ದೇಹ ಮತ್ತು ಮನಸ್ಸಿನಲ್ಲಿ ಆಗುವ ಬದಲಾವಣೆಯೇ `ಒತ್ತಡ’

ದೇಹ ಮತ್ತು ಮನಸ್ಸಿನಲ್ಲಿ ಆಗುವ ಬದಲಾವಣೆಯೇ `ಒತ್ತಡ’

ಬಾಪೂಜಿ ಮಕ್ಕಳ ಆಸ್ಪತ್ರೆ ವಿವೇಕ ಪೋಷಕರ ಆರೋಗ್ಯ ಕಾರ್ಯಕ್ರಮದಲ್ಲಿ  ಮನೋವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹೆಚ್.ಹೇಮಾವತಿ 

ದಾವಣಗೆರೆ,ಏ.4-   ಮನುಷ್ಯನ ದೇಹ ಮತ್ತು ಮನಸ್ಸಿನಲ್ಲಿ ಆಗುವ ಬದಲಾವಣೆಗಳನ್ನು ಒತ್ತಡ ಎನ್ನಲಾಗುತ್ತದೆ  ಎಂದು ಜೆಜೆಎಂಎಂ ಕಾಲೇಜ್ ಮನೋವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹೆಚ್.ಹೇಮಾವತಿ ವಿವರಿಸಿದರು.

ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಇಂದು ವಿವೇಕ ಪೋಷಕರ ಆರೋಗ್ಯ ಕಾರ್ಯಕ್ರಮದಲ್ಲಿ `ಮಾನಸಿಕ ಒತ್ತಡ ನಿಭಾಯಿಸುವ ಸುಲಭ ಸೂತ್ರಗಳು’ ವಿಷಯವಾಗಿ ಅವರು ಮಾತನಾಡಿದರು. 

ಒಬ್ಬ ಆರೋಗ್ಯವಂತ ಮಾನವನಲ್ಲಿ ದೇಹ ಮತ್ತು ಮನಸ್ಸು ಎರಡೂ ತಮ್ಮ ತಮ್ಮ ಸಮತೋಲನವನ್ನು ಕಾಪಾಡಿಕೊಂಡಿರುತ್ತವೆ. ವಿವಿಧ ಕಾರಣಗಳಿಂದ ಈ ಸಮತೋಲನ ಏರುಪೇರು ಆಗುತ್ತದೆ. ಆಗ ಸಮತೋಲನವನ್ನು ಮತ್ತೆ ತರುವ ಪ್ರಕ್ರಿಯೆಯಲ್ಲಿ  ದೇಹ ಮತ್ತು ಮನಸ್ಸಿನಲ್ಲಿ  ಬದಲಾವಣೆ  ಆದಾಗ ಒತ್ತಡ  ಶುರುವಾಗುತ್ತದೆ.

ದೈಹಿಕ ಕಾಯಿಲೆಗಳು, ಜೀವನದಲ್ಲಿ ಬರುವ ವಿವಿಧ ಸಂಕಷ್ಟಗಳು, ನಾನಾ ರೀತಿಯ ಸೋಲುಗಳು  ವಿದ್ಯೆ, ನೌಕರಿ, ಪ್ರೇಮ ಪ್ರಕರಣಗಳಲ್ಲಿ  ಸಂಭವಿಸುವ ಸೋಲುಗಳಿರಬಹುದು, ಪ್ರೀತಿ ಪಾತ್ರರ  ಅಗಲಿಕೆ   ಮತ್ತು ವಿಚ್ಛೇದನ.  ಆರ್ಥಿಕ ಮುಗ್ಗಟ್ಟು ಸಹ ಒತ್ತಡದ  ಮುಖ್ಯ ಕಾರಣಗಳಾಗಿವೆ.

