ಡಿಡಿಸಿಸಿ ಬ್ಯಾಂಕಿಗೆ ಬಕ್ಕೇಶಪ್ಪ ಸಾರಥ್ಯ

ಡಿಡಿಸಿಸಿ ಬ್ಯಾಂಕಿಗೆ ಬಕ್ಕೇಶಪ್ಪ ಸಾರಥ್ಯ

ಉಪಾಧ್ಯಕ್ಷರಾಗಿ ಹನಗವಾಡಿ ಡಿ. ಕುಮಾರ್

ದಾವಣಗೆರೆ, ಫೆ.7- ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಕೋಗುಂಡಿ ಬಕ್ಕೇಶಪ್ಪ ಅವಿರೋಧವಾಗಿ ಚುನಾಯಿತರಾಗಿದ್ದಾರೆ.

ಹರಿಹರ ತಾಲ್ಲೂಕಿನ ಹನಗವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಡಿ.ಕುಮಾರ್ ಅವರೂ ಸಹ ಡಿಡಿಸಿಸಿ ಬ್ಯಾಂಕ್ ಉಪಾ ಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ 15 ದಿನಗಳ ಹಿಂದೆ ಡಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಎಲ್ಲಾ 13 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಅತ್ಯಾಧಿಕ 10 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು ಮತ್ತು ಉಳಿದ ಮೂರು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಚುನಾವಣೆ ನಂತರ ಡಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವರಿಷ್ಠರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು, ಮೌಖಿಕವಾಗಿ ನೀಡಿದ್ದ ನಿರ್ದೇಶನದ ಮೇರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಹಿರಿಯ ಸಹಕಾರಿ ಧುರೀಣ ಜೆ.ಆರ್.ಷಣ್ಮುಖಪ್ಪ ಸೂಚಕರಾಗಿದ್ದರೆ, ಹೆಚ್.ಕೆ.ಬಸಪ್ಪ ಅನುಮೋದಕರಾಗಿದ್ದರು. ಶ್ರೀಮತಿ ಜಿ.ನಜ್ಮಾ ಚುನಾವಣಾಧಿಕಾರಿಯಾಗಿದ್ದರು.

ನಿರ್ದೇಶಕರುಗಳಾದ ಜೆ.ಆರ್.ಷಣ್ಮುಖಪ್ಪ, ಜೆ.ಎಸ್.ವೇಣುಗೋಪಾಲ ರೆಡ್ಡಿ, ಮುದೇಗೌಡ್ರ ಗಿರೀಶ್, ಬೇತೂರು ಕರಿಬಸಪ್ಪ, ಡಿ.ಎಸ್.ಸುರೇಂದ್ರ, ಹೆಚ್.ಕೆ.ಬಸಪ್ಪ, ಡಿ.ಜಿ.ವಿಶ್ವನಾಥ್, ಜಿ.ಎಸ್.ಸಂತೋಷ್, ಕೆ.ಸುರೇಶ್, ಬಿ.ಶೇಖರಪ್ಪ, ಜಿ.ಎನ್.ಸ್ವಾಮಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಕೋಗುಂಡಿ ಬಕ್ಕೇಶಪ್ಪ : ಕೈಗಾರಿಕೋದ್ಯಮಿಯೂ ಆಗಿರುವ ಕೋಗುಂಡಿ ಬಕ್ಕೇಶಪ್ಪ, ದಾವಣಗೆರೆ ಜಿಲ್ಲೆಯ ಅಕ್ಕಿ ಗಿರಿಣಿದಾರರ ಸಂಘದ ಕಾರ್ಯದರ್ಶಿಯಾಗಿದ್ದು, ಪ್ರತಿಷ್ಠಿತ ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹಾಲಿ ಅಧ್ಯಕ್ಷರಾಗಿದ್ದಾರೆ. 

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ಬಕ್ಕೇಶಪ್ಪ ಅವರನ್ನು  ಡಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು, ಕೋಗುಂಡಿ ಬಕ್ಕೇಶಪ್ಪ ಅವರ ಮೇಲೆ ಒತ್ತಡ ತಂದು ನಾಮಪತ್ರ ಹಾಕಿಸಿದ್ದರು. ಇದೀಗ, ಆ ಬ್ಯಾಂಕಿನ ಸಾರಥ್ಯವನ್ನೂ ಅವರಿಗೆ ವಹಿಸಿದ್ದಾರೆ.

ತಮ್ಮನ್ನು ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಸಹಕಾರಿಸಿರುವ ಸಚಿವ ಶಾಮನೂರು ಮಲ್ಲಿಕಾರ್ಜುನ್, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರುಗಳಿಗೆ ಕೃತಜ್ಞತೆ ಸಲ್ಲಿಸಿರುವ ಕೋಗುಂಡಿ ಬಕ್ಕೇಶಪ್ಪ, ಡಿಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.

ಅಭಿನಂದನೆ : ಚುನಾವಣೆ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು. 

ಸಹಕಾರ ಮತ್ತು ಕೈಗಾರಿಕೋದ್ಯಮದಲ್ಲಿ ಹೆಸರು ಮಾಡಿರುವ ಕೋಗುಂಡಿ ಬಕ್ಕೇಶಪ್ಪ ಅವರು ಡಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿರುವ ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಐಗೂರು ಸಿ.ಚಂದ್ರಶೇಖರ್ ಅವರು, ಬಕ್ಕೇಶಪ್ಪ ಅಧ್ಯಕ್ಷಾವಧಿಯಲ್ಲಿ ಡಿಡಿಸಿಸಿ ಬ್ಯಾಂಕ್ ಅಭಿವೃದ್ಧಿ ಕಾಣುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಡಿಡಿಸಿಸಿ ಬ್ಯಾಂಕ್‌ನ ಸಾರಥ್ಯ ವಹಿಸಿರುವ ಕೋಗುಂಡಿ ಬಕ್ಕೇಶಪ್ಪ ಅವರ ಆಯ್ಕೆಯಿಂದಾಗಿ ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ ಗರಿ ಮೂಡಿಸಿದಂತಾಗಿದೆ ಎಂದಿರುವ ಆ ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ನಿರ್ದೇಶಕರುಗಳಾದ ಬಿ.ಸಿ.ಉಮಾಪತಿ, ದೇವರಮನಿ ಶಿವಕುಮಾರ್, ಟಿ.ಜಿ.ಜಯರುದ್ರೇಶ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಪಲ್ಲಾಗಟ್ಟಿ ಶಿವಾನಂದ ಮತ್ತಿತರರು ಬಕ್ಕೇಶಪ್ಪ ಅವರನ್ನು ಅಭಿನಂದಿಸಿದ್ದಾರೆ.

error: Content is protected !!