ರಾಣೇಬೆನ್ನೂರು,ಜೂ.13- ಇಲ್ಲಿನ ಸರ್ಕಾರಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ಗೃಹಗಳಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಿಸಲಾಗುತ್ತದೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ.
ನಗರದ ಹೊರವಲಯದ ಶಬರಿ ನಗರದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಸ್ಥಳೀಯ ಅಧಿಕಾರಿಗಳು ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದು. ವಿದ್ಯಾರ್ಥಿ ಹಾಗೂ ವಾರ್ಡನ್ ರ ಮಧ್ಯೆ ಪ್ರತಿದಿನ ತಂಟೆ ತಕರಾರುಗಳು ನಡೆಯತ್ತಿರುತ್ತವೆ. ಮಾನವೀಯತೆಯನ್ನು ಮರೆತು, ಕೇವಲ ಸ್ವಾರ್ಥಿಗಳಾಗಿರುವ ಇಂತಹ ಅಧಿಕಾರಿ ಹಾಗೂ ನೌಕರರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು.
ವಿದ್ಯಾರ್ಥಿ ಸಂಘಟನೆಗಳು ಈ ಕುರಿತು ಅನೇಕ ಬಾರಿ ಶಾಸಕರ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂದು, ಇದು ಬದಲಾಗದಿದ್ದರೆ ತಮಗಾಗುತ್ತಿರುವ ಅನ್ಯಾಯದ ವಿರುದ್ದ ತೀವ್ರ ಸ್ವರೂಪದ ಹೋರಾಟ ಮಾಡುವ ಸಿದ್ದತೆ ವಿದ್ಯಾರ್ಥಿಗಳಿಂದ ನಡೆದಿದೆ ಎಂದು ಗೊತ್ತಾಗಿದೆ.
ಯುವ ಶಕ್ತಿಯ ಪರ ಅತ್ಯಂತ ಕಾಳಜಿ ವಹಿಸುವ ನೂತನ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೂ, ಸರ್ಕಾರಕ್ಕೂ, ಜಿಲ್ಲೆಯ ಅಧಿಕಾರಿಗಳಿಗೂ, ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದು, ಶಾಸಕರಿಂದ ತೀವ್ರ ಕ್ರಮ ಜರುಗಬೇಕಿದೆ ಎನ್ನುವುದು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಬಲವಾದ ಬೇಡಿಕೆಯಾಗಿದೆ.