ಬರ: ರೈತರ, ಕೃಷಿಕರ ಹಿತ ಕಾಯಲು ಆಗ್ರಹ

ಬರ: ರೈತರ, ಕೃಷಿಕರ ಹಿತ ಕಾಯಲು ಆಗ್ರಹ

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಪ್ರತಿಭಟನೆ

ದಾವಣಗೆರೆ, ಮೇ 20- ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದು, ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಪದಾಧಿಕಾರಿಗಳು, ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು. 

ಸಂಘಟನೆಯ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿ,  ರಾಜ್ಯದ 223 ತಾಲ್ಲೂಕುಗಳಲ್ಲಿ ಬರವಿದ್ದು, ಜನ – ಜಾನುವಾರುಗಳಿಗೆ ನೀರು, ಮೇವುಗಾಗಿ ಹಾಹಾಕಾರ ಶುರುವಾಗಿದೆ. ಪತ್ರಿಕೆಗಳ ವರದಿಯ ಪ್ರಕಾರ 29 ಜಿಲ್ಲೆಗಳ 149 ತಾಲ್ಲೂಕುಗಳ 1920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲಿ ನೀರಿಲ್ಲ. ಜಿಲ್ಲಾಡಳಿತದಿಂದ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಮೇವಿನ ಲಭ್ಯತೆಯ ಕೊರತೆಯ ಜೊತೆಗೆ ವಿಪರೀತ ಬೆಲೆಯಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ಉದ್ಯೋಗವಿಲ್ಲದೇ ಊರೂರು ಅಲೆಯುವ, ಗುಳೇ ಹೋಗುವ ಪ್ರಮೇಯ ಬಂದಿದೆ. ರೈತರು ತೋಟದ ಬೆಳೆಗಳನ್ನು ಕಾಪಾಡಿಕೊಳ್ಳುವುದರಲ್ಲಿ ಹೈರಾಣಾಗಿದ್ದಾರೆ. 

ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ಹಣದ ಬಿಡುಗಡೆ ವಿಷಯದಲ್ಲಿ ಪರಸ್ಪರ ದೋಷಾರೋಪ ಮಾಡಿಕೊಂಡು, ಚುನಾವಣಾ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇವರ ಮಧ್ಯೆ ರೈತರು ಸತ್ತು ಸುಣ್ಣವಾಗುತ್ತಿದ್ದಾರೆ. ಇದಂತೂ ಅಕ್ಷಮ್ಯ ಮತ್ತು ಅಮಾನವೀಯ. ಬರದಿಂದ ಮುಖ್ಯವಾಗಿ ರೈತ ಸಮುದಾಯವನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿದರು.

ಬೆಳೆಗಳ ನಷ್ಟಕ್ಕೆ ಸಮರ್ಪಕವಾದ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ಖಚಿತಪಡಿಸಬೇಕು. ಕೊಳವೆ ಬಾವಿಯ ವೆಚ್ಚವನ್ನು ವಿಪರೀತವಾಗಿ ಏರಿಸಿರುವುದನ್ನು ತಡೆಯಬೇಕು. ಅಪಮಾನವಾಗುವ ರೀತಿಯಲ್ಲಿ ಸಾಲ ವಸೂಲಿ ಮಾಡುವ ಮೈಕ್ರೊ ಫೈನಾನ್ಸ್ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೂ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿ ಮಾಡಿದ ಬೆಳೆಯ ಹಣವನ್ನು ಕೂಡಲೇ ಪಾವತಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಬಿ.ಎಸ್. ಸುನಿತ್ ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ನಾಗ ಸ್ಮಿತಾ,  ಮಂಜುನಾಥ್ ರೆಡ್ಡಿ, ಚೌಡಪ್ಪ, ಹುಣಸೆ ಕಟ್ಟೆ ರುದ್ರಪ್ಪ, ಭೀಮಣ್ಣ, ನಾಗರಾಜ್ ನಲ್ಕುಂದ, ಶಿವಲಿಂಗಪ್ಪ ನಲ್ಕುಂದ ಇತರರು ಇದ್ದರು.

error: Content is protected !!