ಕಾಯಕದ ಮಹತ್ವ ಜಗತ್ತಿಗೇ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರ

ಕಾಯಕದ ಮಹತ್ವ ಜಗತ್ತಿಗೇ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರ

ಬಸವ ಜಯಂತಿ ಕಾರ್ಯಕ್ರಮದಲ್ಲಿ ದಾವಿವಿ ಕುಲಪತಿ ಪ್ರೊ.ಬಿ.ಡಿ ಕುಂಬಾರ  

ದಾವಣಗೆರೆ,ಮೇ 15- ಮಾತಿನ ಮಹತ್ವವನ್ನು, ಕಾಯಕದ ಮಹತ್ವವನ್ನು ಇಡೀ ಜಗತ್ತಿಗೇ ಸಾರಿದಂತಹ ಮಹಾನ್ ವ್ಯಕ್ತಿ ಶ್ರೀ ಜಗಜ್ಯೋತಿ ಬಸವೇಶ್ವರರ   ತತ್ವ ಮತ್ತು ಮೌಲ್ಯಗಳನ್ನು ನಾವು ಅನುಸರಿಸಿದರೆ, ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ ಕುಂಬಾರ ಹೇಳಿದರು. 

ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಬಸವೇಶ್ವರರ 893ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 

ಬಸವಣ್ಣನವರು ಶರಣ ಸಮೂಹದ ವಚನಗಳ ಮೂಲಕ ಸಾಮಾಜಿಕ ಓರೆ ಕೋರೆಗಳನ್ನು ತಿದ್ದುವ ಕಾರ್ಯವನ್ನು ಮಾಡಿದರು. ಹೀಗಾಗಿ ಅವರ ವಚನಗಳನ್ನು ಪಚನ ಮಾಡಿಕೊಳ್ಳಬೇಕು. ಆಗ `ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಮನವ ಸಂತೈಸಿಕೊಳ್ಳಿ’ ಎಂಬ ಮಾತು ಸಾರ್ಥಕಗೊಳ್ಳುತ್ತದೆ ಎಂದರು. 

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ನಿಂಗಪ್ಪ ಮುದೇನೂರು ಅವರು ಬಸವೇಶ್ವರರನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಸವಣ್ಣನವರು ನಡೆಸಿದ   ಕಾರ್ಯ ಹೋರಾಟವಾಗಿತ್ತು, ಚಳುವಳಿಯಾಗಿತ್ತು. ಸಾಮಾ ಜಿಕ  ಸಮಾನತೆಯ ಸಂದರ್ಭದಲ್ಲಿ ಜನಜೀವನ ವನ್ನು ಉನ್ನತಗೊಳಿಸುವ ಕೈಂಕರ್ಯಕ್ಕೆ ತೊಡಗಿ ಕೊಂಡರು. ತಾವಷ್ಟೇ ಅಲ್ಲ ತಮ್ಮ ಜೊತೆಗೆ ಅನೇಕ ತಳ ಸಮುದಾಯಗಳ ಅನಕ್ಷರಸ್ಥರನ್ನು ಸೇರಿಸಿ ಕೊಂಡು ಹೋರಾಟ ನಡೆಸಿದ್ದು ಸ್ತುತ್ಯಾರ್ಹ, ಅದಕ್ಕೆ ಅವರನ್ನು `ಕರ್ನಾಟಕದ ಮಾರ್ಟಿನ್ ಲೂಥರ್’ ಎಂದು ಕರೆಯುತ್ತಾರೆ ಎಂದು ಹೇಳಿದರು.  

ಕುಲಸಚಿವ ಪ್ರೊ. ಯು.ಎಸ್ ಮಹಾ ಬಲೇಶ್ವರ್ ಮಾತನಾಡಿ, ಬಸವಣ್ಣನವರು ಮಹಿಳೆಯರಿಗೆ ಸಮಾನತೆ, ಸ್ವಾಭಿಮಾನದ ಬದುಕನ್ನು ರೂಪಿಸಿದವರು. ಅವರ ತತ್ವ, ಆದರ್ಶಗಳು ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದರು.

ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡರ ಮಾತನಾಡಿ, ಮಾನವೀಯತೆಯ ಪರಿಕಲ್ಪನೆಗೆ ಬುದ್ಧ ಬೀಜ ಹಾಕಿದರು, ಬಸವಣ್ಣ ನೀರೆರೆದು ಪೋಷಿಸಿದರು, ಅಂಬೇಡ್ಕರ್ ಅನುಷ್ಠಾನಕ್ಕೆ ತಂದರು. ಅವರೆಲ್ಲರ ಪ್ರಯತ್ನಗಳಿಂದ ಭಾರತದಲ್ಲಿ ಮಾನವೀಯತೆಯ ಪರಿಕಲ್ಪನೆ ದೃಢವಾಗಿ ನಿಂತಿದೆ ಎಂದು ತಿಳಿಸಿದರು.

ಕುಲಸಚಿವ ಪ್ರೊ. ಸಿ.ಕೆ ರಮೇಶ್, ಘಟಕದ ಸಂಚಾಲಕ ಡಾ. ನಾಗಭೂಷಣ ಗೌಡ ಸ್ವಾಗತಿಸಿದರು. ಡಾ. ಭೀಮಾಶಂಕರ್ ಜೋಶಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!