ದಾವಣಗೆರೆ, ಮಾ18- ಮನೆಯ ಮುಂದೆ ಪೆಂಡಾಲ್ಗಳು, ಗಿರ ಗಿರನೆ ತಿರುಗುವ ರುಬ್ಬುವ ಯಂತ್ರಗಳ ಸದ್ದು, ಹುಲ್ಲು ತಿನ್ನುತ್ತಾ ಮೇ ಮೇ ಎನ್ನುವ ಕುರಿಗಳು, ಮನೆಗಳಲ್ಲಿ ಬೀಗರು-ಬಂಧುಗಳ ಕಲರವ !
ಹೌದು, ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ದಾವಣಗೆರೆ ದುಗ್ಗಮ್ಮನ ಜಾತ್ರೆ ಆರಂಭವಾಗಿದೆ. ಜಾತ್ರೆಯ ಸಂಭ್ರಮ ಜೋರಾಗಿಯೇ ಇದೆ. ನಗರದ ಹಳೇ ಭಾಗದಲ್ಲಂತೂ ಜಾತ್ರೆ ಕಳೆ ಕಟ್ಟಿದೆ. ನೆಂಟರಿಷ್ಟರು ಠಿಕಾಣಿ ಹೂಡಿದ್ದಾಗಿದೆ.
ಇಂದು ದೇವತೆಗೆ ಸಿಹಿ ಅಡುಗೆ ಸಮರ್ಪಣೆ, ನಾಳೆ ಬುಧವಾರ ಬಾಡೂಟ. ಈ ಬಾಡೂಟಕ್ಕೆ ಸ್ನೇಹಿತರು, ನೆಂಟರ ಆಹ್ವಾನ ಜೋರಾಗಿಯೇ ಇದೆ. ಈ ಮಾಂಸದೂಟದ ಖರ್ಚುಕನಿಷ್ಟ 20 ಸಾವಿರ ರೂ.ಗಳಿಂದ ಲಕ್ಷದ ಮೇಲೆಯೇ ಇರುತ್ತದೆ. ಇದು ಕೋಟ್ಯಾಂತರ ರೂಪಾಯಿಗಳ ವಹಿವಾಟೂ ಕೂಡ.
ಬರ ಹಾಗೂ ಬಿಸಿಲು ಇದ್ಯಾವುದೂ ಲೆಕ್ಕಕ್ಕೇ ಇಲ್ಲ ಎನ್ನುವಂತೆ ಜನರು ಜಾತ್ರೆಗೆ ಸಿದ್ಧಗೊಂಡಿದ್ದಾರೆ. ಈಗಾಗಲೇ ದೇವಾಲಯದ ಮುಂದೆ ಮೈಸೂರು ಅರಮನೆ ಮಾದರಿಯ ಪೆಂಡಾಲ್ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ಈಗಲೇ ಜನರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಇತ್ತ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಮೂಲ ಸೌಲಭ್ಯಗಳ ಕೊರತೆಯಾಗದಂತೆ ಕ್ರಮ ವಹಿಸಿದ್ದರೆ. ಪೊಲೀಸ್ ಇಲಾಖೆ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಂಡಿದೆ.