ಹರಿಹರ, ಜೂ.18 – ಅಮವಾಸ್ಯೆ ಪ್ರಯುಕ್ತ ಹರಿಹರ ನಗರದಿಂದ ಉಕ್ಕಡಗಾತ್ರಿ ದೇವಸ್ಥಾನಕ್ಕೆ ತೆರಳುವ ಭಕ್ತರು ಬಸ್ಗಳು ಸಿಗದೇ ತಡರಾತ್ರಿಯವರೆಗೆ ಕಾದು ಕುಳಿತ ಘಟನೆ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಿಲ್ದಾಣದ ಆವರಣದಲ್ಲಿ ಕಾದು ಕುಳಿತಿದ್ದರು. ಇವರಿಗೆ ಸರಿಯಾದ ರೀತಿಯಲ್ಲಿ ಬಸ್ ವ್ಯವಸ್ಥೆ ಮಾಡುವುದಕ್ಕೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿಲ್ಲದೇ ಇರುವುದು ಕಂಡುಬಂದಿತು. ಈ ಬಗ್ಗೆ ಕೋಪಗೊಂಡ ಪ್ರಯಾಣಿಕರು ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಿಪೋ ಮ್ಯಾನೇಜರ್ ಸಂದೀಪ್, ಪ್ರತಿ ತಿಂಗಳು ಅಮಾವಾಸ್ಯೆ ಪ್ರಯುಕ್ತ ಉಕ್ಕಡಗಾತ್ರಿ ದೇವಸ್ಥಾನಕ್ಕೆ 25 ಬಸ್ ವ್ಯವಸ್ಥೆ ಮಾಡ ಲಾಗುತ್ತದೆ. ಆದರೆ, ಈಗಾಗಲೇ ಹೋಗಿರುವ ಬಸ್ಗಳು ಬರಬೇಕು. ನಂತರ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇಂತಿಷ್ಟು ಸಮಯಕ್ಕೆ ಬಿಡಲಾಗುತ್ತದೆ ಎಂದು ನಿಖರವಾಗಿ ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.