ಭಾರತದಲ್ಲಿ ಆಚರಿಸಲ್ಪಡುವ ಅನೇಕ ಹಬ್ಬಗಳಲ್ಲೊಂದಾಗಿರುವ ಮಹಾ ಶಿವರಾತ್ರಿಯು ವಿಶೇಷ ಮಹತ್ವವನ್ನು ಹೊಂದಿದ್ದು, ಇದರ ಬಗ್ಗೆ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಶಿವರಾತ್ರಿಯಲ್ಲಿನ `ರಾತ್ರಿ’ ಎಂಬ ಪದವು ಅಜ್ಞಾನದ ಅಂಧಕಾರ ಮತ್ತು ಅಧರ್ಮದಿಂದ ತುಂಬಿದ ಕತ್ತಲನ್ನು ಸೂಚಿಸುತ್ತದೆ. ವರ್ತಮಾನ ಸಮಯದಲ್ಲಿ ನೈತಿಕ, ಮಾನವೀಯ ಹಾಗೂ ಅಧ್ಯಾತ್ಮಿಕ ಮೌಲ್ಯಗಳ ಘೋರ ಅವಹೇಳನವಾಗುತ್ತಿದೆ. ಮನಸ್ಸು ವಿಕಾರಗಳಿಂದ ದೂಷಿತವಾಗಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೆಸೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಬ್ರಹ್ಮಾಕುಮಾರೀಸ್ ಸಂಸ್ಥೆಯು ಪ್ರಪಂಚದಾದ್ಯಂತ ಶಿವರಾತ್ರಿ ಹಬ್ಬವನ್ನು ಒಂದು ತಿಂಗಳು ಕಾಲ ನಡೆಸುತ್ತಿದ್ದು, ಸಂಸ್ಥೆಯ ದಾವಣಗೆರೆ ಶಾಖೆಯಿಂದಲೂ ದಾವಣಗೆರೆ ನಗರ ಮಾತ್ರವಲ್ಲದೇ, ಶಾಮನೂರು, ಮಾಯಕೊಂಡ, ಶಿರಮಗೊಂಡನಹಳ್ಳಿ, ಬಸಾಪುರ, ದೊಡ್ಡಬಾತಿ ಸೇರಿದಂತೆ, ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ 89ನೇ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಿದೆ.
ಶಿವರಾತ್ರಿಯ ಸಂದೇಶವನ್ನು ಅರಿತು ನಮ್ಮಲ್ಲಿ ಧಾರಣೆ ಮಾಡಿಕೊಂಡಾಗ ಮಾದರಿ ಜೀವನ ನಡೆಸಬಹುದು ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಪ್ರತಿಪಾದಿಸಿದ್ದಾರೆ.
ಸ್ಥಳೀಯ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್ನಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿವಧ್ಯಾನ ಮಂದಿರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದ್ದು, ಇದೇ ದಿನಾಂಕ
28 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದು.
ಇಂದು ಬೆಳಿಗ್ಗೆ 10 ಗಂಟೆಗೆ 108 ಶಿವಲಿಂಗಗಳ ಮೋಟಾರ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಶಿವಧ್ಯಾನ ಮಂದಿರದಿಂದ ಆರಂಭಗೊಳ್ಳುವ ಈ ರಾಲಿಯು ನಗರದಾದ್ಯಂತ ಸಂಚರಿಸಲಿದೆ.
ನಾಳೆ ಬುಧವಾರ ಶಿವರಾತ್ರಿಯಂದು 108 ಶಿವಲಿಂಗಗಳೊಂದಿಗೆ ಸದ್ಭಾವನಾ ಶಾಂತಿಯಾತ್ರೆ ಏರ್ಪಡಾಗಿದೆ. ಅಂದು ಸಂಜೆ 4 ಗಂಟೆಗೆ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಆರಂಭ ಗೊಳ್ಳುವ ಸದ್ಭಾವನಾ ಶಾಂತಿಯಾತ್ರೆಯು ರಾಜಬೀದಿಗಳಲ್ಲಿ ಸಂಚರಿಸಲಿದೆ.
ನಂತರ ಸಂಜೆ 6.30ಕ್ಕೆ ಶಿವಧ್ಯಾನ ಮಂದಿರದಲ್ಲಿ ಶಿವ ಧ್ವಜಾರೋಹಣ ಮತ್ತು ಶಿವಧ್ಯಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಲೀಲಾಜಿ ವಿವರಿಸಿದ್ದಾರೆ.
ರಾಜಯೋಗ ಶಿಬಿರ : ಶಿವರಾತ್ರಿ ಪ್ರಯುಕ್ತ ಇದೇ ದಿನಾಂಕ 27ರಿಂದ ಮಾರ್ಚ್ 1ರವರೆಗೆ ಮೂರು ದಿನಗಳ ಕಾಲ ರಾಜಯೋಗ ಶಿಬಿರವನ್ನು ಆಯೋಜಿಸ ಲಾಗಿದ್ದು, ಶಿವಧ್ಯಾನ ಮಂದಿರ ಮತ್ತು ಪಿ.ಜೆ. ಬಡಾವಣೆ 8ನೇ ಮುಖ್ಯರಸ್ತೆ – ಬ್ರಹ್ಮಾ ಕುಮಾರೀಸ್ ರಸ್ತೆಯಲ್ಲಿರುವ ಬ್ರಹ್ಮಾಕುಮಾ ರೀಸ್ ಸಂಸ್ಥೆಯಲ್ಲಿ ಪ್ರತಿದಿನ ಬೆಳಿಗ್ಗೆ 7.30 ರಿಂದ 8.30, ಸಂಜೆ 7 ರಿಂದ 8ರವರೆಗೆ ಒಂದು ಗಂಟೆ ಕಾಲ ಶಿಬಿರ ನಡೆಯಲಿದೆ.