ಕ್ರೀಡಾಕೂಟದಿಂದ ಯುವಕರಲ್ಲಿ ನವ ಚೈತನ್ಯ

ಕ್ರೀಡಾಕೂಟದಿಂದ ಯುವಕರಲ್ಲಿ ನವ ಚೈತನ್ಯ

ತರಳಬಾಳು ಹುಣ್ಣಿಮೆ ಗ್ರಾಮೀಣ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ಸಿ. ಉಮಾಪತಿ

ದಾವಣಗೆರೆ, ಫೆ.18- ಕ್ರೀಡಾಕೂಟದಿಂದ ಯುವಕ-ಯುವತಿಯರಲ್ಲಿ ನವ ಚೈತನ್ಯ ತುಂಬುವುದರ ಜೊತೆಗೆ ಆರೋಗ್ಯದ ದೃಢತೆಯನ್ನು ಕಾಪಾಡುವಲ್ಲಿ ಇದು ಸಹಕಾರಿಯಾಗುತ್ತದೆ ಎಂದು ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಹೇಳಿದರು.

ಸಿರಿಗೆರೆಯಲ್ಲಿ ಇದೇ ತಿಂಗಳು 22 ರಿಂದ 24ರ ವರೆಗೆ ಜರುಗಲಿರುವ 76ನೇ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಭಾನುವಾರ ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಯುವ ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ  ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕವಾಗಿ ಹೊಸ ಹುರುಪು, ಉತ್ಸಾಹ ತುಂಬುತ್ತದೆ. ಬದುಕಿಗೆ ನವೋಲ್ಲಾಸ ಬರುತ್ತದೆ. ಆದ್ದರಿಂದ ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು‌.

ಸಮಾಜದ ಮುಖಂಡ ಶಿವನಹಳ್ಳಿ ರಮೇಶ್ ಮಾತನಾಡಿ, ತರಳಬಾಳು ಜಗದ್ಗುರುಗಳು ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಗ್ರಾಮೀಣ ಯುವಕ-ಯುವತಿಯರಲ್ಲಿ ನವೋತ್ಸಾಹ ತುಂಬಿ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ತಾಲ್ಲೂಕು ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಮಾಜದ  ಅಧ್ಯಕ್ಷ ಹೆಚ್.ಡಿ. ಮಹೇಶ್ವರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ  ತರಳಬಾಳು ಜಗದ್ಗುರುಗಳವರು ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಈ ಹೊಸ ಪರಿಕಲ್ಪನೆಗೆ ನಾಂದಿ ಹಾಡಿದ್ದಾರೆ ಎಂದರು.

ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು‌. ಸಂಘದ  ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರ ಗೌಡ್ರು, ಸಮಾಜದ ಮುಖಂಡರಾದ ಶ್ರೀನಿವಾಸ್ ಶಿವಗಂಗಾ, ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ,  ಶಶಿಧರ ಹೆಮ್ಮನಬೇತೂರು,  ಉಮೇಶ್ ಮಾಗನೂರ್, ಕುಮಾರ್ ಮಳ್ಳೇಕಟ್ಟೆ, ಕೊರಟಿಕೆರೆ ಶಿವ ಕುಮಾರ್, ರವಿಕುಮಾರ್ ಉಪಸ್ಥಿತರಿದ್ದರು. ವಿನ್ನರ್ ಅಕಾಡೆಮಿ ಸಂಸ್ಥಾಪಕ ಶಿವರಾಜ್ ಕಬ್ಬೂರ್  ನಿರೂಪಿಸಿದರು.

error: Content is protected !!