ಹರಿಹರ, ಜು. 18 – ನಗರದ ಸಾರ್ವಜನಿಕ ಗ್ರಂಥಾಲಯ ಆವರಣದ ಪಕ್ಕದಲ್ಲಿನ ಜನತಾ ಬಜಾರ್ಗೆ ಸೇರಿದ ನಿವೇಶನ ಕಸದ ತಿಪ್ಪೆಯಾಗಿರುವ ಬಗ್ಗೆ ಆಕ್ಷೇಪಿಸಿರುವ ಶಾಸಕ ಬಿ.ಪಿ. ಹರೀಶ್, ಈ ಜಾಗವನ್ನು ಬಳಸಿಕೊಳ್ಳುವಂತೆ ಜನತಾ ಬಜಾರ್ಗೆ ಸೂಚಿಸಿದ್ದಾರೆ. ನಿವೇಶನದಲ್ಲಿ ಕಸದ ರಾಶಿ ಇರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಜನತಾ ಬಜಾರ್ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಈ ಜಾಗದಲ್ಲಿ ಕಟ್ಟಡ ನಿರ್ಮಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಹನುಮಂತಪ್ಪ, ಆರೋಗ್ಯ ಇಲಾಖೆ ರವಿಪ್ರಕಾಶ್, ಸಂತೋಷ್, ಮುಖಂಡರಾದ ಸುನಿಲ್ ರಾವ್ ಇತರರು ಹಾಜರಿದ್ದರು.