ದೃಶ್ಯಕಲಾ ಮಹಾವಿದ್ಯಾಲಯಕ್ಕೆ 60 ವರ್ಷ : ವರ್ಷವಿಡೀ ವಜ್ರ ಮಹೋತ್ಸವ

ದಾವಣಗೆರೆ, ಜೂ. 27 – ದೃಶ್ಯಕಲಾ ಮಹಾವಿದ್ಯಾಲಯಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಜುಲೈ ತಿಂಗಳಿನಿಂದ ಒಂದು ವರ್ಷ ಕಾಲ ವಜ್ರ ಮಹೋತ್ಸವ ಆಚರಿಸಲಾಗುವುದು ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1964ರಲ್ಲಿ ಕಾಲೇಜು ಸ್ಥಾಪನೆಗೆ ಅಂದಿನ ಶಿಕ್ಷಣ ಸಚಿವ ಎಸ್.ಆರ್. ಕಂಠಿ ಅಡಿಪಾಯ ಹಾಕಿದ್ದರು. ಆಗ ಸರ್ಕಾರಿ ಚಿತ್ರಕಲೆ ಮತ್ತು ಕರಕುಶಲ ಶಾಲೆ ಎಂಬ ಹೆಸರಿಡಲಾಗಿತ್ತು. ಸೆ.16, 1964ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಉದ್ಘಾಟನೆ ನೆರವೇರಿಸಿದ್ದರು ಎಂದು ಹೇಳಿದರು.

ದೃಶ್ಯಕಲಾ ಮಹಾವಿದ್ಯಾಲಯ ಈಗ ಸುಸಜ್ಜಿತ ಕಲಾ ಗ್ಯಾಲರಿ, ಹೊಸ ಶಿಲ್ಪಕಲಾ ಕಾರ್ಯಾಗಾರ, ಅನಿಮೇಷನ್ ವಿಭಾಗ, ವಸತಿ ಯೋಜನೆ, ಥೀಮ್ ಪಾರ್ಕ್, ಫೋಟೋಗ್ರಫಿ, ಡಿಜಿಟಲ್ ಆರ್ಟ್, ಬಯಲು ರಂಗಮಂದಿರ, ಸಮಕಾಲಿನ ಶಿಲ್ಪಕಲೆಗಳ ಬಯಲು ಗ್ಯಾಲರಿ ಮತ್ತು ಆಂಪಿಥಿಯೇಟರ್ ಸೌಲಭ್ಯ ಗಳನ್ನು ಹೊಂದಿದೆ. 12 ಬೋಧಕ ಸಿಬ್ಬಂದಿ ಹಾಗೂ 128 ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.

ಜುಲೈ ತಿಂಗಳಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ನಡೆಸುವ ಮೂಲಕ ವಜ್ರಮಹೋತ್ಸವದ ಚಟುವಟಿಕೆಗಳ ಚಾಲನೆ ನೀಡಲಾಗುವುದು. ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಟೆರಾ ಕೋಟಾ ಕಾರ್ಯಾಗಾರ, ಲಲಿತಕಲಾ ಅಕಾಡೆಮಿ ಕಲಾ ಶಿಬಿರ, ಡಿಜಿಟಲ್ ಕಲಾ ಕಾರ್ಯಾಗಾರ, ವಿಷುಯಲ್ ಆರ್ಟ್ಸ್‌ ಸಂಕಿರಣ, ಶಿಲ್ಪಕಲಾ ಅಕಾಡೆಮಿಯಿಂದ ಕಲಾ ಶಿಬಿರ, ಹೊಸ ಮಾಧ್ಯಮ ಕಾರ್ಯಾಗಾರ, ರಾಜ್ಯ ಮಟ್ಟದ ಕಲಾ ಶಿಕ್ಷಕರು ಹಾಗೂ ಅಧ್ಯಾಪಕರಿಗೆ ಕಾರ್ಯಾಗಾರ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ರಾಷ್ಟ್ರ ಮಟ್ಟದ ಸೆಮಿನಾರ್‌ನೊಂದಿಗೆ ಸಮಾರೋಪ ನೆರವೇರಿಸಲಾಗುವುದು ಎಂದು ಕುಂಬಾರ್ ತಿಳಿಸಿದರು.

ಕಾಲೇಜಿನ ಶ್ರೀಮಂತ ಇತಿಹಾಸ ದಾಖಲಿಸಲು `60 ವರ್ಷಗಳ ಸೃಜನಶೀಲತೆ : ದೃಶ್ಯ ಕಲೆಗಳ ಕಾಲೇಜಿನ ಕಥೆ’ ಎಂಬ ಸ್ಮರಣ ಪುಸ್ತಕವನ್ನು ಪ್ರಕಟಿಸಲಾಗುವುದು ಎಂದೂ ಅವರು ಹೇಳಿದರು.ಮುಂಬರುವ ದಿನಗಳಲ್ಲಿ ಕಾಲೇಜಿನ ಡಿಜಿಟಲ್ ಹಾಗೂ ಅಂತರ್‌ಶಿಸ್ತೀಯ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುವುದು. ಕೃತಕ ಬುದ್ಧಿವಂತಿಕೆಯ ಬಳಕೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಜನರ ಸಹಭಾಗಿತ್ವ ಪಡೆಯಲಾಗುವುದು. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪರಿ ಚಯ ಮಾಡಿಸಲು ಟೆಕ್ನಾಲಜಿ ಪಾರ್ಕ್ ನಿರ್ಮಿಸುವ ಉದ್ದೇಶವೂ ಇದೆ ಎಂದು ಕುಂಬಾರ್ ತಿಳಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಯು.ಎಸ್. ಮಹಾಬಲೇಶ್ವರ್, ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜೈರಾಜ್ ಚಿಕ್ಕಪಾಟೀಲ ಹಾಗೂ ಉಪನ್ಯಾಸಕ ಡಾ. ಸತೀಶಕುಮಾರ್ ವಲ್ಲೇಪುರೆ ಉಪಸ್ಥಿತರಿದ್ದರು.

error: Content is protected !!