ರಾಣೇಬೆನ್ನೂರಿನಲ್ಲಿ `ಶಕ್ತಿ’ ಯೋಜನೆ ಜಾರಿ

ರಾಣೇಬೆನ್ನೂರಿನಲ್ಲಿ `ಶಕ್ತಿ’ ಯೋಜನೆ ಜಾರಿ

ರಾಣೇಬೆನ್ನೂರು, ಜೂ.11- ಕಾಂಗ್ರೆಸ್ ಪಕ್ಷದ ಸರ್ಕಾರ ಮುಖ್ಯ ಮಂತ್ರಿ ಸಿದ್ರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನುಡಿದಂತೆ ನಡೆಯುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ಅವರು  ವಾಯವ್ಯ ಸಾರಿಗೆ ನಿಲ್ದಾಣದ ಬಳಿ `ಶಕ್ತಿ ಯೋಜನೆ’ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಸಾರಿಗೆ ಇಲಾಖೆ ಗುರುತಿನ ಚೀಟಿ ಕೊಡುವವರೆಗೆ ಸರ್ಕಾರ ನೀಡಿರುವ ಆಧಾರ್‌ ಮುಂತಾದ ಗುರುತಿನ ಚೀಟಿಗಳನ್ನು  ಮಹಿಳೆ ಯರು,  ಶಾಲಾ-ಕಾಲೇಜು ವಿದ್ಯಾರ್ಥಿನಿಯರು  ತಮ್ಮ ಬಳಿ ಇಟ್ಟು ಕೊಂಡು ಪ್ರಯಾಣಿಸಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿನೂತನವಾದ, ಜನಪ ರವಾದ ಆಡಳಿತ ನಡೆಸುತ್ತಿದೆ. ಎಲ್ಲ ಗ್ಯಾರಂಟಿಗಳನ್ನು ಖಂಡಿತ ವಾಗಿಯೂ ಜಾರಿಗೆ ತರುತ್ತೇವೆ. ಆಕಸ್ಮಿಕವಾಗಿ ಆಗುವ ತಾಂತ್ರಿಕ ಅಡಚಣೆಗಳಿಗೆ ಜನತೆ ಸಹಕಾರ ನೀಡಿ, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಾಸಕರು ಮನವಿ ಮಾಡಿದರು.

ವೇದಿಕೆಯಲ್ಲಿ  ತಾಪಂ, ಶಿಕ್ಷಣ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು, ಶಾಸಕರ ಪತ್ನಿ ಪೂರ್ಣಿಮಾ ಕೋಳಿವಾಡ ಮತ್ತಿತರರಿದ್ದರು.

ಹರ್ಷೋದ್ಘಾರ..

ಕಾರ್ಯಕ್ರಮದ ನಂತರ ಶಾಸಕರಿಂದ ಜೀರೋ ದರದ ಟಿಕೆಟ್ ಪಡೆದು ಶೃಂಗರಿಸಿದ ಬಸ್‌ನಲ್ಲಿ ಹಲಗೇರಿಗೆ ಪ್ರಯಾಣಿಸಿದ ಮಹಿಳೆಯರು  ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ ಹಾಗೂ ಶಾಸಕ ಪ್ರಕಾಶ್‌ ಕೋಳಿವಾಡ ಅವರಿಗೆ ಜೈಕಾರ ಹಾಕಿದರೆ, ಯುವತಿಯರು ಮುಂದೆ ಬನ್ನಿ, ಮುಂದೆ ಬನ್ನಿ ಎನ್ನುವ  ಕಮಲ ಹಾಸನ್ ಚಿತ್ರದ ಗೀತೆ ಹಾಡುತ್ತಾ ಕುಣಿದು ಕುಪ್ಪಳಿಸಿದರು. ತಾಲ್ಲೂಕಿನ ಎಲ್ಲ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಗ್ರಾಮಗಳಲ್ಲಿ ಬಸ್‌ಗಳಿಗೆ ಪೂಜೆ ಸಲ್ಲಿಸಿದ್ದು ಕಂಡುಬಂದಿತು.

error: Content is protected !!