ನೇರ ಪಾವತಿ ಪೌರಕಾರ್ಮಿಕರಿಗೆ ಖಾಯಂ ಆದೇಶ ಪ್ರತಿ ವಿತರಣೆ

ನೇರ ಪಾವತಿ ಪೌರಕಾರ್ಮಿಕರಿಗೆ ಖಾಯಂ ಆದೇಶ ಪ್ರತಿ ವಿತರಣೆ

ದಾವಣಗೆರೆ, ಜು. 7 – ಕಳೆದ 20 ವರ್ಷಗಳಿಂದ ನೇರ ಪಾವತಿಗೆ ಒಳಗಾಗಿದ್ದ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ ಆದೇಶ ಪ್ರತಿ ಹಾಗೂ ಶೇ.5  ಯೋಜನೆಯಡಿ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಮತ್ತು ಜೆರಾಕ್ಸ್ ಯಂತ್ರಗಳನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ವಿತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಇಂದು ನಡೆದ ಈ ಸರಳ ಕಾರ್ಯಕ್ರಮವನ್ನುದ್ದೇಶಿಸಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ಮಹಾನಗರಪಾಲಿಕೆ ವತಿಯಿಂದ ನೇರಪಾವತಿ ಪೌರ ಕಾರ್ಮಿಕರನ್ನು ಹಂತ ಹಂತವಾಗಿ ಒಟ್ಟು 250 ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲಾಗಿರುತ್ತದೆ. ಇಂದು ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪ್ರತಿ ಹಾಗೂ ಶೇ.5ರ ಯೋಜನೆ ಯಡಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಮತ್ತು ಜೆರಾಕ್ಸ್ ಯಂತ್ರ ವಿತರಿಸಲಾಗುತ್ತಿದೆ  ಎಂದು ತಿಳಿಸಿದರು.

ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್   ಮಾತನಾಡಿ, ಪೌರ ಕಾರ್ಮಿಕರ ಶ್ರಮದಿಂದಾಗಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿರುವ ದಾವಣಗೆರೆ ಮಹಾನಗರ ಪಾಲಿಕೆ ಮುಂದಿನ ದಿನಗಳಲ್ಲಿ ನಂಬರ್ 1 ನೇ ಸ್ಥಾನ ಬರಲು ಶ್ರಮಿಸುವಂತೆ ಕರೆ ನೀಡಿದರು.

ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಉನ್ನತ ಶಿಕ್ಷಣ ಪಡೆದವರಿಗೆ ಲ್ಯಾಪ್‌ಟ್ಯಾಪ್ ಒದಗಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದ್ದು, ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಇಂದು ಶೇ.5ರ ಯೋಜನೆಯಡಿ ಅರ್ಹ ವಿಕಲಚೇತನ ಫಲಾನುಭವಿಗಳಿಗೆ 29 ರೆಟ್ರೋಫಿ ಟ್‍ಮೆಂಟ್ ದ್ವಿಚಕ್ರ ವಾಹನ ಹಾಗೂ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುವ ಅಂಗವಿಕಲ ಯು.ಆರ್.ಡಬ್ಲ್ಯೂಗಳಿಗೆ ಚೇರ್, ಟೇಬಲ್, ಕಂಪ್ಯೂಟರ್, ಜೆರಾಕ್ಸ್ ಮಿಷನ್, ಪ್ರಿಂಟರ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ  ಮಾತನಾಡಿ, ನಗರ ಸ್ವಚ್ಚತೆಗಾಗಿ 2002ರಲ್ಲಿ ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಪಾಲಿಕೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಗುತ್ತಿಗೆದಾರರ ಮೂಲಕ 270 ಜನ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಗುತ್ತಿಗೆದಾರರು ಪೌರ ಕಾರ್ಮಿಕರುಗಳಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ಇರುವುದರಿಂದ 2017ರ ನವಂಬರ್‍ನಲ್ಲಿ ಈ ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ನೇರವಾಗಿ ಪೌರ ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಪಾವತಿ ಮಾಡು ವಂತೆ ಆದೇಶ ಹೊರಡಿಸಲಾಗಿತ್ತು ಎಂದು ತಿಳಿಸಿದರು.

