ಜಿಲ್ಲಾಧಿಕಾರಿಗಳೊಂದಿಗೆ ಸಭೆ, ರೈತರ ಪ್ರತಿಭಟನೆ ತಾತ್ಕಾಲಿಕ ಮುಂದೂಡಿಕೆ
ದಾವಣಗೆರೆ, ಜು.23- ಭದ್ರಾ ಜಲಾಶಯದಿಂದ ಅಚ್ಚುಕಟ್ಟುದಾರರಿಗೆ ಮಳೆಗಾಲದ ಬೆಳೆಗೆ ನೀರು ಹರಿಸಬೇಕು ಮತ್ತು ಜಲಾಶಯದ ದುರಸ್ತಿ ಕೈಗೊಳ್ಳಬೇಕೆಂದು ಹೆದ್ದಾರಿ ಬಂದ್ ಗೆ ಕರೆ ಕೊಟ್ಟಿದ್ದ ರೈತ ಮುಖಂಡರೊಂದಿಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಒಂದೆರಡು ದಿನಗಳಲ್ಲಿ ಕಾಡಾ ಸಭೆ ಕರೆಯಲು ನಿರ್ಣಯಿಸಲಾಗುತ್ತದೆ ಎಂದು ದೂರವಾಣಿಯಲ್ಲಿ ನೀಡಿದ ಭರವಸೆ ಮೇರೆಗೆ ರೈತ ಮುಖಂಡರು ಉದ್ದೇಶಿಸಿದ್ದ ಪ್ರತಿಭಟನೆ ಮುಂದೂಡಿದ್ದಾರೆ.
ಜುಲೈ 23 ರಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ರೈತ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಭದ್ರಾ ಜಲಾಶಯದ ಅಗತ್ಯ ದುರಸ್ಥಿಗೆ ಅನುದಾನ ಬಿಡುಗಡೆ ಮತ್ತು ಕಾಲುವೆಗಳ ದುರಸ್ತಿ ಸೇರಿದಂತೆ ಮಳೆಗಾಲದ ಬೆಳೆಗೆ ನೀರು ಹರಿಸಬೇಕೆಂಬ ಬೇಡಿಕೆಗಳನ್ನಿಟ್ಟು ಹೆದ್ದಾರಿ ಬಂದ್ ಕರೆ ಕೊಟ್ಟಿದ್ದರು.
ಅಧಿವೇಶನ ನಡೆಯುತ್ತಿದ್ದು, ಸಚಿವರು ಸೇರಿದಂತೆ, ಜನಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ನಿಮ್ಮ ಬೇಡಿಕೆಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ಮತ್ತು ಸರ್ಕಾರದ ಗಮನಕ್ಕೆ ತಂದು ರೈತರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಜಿಲ್ಲಾಧಿಕಾರಿಯವರು ಭರವಸೆ ನೀಡಿದರು.
ಹೆದ್ದಾರಿ ಬಂದ್ ತಾತ್ಕಾಲಿಕ ಮುಂದೂಡಿಕೆ: ಎಸ್ಎಆರ್
ದಾವಣಗೆರೆ, ಜು. 23- ಭದ್ರಾ ಜಲಾಶಯ ದುರಸ್ತಿ ಅನುದಾನ ಬಿಡುಗಡೆ, ಕೂಡಲೇ ನಾಲೆಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಾಳೆ ದಿನಾಂಕ 24 ರಂದು ಬಾಡಾ ಕ್ರಾಸ್ ಬಳಿ ಹೆದ್ದಾರಿ ಬಂದ್ ಚಳವಳಿಯನ್ನು ಜಿಲ್ಲಾಧಿಕಾರಿಗಳ ಭರ ವಸೆ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ತಿಂಗಳು 25 ರೊಳಗಾಗಿ ಭದ್ರಾ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಭದ್ರಾ ಜಲಾಶಯ ದುರಸ್ತಿಗೆ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಬೇಡಿಕೆಗಳು ಈಡೇರದಿದ್ದಲ್ಲಿ ವಾರದೊಳಗೆ ರಸ್ತೆ ತಡೆ ಸೇರಿದಂತೆ ವಿವಿಧ ರೀತಿಯ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಸಭೆ ಕರೆದು ನಮ್ಮೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರ ಹಿನ್ನೆಲೆಯಲ್ಲಿ ನಾಳಿನ ಹೆದ್ದಾರಿ ಬಂದ್ ಮುಂದೂಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಿಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್ ಮಾಡಾಳು, ಚಂದ್ರಶೇಖರ್ ಪೂಜಾರ್ ಉಪಸ್ಥಿತರಿದ್ದರು.
ಆದರೂ ಒಪ್ಪದ ಮುಖಂಡರು ಪಟ್ಟು ಹಿಡಿದಾಗ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ದೂರವಾಣಿಯಲ್ಲಿ ಸಮಾಲೋಚಿಸಿದಾಗ ಜುಲೈ 24 ರಂದು ಉಪಮುಖ್ಯಮಂತ್ರಿಗಳು ಎಲ್ಲಾ ನೀರಾವರಿ ನಿಗಮಗಳ ಅಧಿಕಾರಿಗಳು ಹಾಗೂ ಸಚಿವರು, ಶಾಸಕರೊಂದಿಗೆ ಸಭೆ ಕರೆದಿದ್ದು ಈ ಸಭೆಯಲ್ಲಿ ಭದ್ರಾ ಕಾಡಾ ಸಭೆ ಕರೆದು ಕಾಲುವೆಗಳಿಗೆ ನೀರು ಬಿಡಲು ದಿನಾಂಕ ನಿಗದಿ ಮಾಡಲಾಗುತ್ತದೆ. ಈ ಸಭೆಗೆ ದಾವಣಗೆರೆ ರೈತ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ರೈತ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಎರಡು ದಿನಗಳಲ್ಲಿ ನೀರು ಬಿಡಲು ತೀರ್ಮಾನಿಸಬೇಕು ಮತ್ತು ಭದ್ರಾ ಜಲಾಶಯದಲ್ಲಿನ ಸ್ಲೂಯಿಸ್ ದುರಸ್ತಿ ಮತ್ತು ಕ್ರಸ್ಟ್ ಗೇಟ್ ದುರಸ್ತಿ ಮತ್ತು ನಾಲಾ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಆಗಸ್ಟ್ 15 ವರೆಗೆ ಗಡುವು ಮತ್ತು ತುಂಗಾದಿಂದ ಭದ್ರಾಕ್ಕೆ 22.5 ಟಿಎಂಸಿ ಲಿಫ್ಟ್ ಮಾಡದೆ, ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಬಾರದೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಸುಜಾತ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ರೈತ ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಬಲ್ಲೂರು ರವಿಕುಮಾರ್, ಶಾಮನೂರು ಲಿಂಗರಾಜ್, ಕೊಳೇನಹಳ್ಳಿ ಸತೀಶ್ ಹಾಗೂ ಇನ್ನಿತರೆ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.