ನಾವೆಲ್ಲಾ ಒಗ್ಗಟ್ಟಾಗಿ ಸಿಎಂ ಪರ ಇದ್ದೇವೆ ಎಂದ ಸಂಸದೆ ಡಾ.ಪ್ರಭಾ, ಶಾಸಕ ಎಸ್ಸೆಸ್
ಥಾವರಚಂದ್ ಗೆಹ್ಲೋಟ್ ಪ್ರತಿಕೃತಿ ಮೆರವಣಿಗೆ
ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಪ್ರಾಸಿಕ್ಯೂಷನ್ ರದ್ಧುಪಡಿಸುವಂತೆ ಆಗ್ರಹ
ದಾವಣಗೆರೆ, ಆ.19- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ಥಾವರಚಂದ್ ಗೆಹಲೋಟ್ ಅವರ ಪ್ರತಿಕೃತಿ ನಿರ್ಮಿಸಿ ಹೆಗಲಮೇಲೆ ಹೊತ್ತು ಮಂಡಕ್ಕಿ ತೂರಿದರು.
ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಬಾಯಿ ಬಡಿದುಕೊಂಡರು. ನಂತರ ಅಣಕು ಶವ ಸುಡಲು ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಯಿತಾದರೂ, ಪೊಲೀಸರು ಅವಕಾಶ ನೀಡಲಿಲ್ಲ.
ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರಾಸಿಕ್ಯೂಷನ್ ರದ್ಧುಪಡಿಸಬೇಕು. ರಾಜ್ಯಪಾಲರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮುಖ್ಯ ಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅವಕಾಶ ನೀಡಿದ ರಾಜ್ಯಪಾಲರ ಕ್ರಮ ಸೇಡಿನಿಂದ ಕೂಡಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಬಿಜೆಪಿ ಷಡ್ಯಂತ್ರ ನಿರೂಪಿತವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಂತೆ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದು ಡಾ.ಪ್ರಭಾ ಹೇಳಿದರು.
ಸಿದ್ಧರಾಮಯ್ಯ ಯಾವಾಗಲೂ ಸಿದ್ಧ ಹಸ್ತರು: ಶಾಸಕ ಎಸ್ಸೆಸ್
ದಾವಣಗೆರೆ, ಆ. 19- ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅವರು ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ರಾಜ್ಯಪಾಲರ ನಡೆ ವಿರುದ್ಧ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ಎಲ್ಲಾ ಶಾಸಕರು ಸಿದ್ಧರಾಮಯ್ಯನವರಿಗೆ ಬೆಂಬಲವಾಗಿ ನಿಂತಿದ್ದೇವೆ. ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಸಿದ್ಧರಾಮಯ್ಯನವರು ಯಾವಾಗಲೂ ಸಿದ್ಧ ಹಸ್ತರು. ಏನಾದರೂ ಒಳ್ಳೆಯದಾಗಬೇಕು ಎಂದರೆ ಸಿದ್ಧರಾಮಯ್ಯನವರಿಂದ ಮಾತ್ರ. ರಾಜ್ಯಪಾಲರು ಸ್ವನಿರ್ಧಾರ ಕೈಗೊಳ್ಳದೇ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ನಾಯಕರು ಮಾಡಿದ ದೊಡ್ಡ ಹಗರಣಗಳನ್ನು ಬಿಟ್ಟು ‘ಮುಡಾ’ ಪ್ರಕರಣ ಹಿಡಿದುಕೊಂಡು ವಿವಾದ ಸೃಷ್ಟಿಸಿದ್ದಾರೆ’ ಎಂದು ಎಸ್ಸೆಸ್ ಕಿಡಿಕಾರಿದರು.
ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿಜೆಪಿ ನಾಯಕರು ರಾಜ್ಯವನ್ನು ಕೊಳ್ಳೆಹೊಡೆದು ಹಣ, ಆಸ್ತಿ ಮಾಡಿಕೊಂಡಿದ್ದಾರೆ. ಗಂಟಲವರೆಗೂ ತಿಂದು ಜೀರ್ಣಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಕೆಡವಲು ಇಂಥವರಿಂದ ಸಾಧ್ಯವಿಲ್ಲ. ಬಿಜೆಪಿ ನಾಯಕರ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರಲಿವೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಜಿಲ್ಲೆಯ ಎಂಟೂ ತಾಲ್ಲೂಕುಗಳಿಂದ ಮುಖಂಡರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಒಗ್ಗಟ್ಟಿನಿಂದ ಸಿದ್ಧರಾಮಯ್ಯನವರ ಪರವಾದ ನಿಲುವನ್ನು ತೋರಿಸುತ್ತಿದ್ದೇವೆ.
ಇದು ಜನಪ್ರತಿನಿಧಿಗಳ ಹೋರಾಟವಾಗಿದ್ದು, ಕೇಂದ್ರ ಸಿದ್ಧರಾಮಯ್ಯ ವಿರುದ್ದ ನಿಲುವು ತಾಳಿದರೆ ನಾವೆಲ್ಲಾ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
136 ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಬೆಂಬಲ ಸಿದ್ಧರಾಮಯ್ಯ ಅವರಿಗಿದೆ. ಗ್ಯಾರಂಟಿ ಯೋಜನೆ ಸೌಲಭ್ಯ ಪಡೆದ ಲಕ್ಷಾಂತರ ಜನರ ಹಾರೈಕೆ ಮುಖ್ಯಮಂತ್ರಿಗಳಿಗಿದೆ. ನಮಗೆ ಸಂವಿಧಾನ ಹಾಗೂ ಕಾನೂನಿನಲ್ಲಿ ಭರವಸೆ ಇದೆ ಎಂದು ಹೇಳಿದರು.
ಶಾಸಕ ಕೆ.ಎಸ್. ಬಸವಂತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಜಿ.ಸಿ.ನಿಂಗಪ್ಪ ಹದಡಿ, ಬಿ.ಕೆ.ಪರಶುರಾಮ್ ಮಾಗಾನಹಳ್ಳಿ, ಪಕ್ಷದ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಎಪಿಎಂಸಿ ಮಾಜಿ ಸದಸ್ಯರು, ಗ್ರಾಮ ಪಂಚಾಯತಿಯ ಹಾಲಿ ಮತ್ತು ಮಾಜಿ ಸದಸ್ಯರು, ಮಹಾನಗರ ಪಾಲಿಕೆಯ ಹಾಲಿ ಮತ್ತು ಮಾಜಿ ಸದಸ್ಯರು, ಡಿಸಿಸಿ ಬ್ಯಾಂಕ್ ಸದಸ್ಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರ, ಅಂಗವಿಕಲರ, ಕಿಸಾನ್ ಕಾಂಗ್ರೆಸ್, ಕಾರ್ಮಿಕರ, ವೈದ್ಯರ, ವಕೀಲರ ವಿಭಾಗಗಳು, ಎನ್.ಎಸ್.ಯು.ಐ., ಯುವ ಘಟಕ, ಮಹಿಳಾ ಘಟಕ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.