ಕ್ಕೂ ಹೆಚ್ಚು ಎಕರೆಗೆ ಸಂಚರಿಸುವ ಮಾರ್ಗವು ಈಗ ಸುಗಮವಾಗಿದ್ದು ರೈತರು ನಿರಾತಂಕವಾಗಿದ್ದಾರೆ.
ಸರ್ಕಾರದ ಅನುದಾನವಿಲ್ಲದೇ ರೈತರ ವಾಹನಗಳಲ್ಲಿ ರಸ್ತೆ ಪಕ್ಕದಲ್ಲಿ ಕಲ್ಲು ಕಟ್ಟಡ ಹಾಗೂ ರಸ್ತೆಗೆ ಗ್ರಾವೆಲ್ ಸೇರಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸ್ವತಃ ರೈತರೇ ಮೂರು ಲಕ್ಷ ರೂ. ವೆಚ್ಚ ಭರಿಸಿದ್ದು ಸತತ ಮಳೆಯಲ್ಲಿಯೇ ನಾಲ್ಕು ದಿನಗಳ ಕಾಲ ಕಾಮಗಾರಿ ಮಾಡಿದ್ದಾರೆ. ಪ್ರತಿ ಬಾರಿಯೂ ಭತ್ತ ನಾಟಿ ಮಾಡುವಾಗ ಮತ್ತು ಭತ್ತ ಕಟಾವು ಸಂದರ್ಭದಲ್ಲಿ ಇಲ್ಲಿ ರಸ್ತೆ ಸಮಸ್ಯೆಯಾಗುತ್ತಿತ್ತು. ಈಗ ರಸ್ತೆ ಸಮಸ್ಯೆ ಇತ್ಯರ್ಥವಾಗಿದೆ ಎಂದು ರೈತ ಎನ್. ಲೋಕೇಶ್ ಪತ್ರಿಕೆಗೆ ತಿಳಿಸಿದರು.