2019 ರಲ್ಲಿ 34 ಜನ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಖಾಯಂಗೊಳಿಸಲಾಗಿದ್ದು, 2023 ರಲ್ಲಿ 114 ಜನ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಯನ್ನು ಕರೆದು 106 ಜನ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. 

ಪ್ರಸ್ತುತ ಸಾಲಿನಲ್ಲಿ (2024) 119 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಯನ್ನು ಕರೆದು 100 ಜನ ಪೌರ ಕಾರ್ಮಿಕರುಗಳಿಗೆ ನೇಮಕಾತಿ ಆದೇಶವನ್ನು ಇಂದು ನೀಡುತ್ತಿದ್ದೇವೆ ಎಂದರು.

ಪೌರ ಕಾರ್ಮಿಕ ಗೃಹಭಾಗ್ಯ ಯೋಜನೆಯಡಿ 381 ಪೌರ ಕಾರ್ಮಿಕರಿಗೆ ಹಾಗೂ ಇತರೆ ಸ್ವಚ್ಛತಾ ಸಿಬ್ಬಂದಿಗಳಿಗೆ ರೂ. 40 ಕೋಟಿ ವೆಚ್ಚದಲ್ಲಿ ವಸತಿ ಕಟ್ಟಡ ನಿರ್ಮಿಸಿ ಸ್ವಾಧೀನ ಪತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಪೌರ ಕಾರ್ಮಿಕರಿಗೆ ಸುರಕ್ಷತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸಮವಸ್ತ್ರ, ಶೂ, ರಿಫೆಕ್ಟಿಂಗ್ ಚಾಕೆಟ್, ಸೈಟರ್, ರೈನ್‍ಕೋಟ್‍ಗಳನ್ನು, ಹ್ಯಾಂಡ್‍ಗ್ಲೌಸ್, ಮಾಸ್ಟ್ ಗಂಬೂಟ್ ಹಾಗೂ ಇತರೆ ಸುರಕ್ಷಾ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು.

ಶೇ.5ರ ಯೋಜನೆಯಡಿ 94 ಅವಲಂಬಿತ ವಿಕಲಚೇತನ ಮಕ್ಕಳಿಗೆ ಅಂದಾಜು ರೂ. 5300/- ರಂತೆ ಪೋಷಣಾ ಭತ್ಯೆ ಹಾಗೂ 27 ವಿಕಲಚೇತನ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ಮೌನೇಶ್ವರಿ ಶ್ರವಣ ನ್ಯೂನತಾ ವಸತಿ ಶಾಲೆಗೆ ಮೂಲಭೂತ ಸೌಕರ್ಯ ಕೈಗೊಳ್ಳಲು ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಮಹಾಪೌರರಾದ ವಿನಾಯಕ ಪೈಲ್ವಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಜಗದೀಶ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಎಲ್.ಡಿ.ಗೋಣೆಪ್ಪ, ಜಿ.ಎಸ್.ಮಂಜುನಾಥ್ (ಗಡಿಗುಡಾಳ್), ಜಾಕೀರ್ ಅಲಿ, ಸೋಗಿ ಶಾಂತಕುಮಾರ್, ಜಯಮ್ಮ ಗೋಪಿನಾಯ್ಕ, ರಹೀಂಸಾಬ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಹುಲ್ಮನಿ ಗಣೇಶ್,  ಎಲ್.ಎಮ್.ಹನುಮಂತಪ್ಪ, ಎಲ್.ಹೆಚ್. ಸಾಗರ್, ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯಕುಮಾರ್, ವ್ಯವಸ್ಥಾಪಕ ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!