ಮಡಿಕಟ್ಟೆ, ವಿದ್ಯಾರ್ಥಿ ನಿಲಯಗಳಿಗೆ ಅನುದಾನ ಬಿಡುಗಡೆಗೆ ಮನವಿ

ಮಡಿಕಟ್ಟೆ, ವಿದ್ಯಾರ್ಥಿ ನಿಲಯಗಳಿಗೆ ಅನುದಾನ ಬಿಡುಗಡೆಗೆ ಮನವಿ

ದಾವಣಗೆರೆ, ಜು.10- ಮಡಿಕಟ್ಟೆ ನಿರ್ವಹಣೆ, ಕಟ್ಟಡ ದುರಸ್ತಿ, ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಅನುದಾನ, ನೂತನ ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಹೊಸದಾಗಿ ಅನುದಾನ ನೀಡುವಂತೆ ಆಗ್ರಹಿಸಿ, ಜಿಲ್ಲಾ ಮಡಿವಾಳ ಮಾಚಿದೇವ ಸಂಘ, ಹಾಗೂ ದಾವಣಗೆರೆ ಧೋಬಿಘಾಟ್ ವೃತ್ತಿಪರ ಮಡಿವಾಳರ ಸಂಘವು ಜಂಟಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಇಂದು ಮನವಿ ಸಲ್ಲಿಸಿತು.

ಜಿಲ್ಲಾ ಪಂಚಾಯತಿ ಆಫೀಸ್ ಮುಂಭಾಗ ದೋಭಿ ಘಾಟಿಗೆ ಈ ಹಿಂದೆ ಮಲ್ಲಿಕಾರ್ಜುನ್ ಅವರು ಜಿಲ್ಲಾ ಸಚಿವರಾಗಿದ್ದಾಗ 1.5 ಕೋಟಿ ರೂ.ಗಳಲ್ಲಿ ಸುಸಜ್ಜಿತ ಕಟ್ಟಡ, ಬಟ್ಟೆ ತೊಳೆಯಲು ಅನುಕೂಲ ಆಗುವಂತೆ ಮಡಿಕಟ್ಟೆ ನಿರ್ಮಿಸಲಾಗಿತ್ತು. ಆದರೆ ಕಟ್ಟಡ ಬಳಕೆ, ಸೂಕ್ತ ನಿರ್ವಹಣೆ ಇಲ್ಲದೇ ಶಿಥಿಲ ಆಗುತ್ತಿದ್ದು, ಸ್ಥಳ ಪರಿಶೀಲನೆ ಮಾಡಿ ಅವಶ್ಯವಿರುವ ಬಟ್ಟೆ ತೊಳೆಯುವ ಯಂತ್ರ ಮತ್ತು ಕಟ್ಟಡ ದುರಸ್ತಿ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಡಲು ಅವಶ್ಯವಿರುವ ಅನುದಾನವನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಮಡಿವಾಳ ಸಮಾಜದ ವಿದ್ಯಾರ್ಥಿ ಗಳ ವಸತಿ ನಿಲಯದ ನಿರ್ಮಾಣ ನಿಧಾನವಾಗಿ ಸಾಗುತ್ತಿದ್ದು, ಅದನ್ನು ಪೂರ್ಣಗೊಳಿಸಲು 1.5 ಕೋಟಿಗೂ ಅಧಿಕ ಹಣ ಅವಶ್ಯಕತೆ ಇದೆ. ಕಾರಣ ಸಚಿವರು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಸಚಿವರಿಗೆ ಸೂಚಿಸಿ, ಅವಶ್ಯವಿರುವ ಹಣವನ್ನು ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು. ಇದಲ್ಲದೇ, ಮಹಿಳಾ ವಿದ್ಯಾರ್ಥಿ ನಿಲಯ ಜೆ.ಹೆಚ್. ಪಟೀಲ್ ಬಡಾವಣೆಯಲ್ಲಿ ಇದ್ದು, ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು 3 ಕೋಟಿ ಹಣದ ಅಗತ್ಯ ಇದ್ದು, ಈ ಅನುದಾನವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿ ಹಣ ಮಂಜೂರು ಮಾಡಿಸಿಕೊಡಬೇಕೆಂದು ವಿನಂತಿಸಿದರು.

ಈ ವೇಳೆ ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್, ಉಪಾಧ್ಯಕ್ಷ ಜಿ.ವಿಜಯ್‍ಕುಮಾರ್, ನಿರ್ದೇಶಕ, ಮಾಧ್ಯಮ ಸಲಹೆಗಾರ ಎಂ.ವೈ.ಸತೀಶ್, ಮಡಿಕಟ್ಟೆಯ ಅಧ್ಯಕ್ಷ ಜಿ.ಕಿಶೋರ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಬಸವರಾಜ್, ಹನುಮಂತಪ್ಪ, ಎಂ.ರವಿಕುಮಾರ್, ಲಿಂಗರಾಜ್, ಸಂಜು ಇತರರು ಇದ್ದರು.

error: Content is protected !!