ಹರಪನಹಳ್ಳಿ, ಡಿ.17- ಕನ್ನಡ ಧ್ವಜ ಸುಟ್ಟು ಹಾಕಿರುವ ಶಿವಸೇನೆ ಹಾಗೂ ಎಂಇಎಸ್ ಸಂಘಟನೆ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಮರ ಸೇನೆ ವತಿಯಿಂದ ಪ್ರತಿಭಟನೆ ಮಾಡಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಸಮರ ಸೇನೆಯ ತಾಲ್ಲೂಕು ಅಧ್ಯಕ್ಷ ಟಿ. ಶಿವರಾಜ ಮಾತನಾಡಿ, ಕರ್ನಾಟಕದಲ್ಲಿ ಇದ್ದುಕೊಂಡು ಕಾರವಾರ, ನಿಪ್ಪಾಣಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಕನ್ನಡಿಗರ ವಿರುದ್ಧ ನಿಂತು ನಾಡ ದ್ರೋಹ ಕೆಲಸ ಮಾಡುತ್ತಿರುವ ಶಿವಸೇನೆ ಕಾರ್ಯಕರ್ತರು ಪದೇ ಪದೇ ಕನ್ನಡಿಗರನ್ನು ಕೆಣಕುತ್ತಿರುವುದು ಖಂಡನೀಯ.
ಸಂಪತ್ ದೇಸಾಯಿಯವರು ಎಂಇಎಸ್ ಮುಖಂಡ ದೀಪಕ್ ಮಾಳ್ವಿ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಆದರೆ ಯಾವುದೇ ರೀತಿಯ ಹಲ್ಲೆ ಮಾಡದಿದ್ದರೂ ಅವರನ್ನು ಬೆಳಗಾವಿ ಪೊಲೀಸರು ಪ್ರಕರಣ ದಾಖಲು ಮಾಡಿ ಬಂಧಿಸಿರುವುದು ಖಂಡನೀಯ.
ಕರ್ನಾಟಕ ಸಮರ ಸೇನೆಯ ತಾಲ್ಲೂಕು ಗೌರವ ಅಧ್ಯಕ್ಷ ಆರ್. ಪ್ರಕಾಶ ಮಾತನಾಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಸಮರ ಸೇನೆಯ ವಿಜಯನಗರ ಜಿಲ್ಲಾಧ್ಯಕ್ಷ ವೀರಯ್ಯಸ್ವಾಮಿ, ತಾಲ್ಲೂಕು ಉಪಾಧ್ಯಕ್ಷ ಕೆ.ಎಂ. ವೀರೇಶ್, ಪ್ರಧಾನ ಕಾರ್ಯದರ್ಶಿ ಬಿ. ಅಂಜಿನಿ, ಜಿ. ಮಂಜು, ಸೇರಿದಂತೆ ಇತರರು ಇದ್ದರು.