ಜಯಮ್ಮ ಗೋಪಿನಾಯ್ಕ ಪಾಲಿಕೆ ನೂತನ ಮೇಯರ್

ಉಪ ಮೇಯರ್ ಆಗಿ ಗಾಯತ್ರಿಬಾಯಿ ಖಂಡೋಜಿರಾವ್, ಮೂರನೇ ಬಾರಿಯೂ ಬಿಜೆಪಿಗೆ ಗೆಲವು

ದಾವಣಗೆರೆ, ಫೆ.25- ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ  ಬಿಜೆಪಿಯ ಜಯಮ್ಮ ಗೋಪಿನಾಯ್ಕ ಹಾಗೂ ಉಪ ಮೇಯರ್  ಆಗಿ ಗಾಯತ್ರಿಬಾಯಿ ಖಂಡೋಜಿರಾವ್ ಆಯ್ಕೆಯಾಗಿದ್ದಾರೆ.

ಜಯಮ್ಮ ಅವರು 30ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಸಾಧಿಸಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 8ನೇ ವಾರ್ಡ್‌ನ ಗಾಯತ್ರಿ ಬಾಯಿ ಖಂಡೋಜಿರಾವ್ ಮೊದಲ ಬಾರಿಗೆ ಉಪ ಮೇಯರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಜಯಮ್ಮ ಗೋಪಿನಾಯ್ಕ ಹಾಗೂ ಕಾಂಗ್ರೆಸ್‌ನಿಂದ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರೆ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ಗಾಯತ್ರಿಬಾಯಿ ಖಂಡೋಜಿರಾವ್, ಕಾಂಗ್ರೆಸ್‌ನ ಶ್ವೇತಾ ಶ್ರೀನಿವಾಸ್ ಉಮೇದುವಾರಿಕೆ ಸಲ್ಲಿಸಿದ್ದರು.

ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳು ತಲಾ 29 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿಗಳು ತಲಾ 25 ಮತಗಳನ್ನು ಪಡೆದರು.

ಒಟ್ಟು 45 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯ 18 ಸದಸ್ಯರು, ಓರ್ವ ಸಂಸದ, ಓರ್ವ ಶಾಸಕ, ಐದು ಜನ ಎಂಎಲ್‍ಸಿ, ನಾಲ್ಕು ಪಕ್ಷೇತರರು ಸೇರಿ ಒಟ್ಟು 29 ಜನ ಮತದಾನ ಮಾಡಿದರು.

ಕಾಂಗ್ರೆಸ್ 21 ಸದಸ್ಯರು, ಓರ್ವ ಶಾಸಕ, ಇಬ್ಬರು ಎಂಎಲ್‍ಸಿ ಹಾಗೂ ಓರ್ವ ಪಕ್ಷೇತರ ಸೇರಿ ಒಟ್ಟು 25 ಜನ ಮತದಾನ ಮಾಡಿದರು.  ಜೆಡಿಎಸ್ ಸದಸ್ಯೆ ಗೈರು ಹಾಜರಾಗಿದ್ದರು.

ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಡಾ. ತೇಜಸ್ವಿನಿ ರಮೇಶ್, ಆರ್. ಶಂಕರ್, ಕೆ.ಪಿ. ನಂಜುಂಡಿ ಅವರುಗಳು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಆಗಮಿಸಿ,  ಜಿಎಂಐಟಿ ಅತಿಥಿ ಗೃಹಕ್ಕೆ ತೆರಳಿ, ನಂತರ ಪಾಲಿಕೆಗೆ ಆಗಮಿಸಿ ಮತ ಚಲಾಯಿಸಿದರು. ಮತ್ತೊಂದೆಡೆ ಬಿಜೆಪಿ ಸದಸ್ಯರು ಬಸ್‌ನಲ್ಲಿ ಒಟ್ಟಿಗೆ ಪಾಲಿಕೆ ಆವರಣಕ್ಕೆ ಬಂದರೆ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ರವೀಂದ್ರನಾಥ್ ನಂತರ ಆಗಮಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಇತ್ತ ಶಾಸಕ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಎಂ.ಎಲ್.ಸಿ.ಗಳಾದ ಯು.ಬಿ. ವೆಂಕಟೇಶ್, ಮೋಹನ್ ಕೊಂಡಜ್ಜಿ ಆಗಮಿಸಿದರೆ, ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಆಗಮಿಸಿದ್ದರು.  ಒಟ್ಟಾರೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಏಳು ಜನ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.

ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಅಧ್ಯಕ್ಷರುಗಳಾದ ರಾಜನಹಳ್ಳಿ ಶಿವಕುಮಾರ್, ಯಶವಂತರಾವ್ ಜಾಧವ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್ ಇತರರು ಚುನಾವಣಾ ಪ್ರಕ್ರಿಯೆ ಮುಗಿಯವವರೆಗೆ ಪಾಲಿಕೆ ಆವರಣದಲ್ಲಿದ್ದು ನೂತನ ಮೇಯರ್ ಅವರಿಗೆ ಅಭಿನಂದಿಸಿದರು.

error: Content is protected !!