ಗುಡ್ ಟಚ್, ಬ್ಯಾಡ್ ಟಚ್ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಿ

ಗುಡ್ ಟಚ್, ಬ್ಯಾಡ್ ಟಚ್ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಿ

ಹರಿಹರದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಂತೋಷ್ ಕುಮಾರ್

ಹರಿಹರ, ಫೆ. 24 – ಗುಡ್ ಟಚ್, ಬ್ಯಾಡ್ ಟಚ್ (ಮಮತೆಯ ಸ್ಪರ್ಶ, ದುರ್ಭಾವನೆಯ ಸ್ಪರ್ಶ) ಕುರಿತು ಮಕ್ಕಳಿಗೆ ಪೋಷಕರು ಹಾಗೂ ಶಿಕ್ಷಕರು ಜಾಗೃತಿ ಮೂಡಿಸಬೇಕೆಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಸಂತೋಷ್ ಕುಮಾರ್ ಹೇಳಿದರು.

ನಗರದ ಸಂತ ಅಲೋಶಿಯಸ್ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ 2024-25ನೇ ಸಾಲಿನ ಶಿಶುವಿಹಾರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತ ನಾಡಿದ ಅವರು, ಮುದ್ದು ಮಾಡುವ ನೆಪದಲ್ಲಿ ದುರ್ಭಾವನೆಯಿಂದ ಮಕ್ಕಳ ಖಾಸಗಿ ಭಾಗಗಳಿಗೆ ಸ್ಪರ್ಶಿಸುವುದನ್ನು ತಪ್ಪಿಸಬೇಕಿದೆ ಎಂದರು.

ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿತರು ಬಹುತೇಕ ಸಂಬಂಧಿಗಳು ಅಥವಾ ಪರಿಚಯಸ್ಥರೇ ಇರುತ್ತಾರೆ. ದುರ್ಭಾವನೆಯ ಸ್ಪರ್ಶವಾದಾಗ ಅದನ್ನು ಪ್ರತಿರೋಧಿಸುವುದನ್ನು ಮಕ್ಕಳಿಗೆ ಕಲಿಸುವ ಅಗತ್ಯವಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಇನಾಯತ್ ಉಲ್ಲಾ ಟಿ. ಮಾತನಾಡಿ, ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆತರೆ, ಮಕ್ಕಳು ಶೈಕ್ಷಣಿಕವಾಗಿ ಪ್ರಬಲರಾಗಿ ಬೆಳೆಯುತ್ತಾರೆ. ಮನೆಯಲ್ಲಿ ಪೋಷಕರು ಕೂಡ ಮಕ್ಕಳು ಶಾಲೆಯಲ್ಲಿ ಕಲಿತು ಬಂದದ್ದನ್ನು ಪುನರ್ ಮನನ ಮಾಡಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ನಿರ್ದೇಶಕ ಫಾ. ಎರಿಕ್ ಮಥಾಯಸ್ ಮಾತನಾಡಿ, ಅತ್ಯುತ್ತಮ ಮೈದಾನ, ಕಟ್ಟಡ, ಕಲಿಕೋಪಕರಣ, ಗುಣಮಟ್ಟದ ಶಿಕ್ಷಕರು, ಶೈಕ್ಷಣಿಕ ವಾತಾವರಣ ಈ ಶಾಲೆಯಲ್ಲಿದೆ. ಪೋಷಕರಿಂದ ಪಡೆದ ಶುಲ್ಕವನ್ನು ಶಾಲಾಭಿ ವೃದ್ಧಿ, ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಬಳಕೆ ಮಾಡಲಾಗುತ್ತಿದೆ ಎಂದರು.

ಪ್ರಾಂಶುಪಾಲರಾದ ಸಿಸ್ಟರ್ ಶಾಂತಿ ಡೇವಿಡ್, ಪುಷ್ಪಲತಾ ಅರಸ್ ಹಾಗೂ ಉಪ ಪ್ರಾಂಶುಪಾಲ ಫಾ. ಎ.ಜೆ. ವಿನೋದ್, ಸಂಸ್ಥೆ ಆಡಳಿತಾಧಿಕಾರಿ ಫಾದರ್ ಜಾನ್ ಬ್ಯಾಪ್ಟಿಸ್ಟ್, ಶಿಕ್ಷಕ ಅಬ್ದುಲ್ ರೆಹಮಾನ್, ಮೌಸಿನ್ ಉಲ್ಲಾ, ಎಲ್.ಎಸ್. ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!