ಆರೋಗ್ಯ ಮತ್ತು ಆಹಾರ ಭದ್ರತೆಗೆ ಜಲವೇ ಮೂಲ

ಆರೋಗ್ಯ ಮತ್ತು ಆಹಾರ ಭದ್ರತೆಗೆ ಜಲವೇ ಮೂಲ

`ವಿಶ್ವಜಲ ದಿನ’ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯ ನಿರ್ದೇಶಕ  ಡಾ. ಎಸ್.ಮಂಜಪ್ಪ

ದಾವಣಗೆರೆ,ಮಾ.31- 1993 ರಿಂದ ವಿಶ್ವ ಜಲದಿನ ಆಚರಿಸಲಾಗುತ್ತಿದೆ. ಈ ವರ್ಷ `ಶಾಂತಿಗಾಗಿ ನೀರಿನ ಸದ್ಭಳಕೆ’  ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಜಲದಿನವನ್ನು ಆಚರಿಸಲಾಗುತ್ತಿದೆ. ಸುಸ್ಥಿರ ನಾಗರಿಕತೆಗೆ ಆರೋಗ್ಯ ಭದ್ರತೆ, ಶಕ್ತಿಯ ಭದ್ರತೆ ಹಾಗೂ ಆಹಾರ ಭದ್ರತೆ ಎಂಬ ಮೂರು ಮಂತ್ರಗಳಿವೆ. ಈ ಮೂರರಲ್ಲೂ ನೀರು ಮಹತ್ವದ ಪಾತ್ರ ಗಳಿಸಿದೆ ಎಂದು ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ  ಡಾ. ಎಸ್.ಮಂಜಪ್ಪ ತಿಳಿಸಿದರು. 

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ಬಾಲಭವನ ಸಮಿತಿ, ಸಂಯುಕ್ತವಾಗಿ ನಗರದ ಶ್ರೀಮತಿ ಸರ್ವಮಂಗಳಮ್ಮ ಮಾಗ ನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಳೆದ ವಾರ ಏರ್ಪಡಿಸಿದ್ದ ವಿಶ್ವಜಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು. 

ನಾವಿಂದು ಪ್ರಯೋಗ ಶಾಲೆಯಲ್ಲಿಯೂ ನೀರನ್ನು ತಯಾರಿಸಬಹುದು. ಆದರೆ ಅದು ನಮ್ಮ ಬಳಕೆಯ ಪ್ರಮಾಣದಷ್ಟಲ್ಲ. ಆದ್ದರಿಂದ ಇರುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದರು. ಸಕಲ ಜೀವಚರಗಳಿಗೆಲ್ಲ ನೀರೇ ಮೂಲಾಧಾರ. ನೀರಿಲ್ಲದೆ ನಾವ್ಯಾರು ಇಲ್ಲ. ಆದ್ದರಿಂದ ನೀರಿನ ಸದ್ಭಳಕೆ ಮತ್ತು ಜಾಗೃತಿಗಾಗಿ ವಿಶ್ವ ಜಲದಿನ ಆಚರಿಸುತ್ತಿರುವುದು ಸಂತೋಷದಾಯಕ ವಾಗಿದೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಕೆ.ಸಿದ್ದೇಶ್,  ಭೂಮಿಯ ಮೇಲೆ ಶೇ.70% ಕ್ಕಿಂತ ಹೆಚ್ಚು ಭಾಗ ನೀರು ಆವರಿಸಿದ್ದರು. ಕುಡಿಯಲು ಮತ್ತು ಬಳಕೆಗೆ ಯೋಗ್ಯವಾದ ನೀರು 0.0003ರಷ್ಟು ಇರುವುದು ನಮಗೆಲ್ಲ ತಿಳಿದಿದೆ. ಆದ್ದರಿಂದ ನದಿ, ಕೆರೆ, ಅಂತರ್ಜಲ ಹಾಗೂ ವಾಯುಮಂಡಲ ಸಂರಕ್ಷಣೆಯತ್ತ ಗಮನ ಹರಿಸಲು ತಿಳಿಸಿದರು. 

