ವೃತ್ತಿ ರಂಗನಾಟಕ ರಚನಾ ಶಿಬಿರದಲ್ಲಿ ನಾಟಕಕಾರ ಡಾ. ಕೆ.ವೈ. ನಾರಾಯಣ ಸ್ವಾಮಿ
ದಾವಣಗೆರೆ, ಫೆ. 9 – ನಾಟಕ ರಚನೆಗೆ ಸಾಮಾಜಿಕ ಪ್ರಬುದ್ಧತೆ ಹಾಗೂ ಪಾರದರ್ಶಕ ವಿಚಾರಗಳನ್ನು ಹೊತ್ತು, ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸುವಂತಿರಬೇಕು. ಆಗ ಮಾತ್ರ ಉತ್ತಮ ನಾಟಕಗಳು ರಚನೆಯಾಗುತ್ತವೆ. ಇದರ ಜೊತೆಗೆ ನಾಟಕಗಳನ್ನು ರಚಿಸುವಾಗ ಸರಿಯಾದ ವಿಷಯ ವಸ್ತುಗಳು ಮೊದಲು ಬರಹಗಾರನಿಗೆ ಅರ್ಥವಾಗ ಬೇಕು. ಆ ನಂತರ ನೋಡುಗರಿಗೆ ಅರ್ಥೈಸಬೇಕು. ಇದು ನಿರಂತರ ಓದು, ಬರಹ ಹಾಗೂ ಉತ್ತಮ ನಾಟಕಗಳನ್ನು ನೋಡುವುದರಿಂದ ಸಾಧ್ಯವಾಗುತ್ತದೆ ಎಂದು ನಾಟಕಕಾರರು ಮತ್ತು ವಿಮರ್ಶಕ ಡಾ. ಕೆ.ವೈ. ನಾರಾಯಣ ಸ್ವಾಮಿ ಹೇಳಿದರು.
ಕೊಂಡಜ್ಜಿಯ ಸ್ಕೌಟ್ ಕ್ಯಾಂಪ್ನಲ್ಲಿ ವೃತ್ತಿ ರಂಗಭೂಮಿ ರಂಗಾ ಯಣ (ದಾವಣಗೆರೆ), ಕರ್ನಾಟಕ ನಾಟಕ ಅಕಾಡೆಮಿ, (ಬೆಂಗಳೂರು) ಇವರ ಸಹಯೋಗದೊಂದಿಗೆ ಏರ್ಪಡಿಸಿದ ವೃತ್ತಿ ರಂಗನಾಟಕ ರಚನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದ ನಿರ್ದೇಶಕ ಬಸವರಾಜ ಪಂಚಗಲ್ ಮಾತನಾಡಿ, ಒಂದು ನಾಟಕವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೆ ಸಮಾಜಕ್ಕೆ ಪರಿವರ್ತನೆಯ ಸಂದೇಶವನ್ನು ರವಾನಿಸುವಂತಿರ ಬೇಕು. ಹಾಗೆ ಹಿಂದಿನ ತಲೆಮಾರಿನವರು ತಮಗಾಗುತ್ತಿದ್ದ ಅಪಮಾನ, ನೋವು, ನಲಿವು ಹಾಗೂ ನ್ಯೂನತೆಗಳನ್ನು ನಾಟಕದ ರೂಪದಲ್ಲಿ ಅಭಿವ್ಯಕ್ತಪಡಿಸುತ್ತಿದ್ದರು. ಆದರೆ ಇಂದಿನ ಯುವ ಜನತೆಗೆ ನಾಟಕಗಳ ರಚನೆ ಹಾಗೂ ಅಭಿರುಚಿ ಯನ್ನು ಅಗತ್ಯವಾಗಿ ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವೃತ್ತಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಒಟ್ಟಾರೆ ರಂಗಭೂಮಿಯ ಚಿಂತನೆಗಳನ್ನು ಮರುರೂಪಿಸ ಬೇಕಾಗಿದೆ. ಇದಕ್ಕೆ ಪೂರಕವಾಗಿ ರಂಗಭೂಮಿ ವಿದ್ವಾಂಸರು ಕೈಗೂಡಿಸಿ, ವೃತ್ತಿ ರಂಗಭೂಮಿಯನ್ನು ಹೊಸ ದಿಕ್ಕಿನತ್ತ ನಡೆಸಬೇಕಿದೆ. ಅದಕ್ಕೆ ದಾವಣಗೆರೆಯ ವೃತ್ತಿ ರಂಗಾಯಣ ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಆ ದಿಕ್ಕಿನಲ್ಲಿ ಇಂದಿನ ವೃತ್ತಿ ರಂಗ ನಾಟಕ ರಚನಾ ಶಿಬಿರ ವಿನೂತನ ಪ್ರಯತ್ನ ಮಾಡುತ್ತಿದೆ.
ಕಾರ್ಯಕ್ರಮದಲ್ಲಿ ಹಿರಿಯ ನಾಟಕಾರ ಡಾ. ಕೆ. ಶಿವನಗೌಡ ಉಪಸ್ಥಿತರಿದ್ದರು.