ಅಭಿವೃದ್ಧಿಯ ಕನಸು ಕಂಡಿದ್ದ ರಾಜೀವ್ ಗಾಂಧಿ ಅಲ್ಪ ಸಮಯದಲ್ಲೇ ಧ್ರುವತಾರೆಯಂತಾಗಿದ್ದರು

ಅಭಿವೃದ್ಧಿಯ ಕನಸು ಕಂಡಿದ್ದ ರಾಜೀವ್ ಗಾಂಧಿ  ಅಲ್ಪ ಸಮಯದಲ್ಲೇ ಧ್ರುವತಾರೆಯಂತಾಗಿದ್ದರು

ರಾಜೀವ್ ಗಾಂಧಿ 33ನೇ ಪುಣ್ಯತಿಥಿ – ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಡಿ. ಬಸವರಾಜ್

ದಾವಣಗೆರೆ, ಮೇ 21 – ಸಾಮಾನ್ಯನ ಕೈಯಲ್ಲಿ ಮೊಬೈಲ್ ಫೋನ್ ಬರಲು ಮಾಜಿ ಪ್ರಧಾನ ಮಂತ್ರಿ ದಿ. ರಾಜೀವ್ ಗಾಂಧಿ ಕಾರಣರಾಗಿದ್ದಾರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಡಿ. ಬಸವರಾಜ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗವು ಏರ್ಪಡಿಸಿದ್ದ ಮಾಜಿ ಪ್ರಧಾನ ಮಂತ್ರಿ ಭಾರತ ರತ್ನ ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿಯನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲ್ಪಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಿ ಅವರು ಮಾತನಾಡಿದರು.

ರಾಜೀವ್ ಗಾಂಧಿ ಅವರು ಅತಿ ಕಿರಿಯ ವಯಸ್ಸಿಗೆ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಐದು ವರುಷಗಳ ಕಾಲ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಭಾರತ ದೇಶವನ್ನು ಜಗತ್ತಿನ ಶಕ್ತಿಶಾಲಿ  ರಾಷ್ಟ್ರವನ್ನಾಗಿ ಮಾಡಿದ್ದರು ಎಂದವರು ಹೇಳಿದರು.

ಭಾರತ ದೇಶಕ್ಕೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದರು. ಇಡೀ ಪ್ರಪಂಚ ಭಾರತ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದ್ದರು. ಭಾರತ ದೇಶ ಕಂಡ ಅಪ್ರತಿಮ ನಾಯಕ ರಾಜೀವ್ ಗಾಂಧಿ ಅವರು ಅಲ್ಪ ಸಮಯದಲ್ಲಿ ದೇಶದ ಅಭಿವೃದ್ಧಿಯ ಮೂಲಕ ಧ್ರುವತಾರೆಯಾಗಿ ಮಿಂಚಿದ್ದರು ಎಂದು ಬಸವರಾಜ್ ಬಣ್ಣಿಸಿದರು.

18 ವರ್ಷದ ಯುವ ಸಮೂಹಕ್ಕೆ ಮತದಾನದ ಹಕ್ಕನ್ನು ನೀಡಿದ್ದರು. ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯ ಕನಸು ಕಟ್ಟಿಕೊಂಡಿದ್ದ ರಾಜೀವ್ ಗಾಂಧಿ ಅವರು ಅದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದ್ದರು. ಉನ್ನತ ಶಿಕ್ಷಣಕ್ಕೆ ಮಹತ್ವ ನೀಡಿ ಅನೇಕ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಿದ್ದರು. ಟೆಲಿಕಾಂನಲ್ಲಿ ಕ್ರಾಂತಿ ಮಾಡಿ, ಕಂಪ್ಯೂಟರೀಕರಣಕ್ಕೆ ಒತ್ತು ನೀಡಿದ್ದರು. 

ಸಂವಿಧಾನದ 73  ಮತ್ತು 74ನೇ ವಿಧಿಗೆ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆ ಸರಿಪಡಿಸಿದ್ದರು. ರಾಜೀವ್ ಗಾಂಧಿ ನೇತೃತ್ವದಲ್ಲಿ 1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 411 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದರು ಎಂದು ಅವರು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ, ಬಿ. ಹೆಚ್. ಉದಯಕುಮಾರ್, ಸಿಂಗ್ರಿಹಳ್ಳಿ ವಿ. ನೀಲಕಂಠಪ್ಪ, ಶಿವಾನಂದ್, ಗಿರಿಧರ್ ಸತಾಲ್, ಡಿ. ಶಿವಕುಮಾರ್, ಎ. ರಾಜಶೇಖರ್,  ನಿಟ್ಟುವಳ್ಳಿ  ಡಿ. ಬಸವರಾಜ್, ಮುಬಾರಕ್, ಸುರೇಶ್, ಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!