ಚಿರತೆ ದಾಳಿ : ಮಾಲೀಕನನ್ನು ಕಾಪಾಡಿದ ಹಸು

ಚಿರತೆ ದಾಳಿ : ಮಾಲೀಕನನ್ನು ಕಾಪಾಡಿದ ಹಸು

ಚನ್ನಗಿರಿ, ಜೂ. 9- ದಿಢೀರ್ ನಡೆದ ಚಿರತೆ ದಾಳಿಯಿಂದ ಹಸುವೊಂದು ತನ್ನ ಮಾಲೀಕನನ್ನು ರಕ್ಷಿಸಿದ ಘಟನೆ ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕೊಡಕಿಕೆರೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ.

ಕೊಡಕಿಕೆರೆ ನಿವಾಸಿ ಕರಿಹಾಲಪ್ಪ (58) ತಮ್ಮ ಹಸುವನ್ನು ಮೇಯಿಸಲು ಗ್ರಾಮದ ಸನಿಹದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಿದ್ದರು. ಈ ವೇಳೆ ಪೊದೆ ಯೊಂದರಲ್ಲಿ ಅಡಗಿ ಕುಳಿತಿದ್ದ ಚಿರತೆಯು ಅವರ ಮೇಲೆ ದಿಢೀರ್‌ ದಾಳಿ ನಡೆಸಿದೆ. ಇದನ್ನು ಕಂಡು ಓಡಿಬಂದ ಹಸು, ಕೊಂಬಿನಿಂದ ಚಿರತೆಗೆ ತಿವಿದು ಅದನ್ನು ಓಡಿಸಿ ಕರಿಹಾಲಪ್ಪ ಅವರನ್ನು ರಕ್ಷಿಸಿದೆ.

ಚಿರತೆಯು ಏಕಾಏಕಿ ನನ್ನ ಮೇಲೆ ಎರಗಿ ಬೆನ್ನು ಮತ್ತು ಕೈಯ್ಯನ್ನು ಪರಚಿತು. ಕೈಯಲ್ಲಿದ್ದ ಕೋಲಿನಿಂದ ಹೊಡೆದು ಅದನ್ನು ಓಡಿಸಲು ಪ್ರಯತ್ನಿಸಿದೆ. ಆದರೆ ಚಿರತೆ ಬೆದರದೆ ದಾಳಿ ಮುಂದುವರೆಸಿತ್ತು. ಸನಿಹದಲ್ಲೇ ಮೇಯುತ್ತಿದ್ದ ಹಸು ನನ್ನ ಅಸಹಾಯಕತೆ ಕಂಡು ನೆರವಿಗೆ ಧಾವಿಸಿ, ಕೊಂಬಿನಿಂದ ತಿವಿಯುತ್ತಿದ್ದಂತೆಯೇ ಹೆದರಿದ ಚಿರತೆಯು ಸ್ಥಳದಿಂದ ಕಾಲ್ಕಿತ್ತಿತು. ಹಸುವಿನಿಂದಾಗಿ ನನ್ನ ಜೀವ ಉಳಿಯಿತು ಎಂದು ಕರಿಹಾಲಪ್ಪ  ಹೇಳಿದ್ದಾರೆ.

 ಪ್ರಾಣಿಗಳು ಆಹಾರ ಮತ್ತು ನೀರು ಅರಸಿ ಕಾಡಂಚಿನ ಗ್ರಾಮಗಳಿಗೆ ಬರುತ್ತಿವೆ. ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದು, ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಚ್. ಸತೀಶ್ ಹೇಳಿದ್ದಾರೆ.

error: Content is protected !!