ದಾವಣಗೆರೆ, ಮಾ. 19- ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಆರಂಭಗೊಂಡಿದ್ದು, ನಗರದಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಸೋಮವಾರ ರಾತ್ರಿಯಿಂದಲೇ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವಿಗೆ ಹೋಳಿಗೆ, ಅನ್ನ- ಮೊಸರು ಎಡೆ ಅರ್ಪಿಸಿ, ದೇವಿಯ ದರ್ಶನ ಪಡೆದು ಧನ್ಯತಾಭಾವ ಹೊಂದಿದರು.
ಮಹಿಳೆಯರು ಕಳಸದಾರತಿ ಹಿಡಿದುಕೊಂಡು, `ದುಗ್ಗಮ್ಮ ನಿನ್ನಾಲ್ಕುದೋ, ಉದೋ’ ಎಂದು ದೇವಿಯ ನಾಮಸ್ಮರಣೆ ಮಾಡುತ್ತಾ ದೇವಸ್ಥಾನದ ಬಳಿ ತೆರಳಿ ದೀಡು ನಮಸ್ಕಾರ ಮೊದಲಾದ ಹರಕೆ ಸಲ್ಲಿಸುವ ದೃಶ್ಯ ಕಂಡು ಬಂತು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ವಾಹನ ಪಾರ್ಕಿಂಗ್ ನಿಷೇಧಿಸಲಾಗಿತ್ತು. ದೇವಸ್ಥಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಭಕ್ತರ ಸಂಖ್ಯೆ ಇಳಿಮುಖ
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ದೇವಸ್ಥಾನ ಬಳಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ರಾತ್ರಿಯೇ ಜನರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದರು. ಈ ಬಾರಿ ಸರದಿ ಸಾಲಿನ ಉದ್ದವೂ ಕಡಿಮೆಯೇ.
ಇನ್ನು ದೇವಸ್ಥಾನ ಮುಂಭಾಗವೂ ಜನದಟ್ಟಣಿ ಕಡಿಮೆ ಇತ್ತು. ದಾವಣಗೆರೆ ಸಮೀಪದ ಶಾಮನೂರು, ಮಲೇಬೆನ್ನೂರು ಸೇರಿದಂತೆ ಕೆಲ ಗ್ರಾಮಗಳಲ್ಲಿಯೂ ಜಾತ್ರೆ ನಡೆಯುತ್ತಿದೆ. ಮಕ್ಕಳಿಗೆ ಪರೀಕ್ಷಾ ಸಮಯ, ಬಿಸಿಲು ಇತರೆ ಕಾರಣಗಳಿಂದಾಗಿ ಭಕ್ತರ ಸಂಖ್ಯೆ ಇಳಿಮುಖವಾಗಿದೆ ಎನ್ನಲಾಗಿದೆ.
ನೀರು, ಮಜ್ಜಿಗೆ, ಮೊಸರನ್ನ ವಿತರಣೆ
ಈ ಬಾರಿ ನೀರು, ಮಜ್ಜಿಗೆ, ಪ್ರಸಾದ ವಿತರಿಸುವವರ ಸಂಖ್ಯೆ ಹೆಚ್ಚಾಗಿತ್ತು. ದೇವಸ್ಥಾನದ ಮುಂಭಾಗದಿಂದ ವಿರಕ್ತಮಠದ ರಸ್ತೆಯಲ್ಲಿರುವ ಶ್ರೀ ವಿನಾಯಕ ದೇವಸ್ಥಾನದ ವರೆಗೂ ಹಲವರು ನೀರು, ಮಜ್ಜಿಗೆ, ಪಾಲಕ್ ಜ್ಯೂಸ್,
ದೋಸೆ, ಮೊಸರನ್ನ, ಪುಳಿಯೋಗರೆ ಸೇರಿದಂತೆ ಪ್ರಸಾದ ವಿತರಿಸಲಾಗುತ್ತಿತ್ತು.
ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಮುಂಭಾಗ ವಾಸವಿ ಯುವಜನ ಸಂಘದಿಂದ ಮಜ್ಜಿಗೆ ವಿತರಿಸಲಾಯಿತು. ಸಂಘದ ಪದಾಧಿಕಾರಿಗಳು, ಮಕ್ಕಳು ಸಂತಸದಿಂದಲೇ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸುತ್ತಿರುವುದು ಕಂಡು ಬಂತು.
ಪ್ರಗತಿ ಪಬ್ಲಿಕ್ ಟ್ರಸ್ಟ್ (ಆರ್ಯವೈಶ್ಯ ಸೇವಾ ಸಂಸ್ಥೆ) ಯಿಂದ ಸಾರ್ವಜನಿಕರಿಗೆ ಮೊಸರನ್ನ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಟ್ರಸ್ಟ್ನ ಕಾರ್ಯದರ್ಶಿ ನಾಗರಾಜ್ ಗುಪ್ತಾ, ಕಳೆದ 30 ವರ್ಷಗಳಿಂದ ಪ್ರತಿ ಜಾತ್ರೆಯಲ್ಲೂ ಭಕ್ತರಿಗೆ ಉಚಿತವಾಗಿ ಮೊಸರನ್ನ ವಿತರಿಸಲಾಗುತ್ತಿದೆ ಎಂದರು.
ಉಚಿತ ರಕ್ತ ತಪಾಸಣೆ: ಜಾತ್ರೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ಉಚಿತ ರಕ್ತದ ಗುಂಪಿನ ತಪಾಸಣೆ ಹಮ್ಮಿಕೊಳ್ಳಲಾಗತ್ತು.
ಇಂದು ಮಾಂಸದ್ದೇ ಘಾಟು: ಬೆಣ್ಣೆ ನಗರಿಯಲ್ಲಿ ಇಂದು ಬುಧವಾರ ಬೆಣ್ಣೆ ವಾಸನೆಗಿಂತ ಮಟನ್ ಮಸಾಲೆ ವಾಸನೆಯೇ ಹೆಚ್ಚು. ಕಳೆದ ಕೆಲ ದಿನಗಳಿಂದ ಮನೆಯ ಮುಂದೆ ಹುಲ್ಲು ತಿನ್ನು ತ್ತಿದ್ದ ಕುರಿಗಳು ಇಂದು ದೇವಿಗೆ ಅರ್ಪಿತವಾಗುವ ಸಮಯ. ನಂತರ ಬಾಡೂಟದ ಸಂಭ್ರಮ. ಮನೆಗಳ ಮುಂದೆ, ತಾರಸಿ ಮೇಲೆ ಎಲ್ಲೆಲ್ಲೂ ಪೆಂಡಾಲ್ಗಳನ್ನು ಅಳವಡಿಸಿದ್ದು, ಬೆಳಗಿನ ಜಾವ ಚರಗ ಚೆಲ್ಲುತ್ತಿದ್ದಂತೆ ಸಾವಿರಾರು ಕುರಿ-ಕೋಳಿಗಳ ಬಲಿಗೆ ನಗರ ಸಾಕ್ಷಿಯಾಗಲಿದೆ.
ಕುರಿಗಳ ಚರ್ಮ ಖರೀದಿಸಲು ಚರ್ಮ ವ್ಯಾಪಾರಿಗಳು ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಾಣಿಗಳ ಬಲಿ ನಡೆಯುತ್ತಿದ್ದಂತೆ ಅವರ ವ್ಯಾಪಾರ ಗರಿಗೆದರುತ್ತದೆ. ಅಂದಾಜಿನ ಪ್ರಕಾರ 300 ರಿಂದ 500 ರೂ.ಗಳ ವರೆಗೆ ಒಂದು ಕುರಿಯ ಚರ್ಮ ಮಾರಾಟವಾಗುತ್ತದೆ.