ನೀರಿನ ಕೊರತೆ ಉಂಟಾದಾಗ ನಾವು ನೀರಿನ ಲಭ್ಯತೆಯ ಹೊಸ ಆಕರದೆಡೆಗೆ ಚಿಂತಿಸುತ್ತೇವೆಯೋ ಹೊರತು ನೀರನ್ನು ಕೂಡಿಡುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಇದರಿಂದಾಗಿ ನಾವು ಮತ್ತಷ್ಟು ನೀರಿನ ಅಭಾವ ಎದುರಿಸುವಂತಾಗಿದೆ. ಪ್ರತಿ ಬಾರಿ ಸರ್ಕಾರ ಜಲನಿರ್ವಹಣೆಗೆ ಮೀಡಲಿಡುವ ನೂರಾರು ಕೋಟಿ ಹಣದ ಬಹುಭಾಗ ಹೊಸ ಕೊಳವೆ ಬಾವಿ ಕೊರೆಸು ವುದಕ್ಕೆ ವಿನಿಯೋಗವಾಗುತ್ತದೆ. ಇದು ತಾತ್ಕಾಲಿಕ ಪರಿಹಾರ ನೀಡಿದರೂ  ತೊಂದರೆ ಮಟ್ಟವನ್ನೆಚ್ಚಿಸಿ ಮುಂದೆ ಜಲಕ್ಷಾಮವನ್ನು ತರುತ್ತದೆ ಎಂದು ಎಚ್ಚರಿಸಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ.ಜೆ.ಬಿ.ರಾಜ್ ಮಾತನಾಡಿ, ಜಲಕ್ಷಾಮ ನಿವಾರಿಸುವ ಸಲುವಾಗಿ ಮೋಡ ಬಿತ್ತನೆಯಂತಹ ಕ್ರಮಗಳನ್ನು ಅನುಸರಿಸಲಾ ಗುತ್ತಿದೆ. ಆದರೆ ರಾಸಾಯನಿಕ ಬಳಕೆಗಳಿಂದ ತರಿಸಿದ ಮಳೆ,  ಇದು ತುಂಬಾ ವೆಚ್ಚದಾಯಕವಾಗಿದೆ. ಕುಡಿಯುವ ನೀರಿಗಾಗಿ ಈಗ ವಾಯುಮಂಡಲದಲ್ಲಿನ ನೀರಾವಿ ತಣಿಸಿ, ಶುದ್ಧ ಕುಡಿಯುವ ನೀರನ್ನು ನೀಡುವ ಯಂತ್ರಗಳು ಬರುತ್ತಿವೆ. 2005ರಲ್ಲಿಯೇ ಮುಂಬೈ ನಗರದಲ್ಲಿ ವಾಟರ್ ಮೇಕರ್ ಹೆಸರಿನ ಯಂತ್ರ ಈ ಕಾರ್ಯವನ್ನು ಸಾಧಿಸಿತ್ತು. ಆದರೆ ಇದು ಸಹ ನೀರಿನ ಇನ್ನೊಂದು ಆಕರಕ್ಕೆ ಕೈಹಾಕುವ ದುಸ್ಸಾಹಸವಾಗಿದೆಯೇ ಹೊರತು, ಜಲಸಂರಕ್ಷಣೆ ಯಾಗುವುದಿಲ್ಲ ಎಂದು ವಿಷಾದಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ   ಎಂ.ಬಿ.ಸಂಗಮೇಶ್ವರಗೌಡ್ರು ವಹಿಸಿದ್ದರು. ನಿಮ್ಹಾನ್ಸ್‍ನ ಯುವ ಸ್ಪಂದನ ಕಾರ್ಯಕ್ರಮದ ರಾಜ್ಯ ಸಂಯೋಜಕ ನಾಗರಾಜ ರಂಗಣ್ಣನವರ್,   ಕರಾವಿಪ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ, ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕರಾದ ಎಸ್.ಬಿ.ಶಿಲ್ಪ  ಕಾಲೇಜಿನ ಪ್ರಾಚಾರ್ಯರಾದ  ಡಾ.ಎಂ.ಪಿ.ಪ್ರೇಮ ಉಪಸ್ಥಿತರಿದ್ದರು.

error: Content is protected !!