ದಾವಣಗೆರೆ, ಜ. 7 – ಸರ್ಕಾರದ ಸೂಚನೆ ಯಂತೆ ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ದವಾಗಿದೆ. ಮಳೆಯ ಕೊರತೆಯ ನಡುವೆ ಬೇಸಿಗೆ ನಿರ್ವಹಣೆಗಾಗಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದರು.
ಅವರು ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳೊಂದಿಗೆ ದಾವಣಗೆರೆ ಜಿಲ್ಲಾ ಬೆಸ್ಕಾಂ ಕುಂದು ಕೊರತೆಯ ಸಭೆಯಲ್ಲಿ ಮಾತನಾಡಿದರು.
ಈ ವರ್ಷ ಮುಂಗಾರು ಮಳೆಯ ಕೊರತೆ ಯಿಂದ ಜಲಾಶಯಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ರೈತರು ಪಂಪ್ಸೆಟ್ಗಳ ಮೇಲೆಯೇ ಜೂನ್ ತಿಂಗಳಿನಿಂದಲೂ ಅವಲಂಬಿತರಾಗಿದ್ದರಿಂದ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸಬೇಕಾಗಿದೆ. ಕೊರತೆಯನ್ನು ನೀಗಿಸಲು ಈಗಾಗಲೇ ಜಿಂದಾಲ್, ಸಕ್ಕರೆ ಕಾರ್ಖಾನೆಗಳು, ಯು.ಪಿ.ಸಿ.ಎಲ್, ಸೋಲಾರ್, ವಿಂಡ್ಮಿಲ್ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಈಗ ಯಾವುದೇ ವಿದ್ಯುತ್ ಕೊರತೆಯಾಗದಂತೆ ಪೂರೈಕೆ ಮಾಡಲಾಗುತ್ತಿದೆ.
ಬೇಸಿಗೆ ಆರಂಭವಾಗುತ್ತಿದ್ದು, ಈ ದಿನಗಳಲ್ಲಿ ಇನ್ನಷ್ಟು ವಿದ್ಯುತ್ ಅಭಾವವಾಗಬಹುದೆಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಬೇಸಿಗೆಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಬೀಳಗಿ ತಿಳಿಸಿದರು.
ಸೋಲಾರ್ ಪಂಪ್ಸೆಟ್ಗೆ ಆದ್ಯತೆ
ರೈತರ ಪಂಪ್ಸೆಟ್ಗಳ ಅಕ್ರಮ-ಸಕ್ರಮ ಯೋಜನೆಯನ್ನು 2023 ರ ಸೆಪ್ಟೆಂಬರ್ 22 ಕ್ಕೆ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. 500 ಮೀಟರ್ ವ್ಯಾಪ್ತಿಯ ಒಳಗೆ ಇರುವ ಪಂಪ್ ಸೆಟ್ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವಿದ್ಯುತ್ ಸಂಪರ್ಕ ಸಕ್ರಮ ಮಾಡಲಾಗುತ್ತದೆ. 500 ಮೀಟರ್ಗಿಂತ ಹೆಚ್ಚಿದ್ದಲ್ಲಿ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಪಿಎಂ ಕುಸುಮ.ಬಿ ಯೋಜನೆಯಡಿ ಅವಕಾಶ ಇದ್ದು ಫಲಾನುಭವಿ ವಂತಿಗೆ ಶೇ 20 ರಷ್ಟು ಪಾವತಿಸಬೇಕು ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಹೇಳಿದರು. ಈಗಾಗಲೇ ಮಹಾರಾಷ್ಟ್ರದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಸಾವಿರ ಅಡಿ ಆಳ, ಎರಡು ಕಿ.ಮೀ ದೂರದವರೆಗೆ 7.5 ಹೆಚ್ಪಿ ಸೋಲಾರ್ ಪಂಪ್ಸೆಟ್ ನಿರಂತರವಾಗಿ ನೀರನ್ನು ತಳ್ಳುತ್ತದೆ. ಈ ಸ್ಥಳಗಳನ್ನು ಬೆಸ್ಕಾಂ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಬೀಳಗಿ ಹೇಳಿದರು. ಶಾಸಕರಾದ ಡಿ.ಜಿ.ಶಾಂತನಗೌಡ ಮತ್ತು ಬಸವಂತಪ್ಪ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಸೋಲಾರ್ ಅಳವಡಿಸುವಂತೆ ಸಲಹೆ ನೀಡಿದರು.
ಅಕ್ರಮ ಸಕ್ರಮಕ್ಕೆ 310 ಕೋಟಿ
2023 ರ ಸೆಪ್ಟೆಂಬರ್ 22 ರೊಳಗಾಗಿ ಅಕ್ರಮ ಸಕ್ರಮದಲ್ಲಿ ನೋಂದಾಯಿಸಿದ ರೈತರ ಪಂಪ್ಸೆಟ್ಗಳನ್ನು ಸಕ್ರಮ ಮಾಡಲು ಈಗಾಗಲೇ ಟೆಂಡರ್ ಕರೆದು ಅನುಮೋದನೆ ನೀಡಲಾಗಿದೆ. ಹರಪನಹಳ್ಳಿ ಮತ್ತು ತೆಲಗಿ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 15615 ಪಂಪ್ಸೆಟ್ಗಳ ಸಕ್ರಮಕ್ಕಾಗಿ 310 ಕೋಟಿ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಮಹಾಂತೇಶ್ ಬೀಳಗಿ ತಿಳಿಸಿದರು.
ರೈತರಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂಬ ಭರವಸೆಯಿಂದ ಬೆಳೆ ಬೆಳೆದಿದ್ದಾರೆ. ವಿದ್ಯುತ್ ಪೂರೈಕೆಯ ಸಮಯವನ್ನು ರೈತರಿಗೆ ನಿಖರವಾಗಿ ತಿಳಿಸಿದಲ್ಲಿ ರೈತರಿಗೆ ಅನುಕೂಲವಾಗುತ್ತೆ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದಾಗ, ಮುಂದಿನ ದಿನಗಳಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ದವಾಗಿದೆ ಬೀಳಗಿ ಹೇಳಿದರು.
ಶಾಸಕ ಕೆ.ಎಸ್.ಬಸವಂತಪ್ಪ, ನವಿಲೇಹಾಳ್ನಲ್ಲಿ ಕಳೆದ 10 ದಿನಗಳಿಂದ ಸುಟ್ಟ ಟಿ.ಸಿ.ಬದಲಾವಣೆ ಮಾಡಿಲ್ಲ ಎಂದಾಗ ಟಿ.ಸಿ.ಸುಟ್ಟಾಗ ತಕ್ಷಣ ಬದಲಾವಣೆ ಮಾಡಬೇಕು. ಟಿ.ಸಿ.ಬ್ಯಾಂಕ್ನಲ್ಲಿ 150 ಟಿ.ಸಿ.ಗಳು ದಾಸ್ತಾನಿದ್ದರೂ ಬದಲಾಯಿಸದಿರಲು ಕಾರಣವೇನು ಎಂದು ಬೆಸ್ಕಾಂ ಎಇಇ ಗೆ ಪ್ರಶ್ನಿಸಿದ ಎಂ.ಡಿ., ಮುಂದಿನ ದಿನಗಳಲ್ಲಿ ಈ ತರಹದ ದೂರುಗಳು ಬಂದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಹೊಸ ಸ್ಟೇಷನ್, ಹಳೇ ಸ್ಟೇಷನ್ ಮೇಲ್ದರ್ಜೆಗೇರಿಸಲು ಕ್ರಮ; ರೈತರಿಗೆ ಮತ್ತು ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಹೊಸ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಈಗಿರುವ ಕೇಂದ್ರಗಳನ್ನು 12.5 ಮೆಗಾವ್ಯಾಟ್ನಿಂದ 20 ಮೆಗಾವ್ಯಾಟ್ಗೆ ಹೆಚ್ಚಿಸಲು ಮನವಿ ಸಲ್ಲಿಸಿದ ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಶ್ರೀಮತಿ ಲತಾ ಮಲ್ಲಿಕಾರ್ಜುನ್ ಅವರುಗಳು ಆನಗೋಡು, ಮೆಳ್ಳೇಕಟ್ಟೆ, ಅತ್ತಿಗಟ್ಟೆ ಇವುಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಕಬ್ಬೂರು, ತೋಳಹುಣಸೆ ಹೊಸ ಸ್ಟೇಷನ್ ಬೇಗ ಆರಂಭಿಸಬೇಕು. ಹೊನ್ನಾಳಿ ತಾಲ್ಲೂಕು ನ್ಯಾಮತಿ, ಕ್ಯಾಸಿನಕೆರೆ ಸ್ಟೇಷನ್, ಚೀಲೂರು ಹೊಸ ಮಾರ್ಗ ನಿರ್ಮಾಣ, ಹರಪನಹಳ್ಳಿಯಲ್ಲಿ ಈಗಿರುವ ಸ್ಟೇಷನ್ಗಳನ್ನು ಮೇಲ್ದರ್ಜೆಗೇರಿಸಿ ಹೊಸದಾಗಿ ಕನಿಷ್ಠ 4 ಕಡೆ ಸ್ಟೇಷನ್ ಆರಂಭಿಸಲು ಮನವಿ ಮಾಡಿ, ವಿದ್ಯುತ್ ಪೂರೈಕೆ ಬೆಸ್ಕಾಂಗೆ ಹರಪನಹಳ್ಳಿ ಬರಲಿದ್ದು ಕೆ.ಪಿ.ಟಿ.ಸಿ.ಎಲ್ ಗುಲ್ಬರ್ಗಕ್ಕೆ ಬರುತ್ತದೆ. ಇದನ್ನೂ ಸರಿಪಡಿಸಲು ಲತಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಸಭೆಯಲ್ಲಿ ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ.ರಮೇಶ್, ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಕೆ.ಪಿ.ಟಿ.ಸಿ.ಎಲ್. ಮುಖ್ಯ ಇಂಜಿನಿಯರ್ ಉಮೇಶ್, ಅಧೀಕ್ಷಕ ಇಂಜಿನಿಯರ್ ಜಗದೀಶ್ ಇತರರು ಉಪಸ್ಥಿತರಿದ್ದರು.