ಸರ್ವಜ್ಞನ ತ್ರಿಪದಿಗಳಲ್ಲಿ ಸರ್ವಕಾಲಿಕ ಸತ್ಯ, ಜೀವನದ ಪಾಠವಿದೆ : ಡಿಸಿ

ಸರ್ವಜ್ಞನ ತ್ರಿಪದಿಗಳಲ್ಲಿ ಸರ್ವಕಾಲಿಕ ಸತ್ಯ, ಜೀವನದ ಪಾಠವಿದೆ : ಡಿಸಿ

ದಾವಣಗೆರೆ, ಫೆ.20- ಹದಿನಾರನೇ ಶತಮಾನದಲ್ಲಿ ಹಿರೇಕೆರೂರು ತಾಲ್ಲೂಕು ಅಬ್ಬಲೂರು ಗ್ರಾಮದಲ್ಲಿ ಹುಟ್ಟಿ ಬೆಳೆದಂತಹ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಸರ್ವಕಾಲಿಕ ಸತ್ಯ ಮತ್ತು ಜೀವನದ ಪಾಠವನ್ನು ಪ್ರತಿಯೊಬ್ಬರಿಗೂ ತಿಳಿಸಿ ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಕಂಬಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಸರ್ವಜ್ಞ ಜಯಂತಿಯಲ್ಲಿ ಸಂತ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಸರ್ವಜ್ಞನು ರಚಿಸಿದ ತ್ರಿಪದಿಗಳಲ್ಲಿ ಅತ್ಯಂತ ಸರಳ ಕನ್ನಡ ಭಾಷೆ ಇದೆ. ವೈಚಾರಿಕತೆ ಮತ್ತು ಸತ್ಯಕ್ಕೆ ಬಹಳ ಹತ್ತಿರವಾದಂತಹ ಹಲವು ಒಗಟುಗಳು ಇದರಲ್ಲಿ ಸೇರಿವೆ. ಒಟ್ಟು ಒಂದು ಸಾವಿರಕ್ಕೂ ಹೆಚ್ಚು ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಈಗಾಗಲೇ ಸರ್ಕಾರ ಇವುಗಳ ಸಂಗ್ರಹಣೆ ಮಾಡಿ ಹೊರತಂದಿದೆ ಎಂದರು.

ಇತಿಹಾಸ ತಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ಅವರ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯ ಕುರಿತ ತ್ರಿಪದಿಗಳಾಗಿವೆ ಎಂದರು.

ಸರ್ವಜ್ಞ ಅಧ್ಯಾತ್ಮಿಕ ಚಿಂತಕರು, ಸಮಾಜ ಪರಿವರ್ತಕರು, ಇವರು ಮಾಡಿದಂತಹ ತತ್ವ, ಬೋಧನೆಗಳು ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶ ಹೊಂದಿವೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಕೆ.ಸಿ.ಲೋಕೇಶ್ ಉಪನ್ಯಾಸ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಅಪರ ಜಿಲ್ಲಾಧಿಕಾರಿ ಸೈಯ್ಯದ್ ಆಫ್ರಿನ್ ಭಾನು ಎಸ್.ಬಳ್ಳಾರಿ, ಸಂತ ಸರ್ವಜ್ಞ ಸಂಘದ ಅಧ್ಯಕ್ಷ ಪುಷ್ಪರಾಜು, ಪ್ರಧಾನ ಕಾರ್ಯದರ್ಶಿ ಇ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಮೂಗಬಸಪ್ಪ, ಯುವ ಸೈನ್ಯದ ಅಧ್ಯಕ್ಷ ಎನ್.ಶಿವಕುಮಾರ್, ಹರಿಹರ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಕಂಬಾರ, ಉಪಾಧ್ಯಕ್ಷ ಈರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ನಿವೃತ್ತ ಮುಖ್ಯ ಶಿಕ್ಷಕ ಬಸವರಾಜಪ್ಪ ಬಾತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!