ದಾವಣಗೆರೆ, ಫೆ.23- ನಗರ ಮತ್ತು ಜಿಲ್ಲಾದ್ಯಂತ ಬೇಸಿಗೆ ಕಾಲಕ್ಕೂ ಮುನ್ನ ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಹೆಲ್ಮೆಟ್ಗೆ ಧರಿಸುವಲ್ಲಿ ವಿನಾಯಿತಿ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮತ್ತು ಕಾರ್ಯದರ್ಶಿ ಎ.ನಾಗರಾಜ್ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಬಿರು ಬಿಸಿಲಿನಲ್ಲಿ ಹೆಲ್ಮೆಟ್ ಧರಿಸಿದರೆ ಕೂದಲು ಉದುರುವಿಕೆ, ಕಿರಿಕಿರಿ, ಬೆವರು, ಬೈಕ್ ರೈಡಿಂಗ್ ವೇಳೆ ಸ್ವಚ್ಚಂದವಾಗಿ ತೆರಳಲು ಸೇರಿದಂತೆ ಹಲವು ಕಾರಣಗಳಿಂದ ಹೆಲ್ಮೆಟ್ ಧರಿಸಲು ಸಾಧ್ಯವಾಗದ ಕಾರಣ ವಿನಾಯಿತಿ ನೀಡುವ ಬಗ್ಗೆ ಜಿಲ್ಲಾ ಪೊಲೀಸ್ ಚಿಂತನೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಹಾಫ್ ಹೆಲ್ಮೆಟ್ಟನ್ನು ಹೆಚ್ಚಿನ ರೀತಿಯಲ್ಲಿ ಬಳಸುತ್ತಿದ್ದು, ಒಂದೇ ಬಾರಿಗೆ ಪೂರ್ಣ ಹೆಲ್ಮೆಟ್ ಧರಿಸುವಂತೆ ಒತ್ತಾಯಿಸುವುದು ಸರಿಯಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆಲ ಸಮಯ ನಿಗದಿಪಡಿಸಿ ಪೂರ್ಣ ಹೆಲ್ಮೆಟ್ ಧರಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ.