ಆಟ ನಿಲ್ಲಿಸಿ ಮೌನವಾದ ಚಿತ್ರಮಂದಿರಗಳು

ಆಟ  ನಿಲ್ಲಿಸಿ ಮೌನವಾದ ಚಿತ್ರಮಂದಿರಗಳು

ಇತಿಹಾಸದ ಪುಟ ಸೇರಿದ ಐತಿಹಾಸಿಕ ಸಿನಿಮಾ ಟಾಕೀಸ್‌ಗಳು 

ದಾವಣಗೆರೆಯಲ್ಲಿ ಸಿಂಗಲ್ ಥಿಯೇಟರ್‌ಗಳ ಕಾಲ ಮುಗಿಯುತ್ತಾ ಬಂದಿದೆ. ಮೊದಲಿಗೆ ಮಲ್ಟಿಫ್ಲೆಕ್ಸ್‌ಗಳಿಂದಾಗಿ ಆಘಾತಕ್ಕೊಳಗಾಗಿ,  ಇದೀಗ `ಓಟಿಟಿ’ ಹಾವಳಿಯಿಂದಾಗಿ ಬಹುತೇಕ ಚಿತ್ರಮಂದಿರಗಳು ತಮ್ಮ `ಆಟ’ ನಿಲ್ಲಿಸಿವೆ.

ರಂಗಭೂಮಿ ಕಲಾವಿದರನ್ನೂ ಪೋಷಿಸುತ್ತಿದ್ದ ದೇವನಗರಿಯಲ್ಲಿ ಹತ್ತಾರು ಚಿತ್ರಮಂದಿರಗಳಿದ್ದವು. ಶತಕಗಳ ಕಾಲ ಮನೋರಂಜನಾ ಕೇಂದ್ರವಾಗಿದ್ದವು. ತಾವಿದ್ದ ಸ್ಥಳದ ಗುರುತು ಹೆಚ್ಚಿಸಿದ್ದ ಚಿತ್ರಮಂದಿರಗಳು ಈಗ ಗುರುತೇ ಇಲ್ಲದಂತಾಗುತ್ತಿವೆ. 

ಪ್ರಸ್ತುತ ದಾವಣಗೆರೆಯಲ್ಲಿರುವ ಅಶೋಕ, ಅರುಣ, ಗೀತಾಂಜಲಿ, ಪುಷ್ಪಾಂಜಲಿ, ಪದ್ಮಾಂಜಲಿ, ತ್ರಿನೇತ್ರ, ತ್ರಿಶೂಲ್, ವಸಂತ, ಶಿವಾಲಿ ಚಿತ್ರಮಂದಿರ ಗಳ ಪೈಕಿ ಸದ್ಯ ಐದು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನಗಳು ನಡೆಯುತ್ತಿವೆ.

ಮಲ್ಪಿಫ್ಲೆಕ್ಸ್‌ಗಳ ಹೊಡೆತವನ್ನು ಹಾಗೋ-ಹೀಗೋ ತಾಳಿಕೊಂಡಿದ್ದ ಕೆಲವು ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಇನ್ನಷ್ಟು ಬಡಕಲಾಗಿದ್ದವು. ಆದರೆ ಮತ್ತೆ  ಗಟ್ಟಿತನ ತೋರಿಸಲು ಸಾಧ್ಯವಾಗದೇ  ಆಗಲೋ-ಈಗಲೋ ಧರೆಗುರುಳಲು ಸಜ್ಜಾಗಿ ನಿಂತಿವೆ.  ದಶಕಗಳ ಕಾಲ ಜನರನ್ನು ಮನರಂಜಿಸಿ ಜನರಲ್ಲಿ ಮನೆಮಾತಾಗಿದ್ದ ಚಿತ್ರಮಂದಿರಗಳು ಈಗ ಇತಿಹಾಸದ ಪುಟ ಸೇರುತ್ತಿರುವುದು ವಿಪರ್ಯಾಸ.

ಮೊದಲಿನಂತೆ ಆದಾಯ ಬರುತ್ತಿಲ್ಲ. ವಿದ್ಯುತ್ ಶುಲ್ಕ, ನಿರ್ವಹಣೆ ಶುಲ್ಕ ಮತ್ತಿತರೆ ಶುಲ್ಕಗಳನ್ನು ಪಾವತಿಸಲು ಹಣ ಸಾಲುತ್ತಿಲ್ಲ. ಸಿಬ್ಬಂದಿಗೆ ಸಂಬಳ, ಚಿತ್ರಮಂದಿರದ ನಿರ್ವಹಣೆ, ಬಾಡಿಗೆ, ಕಂದಾಯ ಕಟ್ಟಲು ಹಣದ ಕೊರತೆ ಎದುರಾಗಿದೆ ಮಾಲೀಕರಿಗೆ.

ನೆಚ್ಚಿನ ನಾಯಕ ನಟನ ಚಿತ್ರಗಳಿಗಾಗಿ ಬೆಳ್ಳಂ ಬೆಳಿಗ್ಗಿಯೇ ಸರದಿಯಲ್ಲಿ ನಿಂತು ಟಿಕೆಟ್ ಖರೀದಿಸಿ, ಅಥವಾ ದುಪ್ಪಟ್ಟು ಹಣ ನೀಡಿ ಬ್ಲಾಕ್‌ ನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿದ್ದ ದಿನಗಳು ಈಗ ಮರೆಯಾಗಿವೆ.

ಈ ಸಿನಿಮಾ ಮಂದಿರಗಳು ಸಿನಿ ರಸಿಕರನ್ನು ಆಕರ್ಷಿಸುವ ಜೊತೆಗೆ ನಗರದ ಆರ್ಥಿಕ ವಹಿವಾ ಟಿಗೂ ತಮ್ಮ ಕೊಡುಗೆ ನೀಡುತ್ತಿದ್ದವು. ಸಿನಿಮಾ ನೋಡಲೆಂದು ಬಂದವರು ಜೊತೆಗೆ ಊಟ-ತಿಂಡಿ ಸವಿಯುತ್ತಿದ್ದುದರಿಂದ ಸನಿಹದ  ಹೋಟೆಲ್‌ಗಳಿಗೂ ವ್ಯಾಪಾರವಾಗುತ್ತಿತ್ತು.  ಮಾರುಕಟ್ಟೆಗೆ ಹೋಗಿ ಬೇಕಾದ ವಸ್ತುಗಳನ್ನು ಕೊಂಡೇ ಹೋಗುತ್ತಿದ್ದರು. ಪ್ರತಿ ಚಿತ್ರಮಂದಿರವೂ ಹತ್ತಾರು ಜನರಿಗೆ ಉದ್ಯೋಗ ನೀಡಿದ್ದವು. ಇದೀಗ ಇವುಗಳನ್ನೇ ನೆಚ್ಚಿಕೊಂಡಿದ್ದ ಕುಟಂಬಗಳೂ ಸಂಕಷ್ಟಕ್ಕೊಳಗಾಗಿವೆ.

– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, [email protected]

error: Content is protected !!