ಉಪ ಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆ
ದಾವಣಗೆರೆ, ಸೆ. 27- ಮಹಾನಗರ ಪಾಲಿಕೆ ಮೇಯರ್ ಆಗಿ ಕೆ. ಚಮನ್ ಸಾಬ್ ಹಾಗೂ ಉಪ ಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆಯಾದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ 14 ನೇ ವಾರ್ಡ್ನ ಕಾಂಗ್ರೆಸ್ನ ಕೆ. ಚಮನ್ ಸಾಬ್ 30 ಮತಗಳು, ಬಿಜೆಪಿಯ ಕೆ. ಪ್ರಸನ್ನಕುಮಾರ್ 17 ಮತಗಳನ್ನು ಹಾಗೂ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ 18 ನೇ ವಾರ್ಡ್ನ ಕಾಂಗ್ರೆಸ್ನ ಸೋಗಿ ಶಾಂತಕುಮಾರ್ 30 ಮತಗಳು ಮತ್ತು ಬಿಜೆಪಿಯ ಎಸ್.ಟಿ. ವೀರೇಶ್ 17 ಮತಗಳನ್ನು ಪಡೆದುಕೊಂಡರು. ಕೆ. ಚಮನ್ ಸಾಬ್ ಮತ್ತು ಸೋಗಿ ಶಾಂತಕುಮಾರ್ ತಲಾ 13 ಮತಗಳ ಅಂತರದಿಂದ ಜಯ ಸಾಧಿಸಿದರು.
ಮೇಯರ್ ಸ್ಥಾನ ಬಿಸಿಎ ಗೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಬಿಗೆ ಮೀಸಲಾಗಿತ್ತು. ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಸೋಗಿ ಶಾಂತಕುಮಾರ್ ಕಾಂಗ್ರೆಸ್ ಸೇರಿದ ನಂತರ ಬಿಜೆಪಿ ವಿರುದ್ಧ ಗೆಲುವು ಸಾಧಿಸಿ ಉಪ ಮೇಯರ್ ಆಗಿರುವುದು ವಿಶೇಷವಾಗಿದೆ. 14 ನೇ ವಾರ್ಡ್ನಿಂದ ಸತತವಾಗಿ ಆಯ್ಕೆಯಾಗುತ್ತ ಬಂದಿರುವ ಚಮನ್ಸಾಬ್ ಅವರು ಮೇಯರ್ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದರು.
ಪಾರದರ್ಶಕ ಆಡಳಿತ ನನ್ನ ಗುರಿ
ಇರುವ ನಾಲ್ಕು ತಿಂಗಳು, ಇಪ್ಪತ್ತು ದಿನಗಳ ಅಲ್ಪಾವಧಿಯಲ್ಲಿಯೇ ಮೂಲಭೂತ ಸೌಕರ್ಯ ಕಲ್ಪಿಸುವ ಜೊತೆಗೆ ಪಾರದರ್ಶಕ ಆಡಳಿತ ನೀಡುವುದಾಗಿ ನೂತನ ಮೇಯರ್ ಕೆ. ಚಮನ್ ಸಾಬ್ ಹೇಳಿದರು. ನನ್ನನ್ನು ಆಯ್ಕೆ ಮಾಡಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರಣ ಎಂದರು.
ದಾವಣಗೆರೆ ಮಹಾನಗರದಲ್ಲಿ `ಜಲಸಿರಿ’ ಯೋಜನೆಯಡಿ ಗುಂಡಿ ಅಗೆಯುವ ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿಯೇ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ದಾವಣಗೆರೆ ಅಭಿವೃದ್ಧಿಗೆ ಶ್ರಮಿಸುವೆ
ಸಚಿವ ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಪಾಲಿಕೆ ಕಾಂಗ್ರೆಸ್ ಸದಸ್ಯರ ಸಹಕಾರ ದಿಂದ ನಾನು ಉಪ ಮೇಯರ್ ಆಗಿ ದ್ದೇನೆ. ದಾವಣಗೆರೆಯ ಸಮಗ್ರ ಅಭಿ ವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಲಾ ಗುವುದು ಎಂದು ಉಪ ಮೇಯರ್ ಸೋಗಿ ಶಾಂತಕುಮಾರ್ ತಿಳಿಸಿದರು.
45 ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 22 ಬಿಜೆಪಿ, 19 ಕಾಂಗ್ರೆಸ್,ಓರ್ವ ಜೆಡಿಎಸ್ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾಲ್ವರು ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾದ ಕಾರಣ 18 ಸ್ಥಾನಗಳಿಗೆ ಬಿಜೆಪಿ ಬಲ ಕುಸಿದಿತ್ತು. ಈ ಪೈಕಿ ರಾಕೇಶ್ ಜಾಧವ್ ವಿದೇಶ ಪ್ರವಾಸದಲ್ಲಿರುವುದರಿಂದ ಬಿಜೆಪಿ ಪರ 17 ಸದಸ್ಯರು ಮತ ಹಾಕಿದರು.
ಮೃತಪಟ್ಟಿರುವ ಕಾಂಗ್ರೆಸ್ ಸದಸ್ಯನನ್ನು ಹೊರತುಪಡಿಸಿ, ಕಾಂಗ್ರೆಸ್ನ 18 , ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾದ ನಾಲ್ವರು ಹಾಗೂ ಓರ್ವ ಜೆಡಿಎಸ್ ಸದಸ್ಯೆ ಮತ್ತು ಇವರೊಂದಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸೇರಿ 30 ಸದಸ್ಯರು ಕಾಂಗ್ರೆಸ್ ಪರವಾಗಿ ಮತ ಹಾಕಿದರು.
ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.