 ದೇಹದಲ್ಲಿ ನಾನಾ ರೀತಿಯ ನೋವುಗಳು, ಸುಸ್ತು, ನಿದ್ರಾಹೀನತೆ, ಹಸಿವು ಕಡಿಮೆಯಾಗುವುದು, ಲೈಂಗಿಕ ನಿರಾಸಕ್ತಿ, ಮನಸ್ಸಿನಲ್ಲಿ ಭಯ, ದುಃಖ, ಏಕಾಗ್ರತೆ ಕಡಿಮೆಯಾಗುವುದು, ಮರೆಗುಳಿತನ   ಮುಂತಾದ  ಲಕ್ಷಣಗಳು ಕಂಡುಬರುತ್ತವೆ.

ಸಾಮಾನ್ಯವಾಗಿ ಒತ್ತಡವನ್ನು ಅನಾರೋಗ್ಯಕರ ವಾಗಿ ನಿರ್ವಹಿಸಲಾಗುತ್ತದೆ. ಉದಾಹರಣೆೆಗೆ  ಸಮಸ್ಯೆಯನ್ನು ಒಪ್ಪಿಕೊಳ್ಳದಿರುವುದು, ಸಮಸ್ಯೆ ಇಲ್ಲ ಎಂದುಕೊಳ್ಳುವುದು, ಇತರರ ಮೇಲೆ ದೋಷ ಹೊರಿಸುವುದು, ಮದ್ಯಪಾನ, ಧೂಮಪಾನ ಮಾಡುವುದು. ಆದರೆ ಇವು ನಿರೀಕ್ಷಿತ ಪರಿಣಾಮ ನೀಡುವುದಿಲ್ಲ ಮತ್ತು ಇನ್ನೂ ಹೆಚ್ಚಿನ ತೊಂದರೆ ಉಂಟುಮಾಡುತ್ತವೆ ಎಂದು ಹೇಳಿದರು.

ಒತ್ತಡವನ್ನು ಆರೋಗ್ಯಕರವಾಗಿ ನಿರ್ವಹಿಸುವುದು ಹೇಗೆ ಎಂದು ವಿವರಿಸಿದ ಡಾ.ಹೇಮಾವತಿ, ಇರುವ ಸಮಸ್ಯೆಯನ್ನು ಒಪ್ಪಿಕೊಳ್ಳುವುದು, ಸಮಸ್ಯೆಯ ನಿವಾರಣೆಯ ಜವಾಬ್ದಾರಿ ತಾವೇ ಹೊತ್ತುಕೊಳ್ಳುವುದು. ಸಮಸ್ಯೆಯ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು. ಸಮಸ್ಯೆಯ ಬಗ್ಗೆ ಬಂಧು- ಮಿತ್ರರಲ್ಲಿ ಚರ್ಚೆ ಮಾಡುವುದು, ಕೈಗೊಂಡ ಕ್ರಮಗಳು ಫಲ ನೀಡಿದವೋ, ಇಲ್ಲವೋ ತಿಳಿಯುವುದು, ಬೇರೆ ಇನ್ನು ಯಾವ ರೀತಿಯಲ್ಲಿ ಬಗೆಹರಿಸಬಹುದು ಎಂದು ಯೋಚಿ ಸಬೇಕಾಗುತ್ತದೆ.

ಅಲ್ಲದೇ ಸಕಾರಾತ್ಮಕವಾಗಿ ಯೋಚಿಸುವುದು. ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದು. ಆತಂಕ ನಿವಾರಣೆಗಾಗಿ ಧ್ಯಾನ, ಯೋಗ, ವ್ಯಾಯಾಮ, ಸಂಗೀತ, ನೃತ್ಯ ಇತ್ಯಾದಿ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಮನೋವೈದ್ಯರಲ್ಲಿ ಆಪ್ತ ಸಮಾಲೋಚನೆ ಪಡೆಯುವುದು ಸೂಕ್ತ ಎಂದು  ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ  ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಡಾ.ರೇವಪ್ಪ, ಡಾ. ಮೃತ್ಯುಂಜಯ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ   ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!