ಕಣದಿಂದ ಹಿಂದಕ್ಕೆ : ಕಾಂಗ್ರೆಸ್ ಮುಖಂಡರ ಆಹ್ವಾನ ತಿರಸ್ಕಾರ

ಕಣದಿಂದ ಹಿಂದಕ್ಕೆ : ಕಾಂಗ್ರೆಸ್ ಮುಖಂಡರ ಆಹ್ವಾನ ತಿರಸ್ಕಾರ

ವಿನಯ್‌ಕುಮಾರ್‌ ಜೊತೆ ರೇವಣ್ಣ ನಡೆಸಿದ ಸಂಧಾನ ವಿಫಲ

ದಾವಣಗೆರೆ, ಏ. 14- ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವಿನಯ್ ಕುಮಾರ್ ಜಿ.ಬಿ ಅವರನ್ನು ಮಾಜಿ ಸಚಿವ ಹೆಚ್. ಎಂ. ರೇವಣ್ಣ ನೇತೃತ್ವದ ಕಾಂಗ್ರೆಸ್ ನಿಯೋಗವು ಭೇಟಿ ಮಾಡಿ, ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿತಾದರೂ ವಿನಯ್ ಕುಮಾರ್ ಅವರು ನಯವಾಗಿ ತಿರಸ್ಕರಿಸಿದರು.

ಇಂದು ಬೆಳಿಗ್ಗೆ ರೇವಣ್ಣ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಮುಖಂಡರಾದ ಎಂ.ಟಿ. ಸುಭಾಶ್ ಚಂದ್ರ, ಬಿ. ವೀರಣ್ಣ, ಹೊನ್ನಾಳಿ ಸಿದ್ದಪ್ಪ, ಯೋಗೇಶ್ ಸೇರಿದಂತೆ ಹಲವು ಮುಖಂಡರು ವಿನಯ್ ಕುಮಾರ್ ಅವರ ಜೊತೆ ಚರ್ಚೆ ನಡೆಸಿ, ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದರೂ  ವಿನಯ್ ಕುಮಾರ್ ಅವರು ನೀವು ನನ್ನನ್ನು ಮಾತನಾಡಿಸಲು ಬಂದಿದ್ದು ಖುಷಿ ವಿಚಾರ ಎಂದರು.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಲೋಕಸಭಾ ಕ್ಷೇತ್ರದ ಜನರು ಒತ್ತಾಯ ಮಾಡುತ್ತಿದ್ದಾರೆ. ಜನರಿಗೆ ಕೊಟ್ಟಿರುವ ಮಾತು ತಪ್ಪಲು ಇಷ್ಟವಿಲ್ಲ. ನಿಮ್ಮ ಸಲಹೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹೆಚ್.ಎಂ. ರೇವಣ್ಣ ಅವರು ಮನೆಗೆ ಆಗಮಿಸುತ್ತಿದ್ದಂತೆ ನಗುಮೊಗದಿಂದಲೇ ಸ್ವಾಗತಿಸಿದ ವಿನಯ್ ಕುಮಾರ್ ಜೊತೆ ಕಾಂಗ್ರೆಸ್ ನಿಯೋಗವು ಮಾತುಕತೆ ನಡೆಸಿತು. 

ಈ ವೇಳೆ ಮಾತನಾಡಿದ ರೇವಣ್ಣ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದೆ. ನೀವು ಸ್ಪರ್ಧೆ ಮಾಡಿದರೆ ತೊಂದರೆ ಆಗುತ್ತದೆ. ಯೋಚನೆ ಮಾಡಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಮಾರ್, ಒಮ್ಮೆ ಮಾಡಿರುವ ನಿರ್ಧಾರ ವಾಪಸ್ ಪಡೆಯಲು ಸಾಧ್ಯವೇ ಇಲ್ಲ. ನಾನು ಸ್ಪರ್ಧೆ ಮಾಡುತ್ತಿದ್ದು, ಲೋಕಸಭಾ ಕ್ಷೇತ್ರದಲ್ಲಿ ನಾನು ಗೆಲ್ಲುವ ಎಲ್ಲಾ ಅವಕಾಶಗಳಿವೆ. ಕಳೆದ 30 ವರ್ಷಗಳಿಂದ ಎರಡು ಕುಟುಂಬಗಳದ್ದೇ ಪಾಳೇಗಾರಿಕೆ ಸಂಸ್ಕೃತಿ ಇದೆ. ಇದರ ವಿರುದ್ಧ ಜನರು ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ವರ್ಗದವರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನ್ನದು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರೂ ಸಹ ಕಣದಿಂದ ಹಿಂದೆ ಸರಿಯುವಂತೆ ವಿನಯ್ ಕುಮಾರ್ ಅವರಿಗೆ ಹೇಳುವಂತೆ ಹೇಳಿದ್ದಾರೆ. ಬಂದಿದ್ದೇನೆ. ಮುಂದೆ ಉತ್ತಮ ಅವಕಾಶಗಳಿವೆ. ಹಾಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬೇಡ ಎಂದು ರೇವಣ್ಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಮಾರ್, ದಾವಣಗೆರೆಯಲ್ಲಿ ಆಗುತ್ತಿರುವ ಬೆಳವಣಿಗೆ ಎಲ್ಲವೂ ಗೊತ್ತಿದೆ. ಜನರ ಮನದಲ್ಲಿ ವಿನಯ್ ಕುಮಾರ್ ಹೆಸರು ಅಚ್ಚಳಿಯದೇ ಉಳಿದಿದೆ. ಜನರ ಅಪೇಕ್ಷೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟ ಪಡಿಸಿದರು. 

ನನ್ನ ಸ್ಪರ್ಧೆ ಘೋಷಣೆಯಾದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ನಡುಕ ಶುರುವಾಗಿದೆ. ಎರಡೂ ಕುಟುಂಬಗಳಿಗೆ ಟಿಕೆಟ್ ನೀಡಲಾಗಿದೆ. ಸ್ವಾಭಿಮಾನದ ಸ್ಪರ್ಧೆ ಇದು. ಜನರು ಕೈಹಿಡಿಯುತ್ತಾರೆ ಎಂಬ ಭರವಸೆ ಇದೆ ಎಂದರು.

ಅಹಿಂದ ವರ್ಗ ಮಾತ್ರವಲ್ಲ, ಲಿಂಗಾಯತ ಸಮುದಾಯವೂ ಸೇರಿದಂತೆ ಎಲ್ಲಾ ಜಾತಿ, ಧರ್ಮದವರು ನನಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಅಚ್ಚರಿ ಫಲಿತಾಂಶ ಬಂದೇ ಬರುತ್ತದೆ ಎಂದು ರೇವಣ್ಣ ನೇತೃತ್ವದ ನಿಯೋಗಕ್ಕೆ ವಿನಯ್ ಕುಮಾರ್ ಅವರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

error: Content is protected !!