ಪದವಿ ನಂತರ ಹಲವು ಅವಕಾಶಗಳಿವೆ

ಪದವಿ ನಂತರ ಹಲವು ಅವಕಾಶಗಳಿವೆ

ದಾವಣಗೆರೆ, ಜು. 3- ಸ್ನಾತಕ ಪದವಿ  ನಂತರ ವಿದ್ಯಾರ್ಥಿ ಗಳಿಗೆ ಹಲವಾರು ಅವಕಾಶಗಳಿವೆ. ಅವುಗಳನ್ನು ಬಳಸಿ ಉನ್ನತ ಶಿಕ್ಷಣ ಪಡೆಯುವಂತವರಾಗಬೇಕು. ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ಕಡ್ಡಾಯವಾದಾಗ ವ್ಯಕ್ತಿಯ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವೆಂಕಟೇಶ್ ಬಾಬು ಹೇಳಿದರು. 

ಅವರು ನಗರದ ಚಾಣಕ್ಯ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಇಂದು ಆಯೋಜಿಸಿದ್ದ ಪದವಿ ನಂತರ ಮುಂದೇನು? ಕಾರ್ಯಕ್ರಮದಲ್ಲಿ ಮಾತನಾಡಿದರು.

ಪದವಿ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮೂರು ಅವಕಾಶಗಳಿವೆ. ಉನ್ನತ ಶಿಕ್ಷಣ,  ಕೆಲಸ, ಮತ್ತು  ಸ್ವಂತ ವ್ಯವಹಾರ ಆರಂಭಿಸುವುದು. ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಆರ್ಥಿಕ ಪರಿಸರಕ್ಕೆ ಹೊಂದಿಕೊಳ್ಳುವಂತೆ ನಿರ್ಧಾರವನ್ನು ಕೈಗೊಳ್ಳಬೇಕು. ಅನಿವಾರ್ಯವಿದ್ದರೆ ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಯೋಚಿಸಿ ಉತ್ತಮ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯಬೇಕು. ಉತ್ತಮ ಉದ್ಯೋಗ ಹೊಂದಿದಾಗ ಉತ್ತಮವಾದ ಸುಗಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸದ ಮೇಲೆ ವ್ಯಾಮೋಹ ಹೆಚ್ಚು. ಆದರೆ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ಕಷ್ಟ. ಅದು ಸಾಧ್ಯವೂ ಆಗುವುದಿಲ್ಲ. ಹಾಗಾಗಿ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವವರು ನಿಷ್ಠೆಯಿಂದ ಕಷ್ಟಪಟ್ಟು ಅದನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು. ಇಲ್ಲದೇ ಹೋದರೆ ಅದೇ ಜೀವನವಲ್ಲ ಎಂಬುದನ್ನು ಅರಿತು, ಇತರೆ ಖಾಸಗಿ ವಲಯದಲ್ಲಿ ಉತ್ತಮವಾದ ಕೆಲಸ, ಸಂಬಳ ಎರಡೂ ದೊರೆಯುತ್ತದೆ. ಅದಕ್ಕಾಗಿ ಒಂದಿಷ್ಟು ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ ಕೆ. ರಾಜಶೇಖರ್ ಹಾಗೂ ಡೀನ್ ಬಿ ಆರ್ ಟಿ ಸ್ವಾಮಿ ಭಾಗವಹಿಸಿದ್ದರು.

error: Content is protected !!