ಪಾಲಿಕೆ: 5.16 ಕೋಟಿ ಉಳಿತಾಯ ಬಜೆಟ್

ಪಾಲಿಕೆ: 5.16 ಕೋಟಿ ಉಳಿತಾಯ ಬಜೆಟ್

ವಿಶ್ವ ಸಮ್ಮೇಳನಕ್ಕೆ 50 ಲಕ್ಷ, ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಿಗೆ ಹಣ ಮೀಸಲು

ದಾವಣಗೆರೆ, ಫೆ.6- ಮಹಾನಗರ ಪಾಲಿಕೆಯ ಆಡಳಿತಾರೂಢ ಕಾಂಗ್ರೆಸ್‌ 2025–26ನೇ ಸಾಲಿನ ಆರ್ಥಿಕ ವರ್ಷಕ್ಕೆ 516.35 ಲಕ್ಷ ರೂಪಾಯಿಯ ಮಿಗತೆ ಬಜೆಟ್ಟನ್ನು ಗುರುವಾರ ನಗರದ ಪಾಲಿಕೆ ಸಭಾಭವನದಲ್ಲಿ ಮಂಡಿಸಿತು. 

ಪಾಲಿಕೆ ಮೇಯರ್ ಕೆ.ಚಮನ್ ಸಾಬ್, `ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು…’ ವಚನದ ಮೂಲಕ ಬಜೆಟ್ ಮಂಡಿಸುತ್ತಾ, ಕೊನೆಯಲ್ಲಿ `ಇವನಾರವ ಇವನಾರವ…’ ವಚನ ಹೇಳುವ ಮೂಲಕ ಎಲ್ಲರೂ ಅಭಿವೃದ್ಧಿಗೆ ಕೈ ಜೋಡಿಸುವಂತೆ ಕರೆ ನೀಡಿದರು. 

ಬಜೆಟ್‌ನಲ್ಲಿ ಕೆಲವು ಹೊಸ ಯೋಜನೆ, ಕಾಮಗಾರಿಗಳಿಗೆ ಅನುದಾನ ಘೋಷಿಸಿದ್ದರೂ, ಈ ಹಿಂದಿನ ಬಜೆಟ್‌ಗಳಲ್ಲಿ ಘೋಷಿಸಿದ್ದ ಹಲವು ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮತ್ತೆ ಪ್ರಸ್ತಾಪಿಸಲಾಗಿದೆ. 

ವಿಶ್ವ ಕನ್ನಡ ಸಮ್ಮೇಳನಕ್ಕೆ 50 ಲಕ್ಷ ರೂ.: ಮುಂದಿನ ವರ್ಷ ದಾವಣಗೆರೆ ನಗರದಲ್ಲಿ ರಾಜ್ಯ ಸರ್ಕಾರವು ವಿಶ್ವ ಸಮ್ಮೇಳನ ಆಯೋಜಿಸುವ ಸಾಧ್ಯತೆ ಇರುವುದಾಗಿ ಹೇಳಿ, ಇದಕ್ಕಾಗಿ ಪಾಲಿಕೆ 50 ಲಕ್ಷ ರೂ. ವಂತಿಕೆ ನೀಡಲು ಅನುದಾನ ಕಾಯ್ದಿರಿಸಿದೆ.

ತಾಲ್ಲೂಕು, ಜಿಲ್ಲಾ ಸಮ್ಮೇಳನಕ್ಕೆ ಅನುದಾನ: ಅಲ್ಲದೆ ಪಾಲಿಕೆ ವತಿಯಿಂದ ಆಚರಿಸುವ ಕನ್ನಡ ರಾಜ್ಯೋತ್ಸವಕ್ಕೆ 50 ಲಕ್ಷ ರೂ. ಸೇರಿದಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 50 ಸಾವಿರ ರೂ. ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 25 ಲಕ್ಷ ರೂ. ದೇಣಿಗೆ ನೀಡಲು ನಿರ್ಧರಿಸಲಾಗಿದೆ.

