ಡಾ. ಅಂಬೇಡ್ಕರ್‌ರ ಸಂವಿಧಾನ ತಳ ಸಮುದಾಯಗಳಿಗೆ ವರದಾನವಾಗಿದೆ

ಡಾ. ಅಂಬೇಡ್ಕರ್‌ರ ಸಂವಿಧಾನ ತಳ ಸಮುದಾಯಗಳಿಗೆ ವರದಾನವಾಗಿದೆ

ಜಗಳೂರಿನಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅಭಿಮತ

ಜಗಳೂರು, ಫೆ.5- ತಳ ಸಮುದಾಯಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ವರದಾನವಾಗಿದ್ದು,  ಮೀಸಲಾತಿ ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ  ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆದಿಜಾಂಭವ ಸಮಾಜದಿಂದ ನೂತನ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ,  ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅತ್ಯಂತ ಹಿಂದುಳಿದ ಮಾದಿಗ ಸಮಾಜ ಜಾಗೃತವಾಗಿ  ಶಿಕ್ಷಣ, ಸಂಘಟನೆಯೊಂದಿಗೆ  ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಟದ ಅನಿವಾರ್ಯತೆ ಇದೆ. ಕಾರಣ ಸಂವಿಧಾನ ವಿರೋಧಿ ಶಕ್ತಿಗಳಿಂದ ದೇಶದ ಸಂವಿಧಾನ ಅಪಾಯದಂಚಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಸಾಮರಸ್ಯತೆಗೆ ಆದ್ಯತೆ ನೀಡುವೆ. ದಲಿತ ಸಮುದಾಯಕ್ಕೆ ರಕ್ಷಣೆಗಿರುವ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಾರದು‌. ಇತರೆ ಸಮುದಾಯಗಳೊಂದಿಗೆ ಅನ್ಯೋನ್ಯತೆಯಿಂದ ಜೀವನ ಸಾಗಿಸಬೇಕು. ಅಲ್ಲದೆ ಮೌಢ್ಯತೆ, ಅಂಧಕಾರದಿಂದ ಹೊರಬಂದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಅಂಬೇಡ್ಕರ್ ನಿಧಿ ಸಂಗ್ರಹಣೆಗೆ ಚಾಲನೆ: ಅಂಬೇಡ್ಕರ್ ನಿಧಿ ಸಂಗ್ರಹಣೆಗೆ ವೈಯಕ್ತಿಕವಾಗಿ  50,000 ರೂ. ನೀಡುವ ಮೂಲಕ  ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು ಸಮಾಜದ ಬಡ ಮಕ್ಕಳ ಶಿಕ್ಷಣ, ಅಂಬೇಡ್ಕರ್ ಅವರ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಸಲಹೆ ನೀಡಿದರು.

ಹಿರಿಯೂರು ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರಿಮುನಿ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪೌರ ಕಾರ್ಮಿಕರ ಜೊತೆ ಕಸಗುಡಿಸಿ, ಸ್ಫೂರ್ತಿ ನೀಡುತ್ತಿರುವ ಶಾಸಕ ಬಿ.ದೇವೇಂದ್ರಪ್ಪ ಅವರ ವ್ಯಕ್ತಿತ್ವ ವಿಶಾಲವಾದದ್ದು. ಶಾಸಕರಿಗೆ ಸ್ವಾಭಿಮಾನ ಸಂತಸದ ಸನ್ಮಾನ ತಮ್ಮದಾಗಬೇಕು, ಅವರ ಕೈ ಬಲಪಡಿಸಬೇಕು ಸಹಕಾರ ಬಯಸಬೇಕು ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ  ಸಹೋದರತೆಗಾಗಿ ಜ್ಞಾನ ನೀತಿ ಅಳವಡಿಸಿಕೊಳ್ಳಬೇಕು. ಮಾದಿಗ ಸಮಾಜದವರು ವಿನಾಕಾರಣ ಜಾತಿನಿಂದನೆ ಪ್ರಕರಣ ದಾಖಲಿಸದೆ. ಸಂಘಟನೆ ಮುಖಂಡರುಗಳು ಮುಂಚೂಣಿಯಲ್ಲಿದ್ದು, ರಾಜೀ ಸಂಧಾನ ಮಾಡುವ ಮೂಲಕ ಮೇಲ್ವರ್ಗದವರ ವಿಶ್ವಾಸ, ಪ್ರೀತಿ ಗಳಿಸಬೇಕು. ಇದರಿಂದ ರಾಜಕೀಯ ನ್ಯಾಯ ಸಾಧ್ಯ ಎಂದರು.

ಮಾದಿಗ ಸಮಾಜದ ಹಿರಿಯ ಮುಖಂಡ ಜಿ.ಶಂಭುಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, `ಸಮಾಜದಲ್ಲಿ ಅಧಿಕಾರ ಸಂಪತ್ತು ಉಳ್ಳವರ ಪಾಲಾಗುತ್ತಿದೆ. ಪರಿಣಾಮ ಶೋಷಿತರು ಬಡತನದಿಂದ ಸಂಪೂರ್ಣ ಮುಕ್ತರಾಗಿಲ್ಲ. ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಮಾದಿಗ ಸಮಾಜವನ್ನು ಕೇವಲ ಮತ ಬ್ಯಾಂಕ್‌ಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಕಾಂಗ್ರೆಸ್ ಪಕ್ಷ ಗುರುತಿಸಿ, ಸೂಕ್ತ ಸ್ಥಾನಮಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಪ.ಪಂ. ಸದಸ್ಯರಾದ ನಿರ್ಮಲಕುಮಾರಿ, ದೇವರಾಜ್, ಮುಖಂಡರಾದ ಸಿ. ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಮರಿಯಪ್ಪ, ಹಟ್ಟಿ ತಿಪ್ಪೇಸ್ವಾಮಿ, ಹನುಮಂತಾಪುರ ಶಿವಕುಮಾರ್,  ವೆಂಕಟೇಶ್ ಬಿ.ಮಹೇಶ್ವರಪ್ಪ, ಪಾಪಣ್ಣ, ಪ.ಪಂ. ಮಾಜಿ ಅಧ್ಯಕ್ಷ ಮಂಜುನಾಥ್, ಪ್ರಕಾಶ್ ರೆಡ್ಡಿ, ಓಬಣ್ಣ ಮತ್ತಿತರರು ಇದ್ದರು‌.

error: Content is protected !!