ದೇಶದ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆ ಅವಲಂಬಿತ

ದೇಶದ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆ ಅವಲಂಬಿತ

ಭದ್ರಾ ಪದವಿ ಪೂರ್ವ ಕಾಲೇಜಿನ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಅಭಿಮತ

ದಾವಣಗೆರೆ, ಜು. 16 – ದೇಶದ ಭವಿಷ್ಯ  ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿದ್ದು, ಇಂದಿನ ಯುವಕರನ್ನು ನೈತಿಕ ಶಿಕ್ಷಣ, ಸಂಸ್ಕಾರ ಮತ್ತು ಸಂಸ್ಕೃತಿಯೊಡನೆ ಹೊಣೆಗಾರಿಕೆಯಿಂದ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಆಡಳಿತವಿದ್ದು, ನಾವೆಲ್ಲರೂ ಕಾನೂನನ್ನು ಪಾಲಿಸುವಲ್ಲಿ ಬದ್ಧರಾಗಿರಬೇಕು. ಸಂವಿಧಾನದ ಆಶಯಗಳಂತೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಬೇಕೆಂದು ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ಕರೆ ನೀಡಿದರು. 

ನಗರದ ಕುವೆಂಪು ಕನ್ನಡ ಭವನದಲ್ಲಿ ನಿನ್ನೆ ನಡೆದ ಭದ್ರಾ ಪದವಿ ಕಾಲೇಜು ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ವಾರ್ಷಿಕೋತ್ಸವ ಹಾಗೂ `ಸಾಂಸ್ಕೃತಿಕ ಕಾರ್ಯಕ್ರಮದ ಸಮಾ ರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯದ ಸಮಾನತೆಯ ಚಳುವಳಿಯನ್ನು ಆರಂಭಿಸಿದ್ದರು. ಮಹಿಳೆಯರಿಗೆ ಮತ್ತು ಶೋಷಿತರಿಗೆ ಸಮಾನ ಅವಕಾಶವನ್ನು ನೀಡಿ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸಮಾಜದ ಕನಸನ್ನು ನನಸು ಮಾಡಿದರು. ಮಾನವ ಹಕ್ಕುಗಳನ್ನು ಪ್ರತಿಪಾದಿಸಿ ಮಾನವತೆಯ ಸಮಾಜದ ಕನಸನ್ನು ಬಸವಣ್ಣನವರು ಕಂಡಿದ್ದರು. 1948ರಲ್ಲಿ ಜಾರಿಗೆ ಬಂದ ಮಾನವ ಹಕ್ಕುಗಳು ಪ್ರಪಂಚದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಸಹಕಾರಿಯಾಗಿದ್ದು,  ಮಾನವ ಹಕ್ಕುಗಳು ಜಾರಿಗೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಾಂಗೀಯ ಹೋರಾಟ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭ್ರೂಣ ಹತ್ಯೆ ಅಂತಹ ಕ್ರೌರ್ಯಗಳನ್ನು ನಿಷೇಧಿಸಿ, ಜನಾಂಗಗಳ ಏಳಿಗೆಗೆ ನೆರವು ಮತ್ತು ಸಹಕಾರ ನೀಡುತ್ತಿದೆ ಎಂದು ತಿಳಿಸಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ವಕೀಲ ಬಿ.ಎಂ. ಹನುಮಂತಪ್ಪ ಮಾತನಾಡಿ,  ಆಧುನಿಕ ಯುವಕರಿಗೆ ಸರಳ ಜೀವನ ಅವಶ್ಯಕವಿದ್ದು, ದೈನಂದಿನ ಜೀವನದ ಕರ್ತವ್ಯಗಳನ್ನು ಅರಿತು ಬಾಳಬೇಕಾಗಿದೆ. ಶಿಕ್ಷಣ ಬದುಕನ್ನು ಹಸನ ಮಾಡುವಂತಿರಬೇಕು. ಇಂದಿನ ಸಮಾಜಕ್ಕೆ ಸಂವಿಧಾನದ ಜ್ಞಾನ ಬೇಕಾಗಿದ್ದು, ಅದರ ಮಹತ್ವವನ್ನು ಎಲ್ಲರು ಅರಿಯಬೇಕಾಗಿದೆ. ಭಾರತ ಸಂವಿಧಾನವು ಭಾರತೀಯರನ್ನು ಸಮಾನತೆಯಿಂದ ಕರೆದುಕೊಂಡು ಹೋಗುವ ಗ್ರಂಥವಾಗಿದೆ ಎಂದು ಹೇಳಿದರು. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಚಾರಿತ್ರ್ಯ ತುಂಬಾ ಅವಶ್ಯಕವೆಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ ಅವರು, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವನೆ ಅತ್ಯಾವಶ್ಯಕ ವೆಂದು ಹೇಳುವುದರ ಮೂಲಕ ಬರಿ ಹಕ್ಕುಗಳಿಗೆ ಮಾತ್ರ ಮಹತ್ವ ಕೊಡದೆ, ಕರ್ತವ್ಯಗಳಿಗೂ ಮಹತ್ವ ನೀಡಬೇಕು. ಸಂಕುಚಿತ ಮನೋ ಭಾವನೆ ಬಿಟ್ಟು ವಿಶಾಲ ಮನೋಭಾವದ ಅಡಿಯಲ್ಲಿ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭದ್ರಾ ಪದವಿ ಕಾಲೇಜು ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಪ್ರೊ. ಟಿ. ಮುರುಗೇಶ್  ಅವರು ಮಾತನಾಡಿ, ನಿಮ್ಮೊಳಗಿನ ಜ್ಞಾನ, ಕೌಶಲ್ಯ, ಅಭಿರುಚಿ, ಆಸಕ್ತಿಗಳು ನಿಮ್ಮ ಜೀವನದಲ್ಲಿ ಯಶಸ್ಸು ತಂದುಕೊಡುತ್ತವೆ. ಸಾಧನೆಯ ಹಾದಿಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಇರಬೇಕು ಎಂದು ಹೇಳಿ ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅವಮಾನ ಎಂದರು. 

ಭದ್ರಾ ಎಜುಕೇಷನ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ. ಸಂಕೇತ್, ಭದ್ರಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಿ. ಚಂದ್ರಪ್ಪ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಪೂರ್ಣಿಮಾ ಎಂ.ಕೆ ಮತ್ತು ಸುಮ ಎಂ.ವಿ ಅವರು ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಉಪನ್ಯಾಸಕ ಸಿ. ಕೊಟ್ರೇಶ್  ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ವಿದ್ಯಾರ್ಥಿ ಕೆ.ಎನ್. ಪ್ರಜ್ವಲ್ ನಿರೂಪಿಸಿ ದರು. ಸಂಜಯ್ ಕುಮಾರ್ ಸ್ವಾಗತಿಸಿದರೆ,  ಉಸ್ಮಾ ಫಾಲಕ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಂಜಿತಾ ವಂದಿಸಿದರು.

error: Content is protected !!