ಒಣ ತ್ಯಾಜ್ಯ ನಿರ್ವಹಣೆಗೆ 11.10 ಕೋಟಿ ರೂ. : ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇಪಡಿಸಲು 97 ಪಿ.ಟಿ.ಡಿ. ಸಾಮರ್ಥ್ಯದ ಮೆಟೀರಿಯಲ್ ರಿಕವರಿ ಫಿಸಿಲಿಟಿ ಅಭಿವೃದ್ಧಿ ಪಡಿಸಲು ಆಯೋಜಿಸಲಾಗಿದ್ದು, ಇದಕ್ಕಾಗಿ 11.10 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಸಾರ್ವಜನಿಕ ಶೌಚಾಲಯಕ್ಕೆ 1.26 ಕೋಟಿ.: ನಗರದ ವಿವಿಧೆಡೆ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸಲು 126.32 ಲಕ್ಷ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ತ್ಯಾಜ್ಯ ವಿಂಗಡಣೆ ಬುಟ್ಟಿ ವಿತರಣೆ: ನಗರದ ಆಯ್ದ ವಾರ್ಡ್‌ಗಳಲ್ಲಿ ತ್ಯಾಜ್ಯ ವಿಂಗಡಣೆಗಾಗಿ ಪ್ರತಿ ಮನೆಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ನೀಡಲು ಪ್ರಾಥಮಿಕವಾಗಿ 25 ಲಕ್ಷ ರೂ. ಕಾಯ್ದಿರಿಸಲಾಗಿದೆ.

ಜರ್ಮನ್ ಮಾದರಿ ವೃತ್ತ ಅಭಿವೃದ್ಧಿ: ಜರ್ಮನ್ ಮಾದರಿಯಲ್ಲಿ ನಗರದ ಆಯ್ದ ವೃತ್ತಗಳನ್ನು ಅಭಿವೃದ್ಧಿ ಪಡಿಸಲು ಅಂದಾಜು 2 ಕೋಟಿ ರೂ. ಯೋಜನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಡ್ರೋನ್‌ ಸರ್ವೇ : ಪಾಲಿಕೆ ವ್ಯಾಪ್ತಿಯ ಖಾಸಗಿ, ಸರ್ಕಾರದ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮತ್ತು ಬಾಕಿ ಇರುವ ತೆರಿಗೆ ವಸೂಲಿ ಮಾಡುವ ಬಗ್ಗೆ ಡೋನ್ ಸರ್ವೇ ಮಾಡಲು ಅಂದಾಜು 5 ಕೋಟಿ ರೂ. ಕಾಯ್ದಿರಿಸಲಾಗಿದೆ.

ಸ್ವತ್ತು ಸಂರಕ್ಷಣೆಗೆ 2 ಕೋಟಿ: ಪಾಲಿಕೆ ಒಡೆತನದ ಪಾರ್ಕ್‌, ಖಾಲಿ ನಿವೇಶನಗಳನ್ನು ಗುರುತಿಸಿ ಸರ್ವೇ ಮಾಡಿ ಹದ್ದುಬಸ್ತು ಮಾಡಿ ನಾಮಫಕ ಅಳವಡಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 2 ಕೋಟಿ ರೂ. ಕಾಯ್ದಿರಿಸಲಾಗಿದೆ.

ಪಾರ್ಕ್‌ ಅಭಿವೃದ್ಧಿ : ಆಯ್ದ ಉದ್ಯಾವನಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತದೆ. ಒಟ್ಟಾರೆ ಉದ್ಯಾನವನಗಳ ಅಭಿವೃದ್ಧಿಗೆ 336.50 ಲಕ್ಷ ರೂ ಕಾಯ್ದಿರಿಲಾಗಿದೆ.

ಜಲ ಸಾಹಸ ಕ್ರೀಡೆ, ದೋಣಿ ವಿಹಾರ ಕೇಂದ್ರ : ಬಾತಿ ಕೆರೆ ಅಭಿವೃದ್ಧಿ ಪಡಿಸಿ ಖಾಸಗಿ ಸಹಭಾಗಿತ್ವದೊಂದಿಗೆ ದೋಣಿ ವಿಹಾರ, ಜಲ ಸಾಹಸ ಕ್ರೀಡೆ ಇತ್ಯಾದಿಯನ್ನು ಕೈಗೊಳ್ಳಲು ಪ್ರಾಥಮಿಕವಾಗಿ 1 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ.

ಬಜೆಟ್ ಸಭೆಯಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ‌ ಹುಲ್ಮನೆ ಗಣೇಶ್, ಉರುಬಾನ್, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮೇಶ್, ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್ ಇತರರು ಇದ್ದರು.

error: Content is protected !!