ದಾವಣಗೆರೆ, ಮಾ.5 – ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಹರಿಹರದ ಶಾಸಕ ಬಿ.ಪಿ.ಹರೀಶ್ ನಡುವೆ ವಾಕ್ಸಮರ ನಡೆದಿದೆ.
ಸಚಿವ ಎಸ್ಸೆಸ್ಸೆಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದ್ದ ವೇಳೆ ಅಕ್ರಮವಾಗಿ ಡೋರ್ ನಂಬರ್ ನೀಡಿ, ಲೇ ಔಟ್ ಫೈನಲ್ ಮಾಡಲಾಗಿದೆ. ತಕ್ಷಣ ಅದನ್ನು ವಾಪಾಸ್ ಪಡೆಯಬೇಕು. ಯಾವ ಕಾರಣಕ್ಕೂ ಡೋರ್ ನಂಬರ್ ನೀಡಬಾರದು ಎಂದು ಶಾಸಕ ಹರೀಶ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ಡೋರ್ ನಂಬರ್ ನೀಡುವುದು ಅಲ್ಲಿನ ನಗರಸಭೆಯೇ ಹೊರತು, ದೂಡಾ ಅಲ್ಲ. ಒಂದು ವೇಳೆ ಯಾವುದೇ ಲೇಔಟ್, ಡೋರ್ ನಂಬರ್ ಬಗ್ಗೆ ಅನುಮಾನವಿದ್ದರೆ ಲಿಖಿತವಾಗಿ, ನಿರ್ಧಿಷ್ಟವಾಗಿ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನೀವು ಬಿಜೆಪಿಯವರು ಐದು ವರ್ಷ ಲೂಟಿ ಹೊಡೆದು ಹೋದವರು ಎಂದು ಇದೇ ವೇಳೆ ಸಚಿವರು ಕುಟುಕಿದರು. ಈ ಸಂದರ್ಭದಲ್ಲಿ ಸಚಿವ ಮಲ್ಲಿಕಾರ್ಜುನ್ ಹಾಗೂ ಶಾಸಕ ಹರೀಶ್ ನಡುವೆ ಮಾತಿನ ಚಕಮಕಿ ನಡೆಯಿತು.
ದೂಡಾದಿಂದ ಶಾಸಕರ ಗಮನಕ್ಕೆ ತರದೇ ಅಕ್ರಮವಾಗಿ ಡೋರ್ ನಂಬರ್, ಲೇಔಟ್ ಅಪ್ರೂವಲ್ ನೀಡಲಾಗಿದೆ. ನಾನೂ ಸಹ ದೂಡಾ ಸದಸ್ಯ. ನಮ್ಮ ಗಮನಕ್ಕೆ ತರದೇ, ಹೇಗೆ ಲೇಔಟ್ಗೆ ಅಪ್ರೂವಲ್ ಕೊಟ್ಟಿದ್ದೀರಿ ? ಎಂದು ಹರೀಶ್ ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು.