ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ದಾವಣಗೆರೆ, ಡಿ. 24 – ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ಹಾಗೂ ಒಳಪಂಗಡಗಳ ಸ್ವಾಮೀಜಿಗಳು ಸೇರಿಕೊಂಡು ಒಂದಾಗಿ ಕೇಂದ್ರ ಸರ್ಕಾರದ ಒ.ಬಿ.ಸಿ. ಮೀಸಲಾತಿಗೆ ಬೇಡಿಕೆ ಮುಂದಿಡಬೇಕಿದೆ. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 24ನೇ ಮಹಾ ಅಧಿವೇಶನದ ಧಾರ್ಮಿಕ ಅಧಿವೇಶನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಂಚಪೀಠದ ಜಗದ್ಗುರುಗಳು ಎಲ್ಲಾ ವರ್ಗಗಳ ಸಮಾಜದ ಮುಖಂಡರ ಜೊತೆಗೂಡಿ ಕೇಂದ್ರದಿಂದ ಒ.ಬಿ.ಸಿ. ಮೀಸಲಾತಿ ಪಡೆಯುವ ಕುರಿತು ಚರ್ಚಿಸಿದ್ದೇವೆ. ವೀರಶೈವ ಲಿಂಗಾಯತ ಮಹಾಸಭಾ ಸಹ ಇದೇ ವಿಷಯವನ್ನು ಮುಂಚೂಣಿಗೆ ತರುತ್ತಿದೆ ಎಂದವರು ಹೇಳಿದರು.
ಜಾತಿಗಳನ್ನು ಬಿಡುವಂತೆ ಬಸವಣ್ಣನವರು ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದರು. ಆದರೆ, ವೀರಶೈವ ಲಿಂಗಾಯತರು ವೃತ್ತಿ ಆಧರಿತ ಒಳಪಂಗಡಗಳನ್ನೇ ಜಾತಿಗಳಾಗಿ ಮುಂದುವರೆಸಿಕೊಂಡು ಬಂದರು. ಈಗ ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಪರಿಸ್ಥಿತಿ ಆಗಿದೆ. ಒಳಪಂಗಡ ಕೈ ಬಿಡದ ಹೊರತು ಸಮಾಜ ಬಲಿಷ್ಠವಾಗುವುದಿಲ್ಲ ಎಂದು ಶ್ರೀಗಳು ಹೇಳಿದರು.
ದೇಶಾದ್ಯಂತ ವೀರಶೈವ ಲಿಂಗಾಯತ ಸಮುದಾಯದವರಿದ್ದಾರೆ. ಆ ಎಲ್ಲರನ್ನೂ ಒಗ್ಗೂಡಿಸಲು ಮಹಾಸಭಾ ಕ್ರಮ ತೆಗೆದುಕೊಳ್ಳಬೇಕಿದೆ. ಕರ್ನಾಟಕದ ಹೊರಗಿನ ಸಮುದಾಯಗಳ ಪ್ರತಿನಿಧಿಗಳನ್ನು ಆಹ್ವಾನಿಸಬೇಕಿದೆ ಎಂದು ಸ್ವಾಮೀಜಿ ತಿಳಿಸಿದರು.
ಧಾರ್ಮಿಕ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗದ ಆನಂದಪುರಂನ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮಠ ಪರಂಪರೆಗಳು ಮಠಗಳಿಗೆ ಸೀಮಿತವಾಗಬೇಕು. ಹೊರಗಡೆ ಬಂದಾಗ ಸ್ವಾಮೀಜಿಗಳೆಲ್ಲರೂ ಒಂದಾಗಬೇಕು ಎಂದು ಹೇಳಿದರು.
ಜಾತಿ ಗಣತಿಯಿಂದ ಎರಡನೇ ಪೆಟ್ಟು
ಹಾವನೂರು ವರದಿಯಿಂದ ಗದಾಪ್ರಹಾರ
ದಾವಣಗೆರೆ, ಡಿ. 24 – ಹಾವನೂರು ವರದಿಯಿಂದ ವೀರಶೈವ ಲಿಂಗಾಯತ ಸಮಾಜದ ಮೇಲೆ ಗದಾ ಪ್ರಹಾರವಾಗಿದೆ. ಈಗ ಜಾತಿ ಗಣತಿಯಿಂದ ಎರಡನೇ ಪೆಟ್ಟು ಬೀಳುತ್ತಿದೆ ಎಂದು ಚಿಕ್ಕಮಗಳೂರಿನ ಬಸವ ತತ್ವಪೀಠದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 24ನೇ ಮಹಾ ಅಧಿವೇಶನದ ಧಾರ್ಮಿಕ ಅಧಿವೇಶನದಲ್ಲಿ ಅವರು ಉಪನ್ಯಾಸ ನೀಡಿದರು.
ಹಾವನೂರು ವರದಿಯಿಂದಾಗಿ ಬಹಳಷ್ಟು ದಲಿತ ಸಮುದಾಯಗಳು ವೀರಶೈವ ಲಿಂಗಾಯತ ಬಿಟ್ಟು ಹೋಗಿವೆ. ಇದರಿಂದಾಗಿ ಸಮಾಜ ರಾಜಕೀಯವಾಗಿ ದುರ್ಬಲವಾಯಿತು ಎಂದರು.
ಈಗ ಜಾತಿ ಗಣತಿಯಿಂದ ಎರಡನೇ ಪೆಟ್ಟು ಬೀಳುತ್ತಿದೆ. ಜಾತಿ ಗಣತಿ ವೈಜ್ಞಾನಿಕವಾಗಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕಿದೆ. ಸಮಾಜದ ನಿಜ ಸಂಖ್ಯೆ ತೋರಿಸುವ ರೀತಿಯಲ್ಲಿ ಗಣತಿ ಆಗಬೇಕು ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳಲ್ಲಿ ಒಬ್ಬೊಬ್ಬರು ಒಂದೊಂದು ಮೀಸಲಾತಿಗೆ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಸಮಾಜದ ಶಕ್ತಿ ಕುಂದುತ್ತಿದೆ. ಭಿನ್ನ ದನಿ ಎತ್ತಿದರೆ ಸರ್ಕಾರದ ಮಟ್ಟದಲ್ಲಿ ಸೌಲಭ್ಯ ಪಡೆಯಲು ವಿಫಲರಾಗುತ್ತೇವೆ ಎಂದು ಶ್ರೀಗಳು ಎಚ್ಚರಿಸಿದರು.
ಹಿಂದೂ ಪರಂಪರೆಯಲ್ಲಿ ಜಾತಿಗಳಿವೆ. ವೀರಶೈವ ಲಿಂಗಾಯತರಲ್ಲಿ ಜಾತಿಗಳಿಲ್ಲ, ಒಳಪಂಗಡಗಳಿವೆ. ಮಡಿವಾಳರು ಹಿಂದೂಗಳಲ್ಲಿದ್ದಾಗ ಜಾತಿಯಾಗುತ್ತಾರೆ, ವೀರಶೈವ ಲಿಂಗಾಯತಕ್ಕೆ ಬಂದಾಗ ಒಳಪಂಗಡವಾಗುತ್ತಾರೆ. ಇದೇ ಪರಿಸ್ಥಿತಿ ಕುಂಬಾರ, ಮಾದಾರ ಮುಂತಾದವರದ್ದಾಗಿದೆ ಎಂದವರು ವಿಶ್ಲೇಷಿಸಿದರು.
ಈ ಒಳಪಂಗಡಗಳವರಿಗೆ ಹಿಂದೂಗಳಲ್ಲಿ ಸಿಗುವ ಮೀಸಲಾತಿಯೇ ಅನ್ವಯವಾಗಬೇಕು ಎಂಬ ಹೋರಾಟ ನಡೆಸಬೇಕಿದೆ ಎಂದವರು ತಿಳಿಸಿದರು.
ವೀರಶೈವ ಲಿಂಗಾಯದ ಸಮುದಾಯದವರು ಅಷ್ಟಾವರಣ, ಪಂಚಾಚಾರ ಹಾಗೂ ಷಟ್ಸ್ಥಳಗಳನ್ನು ಪಾಲಿಸಬೇಕಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮದಲ್ಲದ ಹೋಮ, ಹವನ ಹಾಗೂ ಯಜ್ಞಗಳು ಸೇರಿಕೊಂಡಿವೆ. ಇದರಿಂದ ಧರ್ಮ ನಾಶ ಆಗುತ್ತಿದೆ. ಮಠ, ಮನೆ ಹಾಗೂ ಮನಗಳಿಂದ ನಮ್ಮದಲ್ಲದ ಹೋಮ – ಹವನಾದಿಗಳನ್ನು ಹೊರ ಹಾಕಬೇಕಿದೆ ಎಂದೂ ಶ್ರೀಗಳು ಕರೆ ನೀಡಿದರು.
ವಿಜಯನಗರ ಸಾಮ್ರಾಜ್ಯ ಭವ್ಯತೆಗೆ ತಂದಿದ್ದು ಲಿಂಗಾಯತರು
ದಾವಣಗೆರೆ, ಡಿ. 24 – ವೀರಶೈವ ಲಿಂಗಾಯತ ಸಮುದಾಯದ ಪ್ರೌಢದೇವರಾಯರ ಆಡಳಿತದಲ್ಲಿ ವಿಜಯನಗರ ಸಾಮ್ರಾಜ್ಯ ವಿಸ್ತರಣೆಗೊಂಡು ಶ್ರೀಲಂಕಾವರೆಗೂ ತಲುಪಿತ್ತು. ಅಂತಹ ರಾಜರು ನಮ್ಮ ಸಮುದಾಯಕ್ಕೆ ಸೇರಿದವರು ಎಂಬುದನ್ನು ಮರೆತಿದ್ದೇವೆ ಎಂದು ಬಾಳೆಹೊಸೂರಿನ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 24ನೇ ಮಹಾ ಅಧಿವೇಶನದ ಧಾರ್ಮಿಕ ಅಧಿವೇಶನದಲ್ಲಿ ಅವರು ದಿಕ್ಸೂಚಿ ಉಪನ್ಯಾಸ ನೀಡಿದರು.
ಕೆಳದಿ ಚೆನ್ನಮ್ಮ ಅವರು 63 ಮಠಗಳನ್ನು ಸ್ಥಾಪಿಸಿ, ಈ ಮಠಗಳಿಗೆ 63 ಸಾವಿರ ಎಕರೆ ಜಮೀನು ನೀಡಿದರು ಎಂದು ಹೇಳಿದರು.
ಈ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ ಚಿಕ್ಕಮಗಳೂರಿನ ಬಸವ ತತ್ವಪೀಠದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ವಿಜಯನಗರ ಸಾಮ್ರಾಜ್ಯವನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಿ ಪ್ರಬಲಗೊಳಿಸಿದ್ದು ಇಮ್ಮಡಿ ಪ್ರೌಢದೇವರಾಯ. ಅವರು ನಮ್ಮ ಸಮಾಜದವರು ಎಂಬ ಹೆಮ್ಮೆ ಇರಬೇಕು ಎಂದರು.
ಆದರೆ, ವಿಜಯನಗರ ಸಾಮ್ರಾಜ್ಯದ ಉತ್ಥಾನಕ್ಕೆ ಕಾರಣರಾದವರನ್ನು ಮರೆತಿದ್ದೇವೆ. ಪತನಕ್ಕೆ ಕಾರಣರಾದವರನ್ನು ಮೆರೆಸುತ್ತಿದ್ದೇವೆ. ಈ ರೀತಿಯ ಮರೆವು ನಮ್ಮ ಪರಂಪರೆಯ ಮರೆವಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಎಂಬ ಹೆಸರು ಎಲ್ಲೆಡೆ ಕೇಳಿ ಬರುತ್ತದೆ. ಆದರೆ, ಬಳ್ಳಾರಿ ನಿರ್ಮಿಸಿದ ಹಂಡೆ ಹನುಮಪ್ಪ ನಾಯಕರ ಹೆಸರು ಎಲ್ಲೂ ಕೇಳಿ ಬರುವುದಿಲ್ಲ. ವೀರಶೈವ ಲಿಂಗಾಯತ ಸಮುದಾಯದವರು ನಾಡಿನಲ್ಲಿ ನೂರಾರು ನಗರಗಳನ್ನು ನಿರ್ಮಿಸಿದ್ದೇವೆ. ಅವರ ಹೆಸರುಗಳನ್ನು ಹೇಳುತ್ತಿಲ್ಲ ಎಂದು ವಿಷಾದಿಸಿದರು.
ಮಠಮುಖಿ ಸ್ವಾಮೀಜಿ, ಪಕ್ಷಮುಖಿ ರಾಜಕಾರಣಿ
ದಾವಣಗೆರೆ, ಡಿ. 24 – ವೀರಶೈವ ಲಿಂಗಾಯತ ಸಮಾಜವನ್ನು ಸ್ವಾಮೀಜಿಗಳು ಹಾಗೂ ರಾಜಕಾರಣಿಗಳು ಬೆಳೆಸಬೇಕಿತ್ತು. ಆದರೆ, ಸ್ವಾಮೀಜಿಗಳು ಮಠಮುಖಿಗಳಾಗಿದ್ದರೆ, ರಾಜಕಾರಣಿಗಳು ಪಕ್ಷಮುಖಿಯಾಗಿದ್ದಾರೆ. ಇದರಿಂದ ಸಂಘಟನೆಗೆ ಹಿನ್ನಡೆಯಾಗಿದೆ ಎಂದು ಬಾಳೆಹೊಸೂರಿನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ವಿಷಾದಿಸಿದರು.
ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 24ನೇ ಮಹಾಅಧಿವೇಶನದ ಧಾರ್ಮಿಕ ಅಧಿವೇಶನದಲ್ಲಿ ಅವರು ದಿಕ್ಸೂಚಿ ಉಪನ್ಯಾಸ ನೀಡಿದರು.
ಹಾನಗಲ್ ಕುಮಾರೇಶ್ವರರು ಮಠವನ್ನು ತೊರೆದು ಸಮಾಜಮುಖಿಯಾಗಿ ಕೆಲಸ ಮಾಡಿದರು. ಆದರೆ, ಈಗಿನ ಹಲವಾರು ಮಠಾಧೀಶರು ಸಮಾಜದ ಬದಲು ತಮ್ಮ ಮಠಗಳನ್ನೇ ಬೆಳೆಸಲು ಆದ್ಯತೆ ನೀಡುತ್ತಿದ್ದಾರೆ ಎಂದು ವಿಷಾದಿಸಿದರು.
ರಾಜಕಾರಣಿಗಳೂ ಸಹ ಸಮಾಜಕ್ಕಿಂತ ಪಕ್ಷಕ್ಕೇ ಆದ್ಯತೆ ನೀಡುತ್ತಿದ್ದಾರೆ.
ಪಕ್ಷದ ಮೇಲಿನ ಅಭಿಮಾನದಲ್ಲಿ ಶೇ.50ರಷ್ಟು ಅಭಿಮಾನ ಸಮಾಜದ ಮೇಲೆ ಇದ್ದಿದ್ದರೆ, ಇಲ್ಲಿ ಸೇರುತ್ತಿರುವ ಜನರ ಸಂಖ್ಯೆ ಸಾಕಷ್ಟು ಹೆಚ್ಚಾಗಿರುತ್ತಿತ್ತು ಎಂದರು.
ಲಿಂಗಾಯತ ನಿಂತಿರುವುದೇ ಮಠಗಳ ಮೇಲೆ. ಹೀಗಾಗಿ ಸಮಾಜ ಬೆಳೆಯಬೇಕಾದರೆ ಮಠಗಳು ಬೆಳೆಯಬೇಕಿದೆ. ಮಠಾಧೀಶರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಠಗಳ ಶಾಲೆಗಳಲ್ಲಿ ಅಧ್ಯಯನ ಮಾಡುವ ಬಹುತೇಕರು ಲಿಂಗಾಯತೇತರರೇ ಆಗಿದ್ದಾರೆ. ಲಿಂಗಾಯತ ಸಮಾಜ ಬೆಳೆದಷ್ಟೂ ಇಡೀ ಸಮಾಜ ಬೆಳೆಯಲು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದರು.
ಕೊಟ್ಟೂರು ಸಂಸ್ಥಾನ ಮಠದ ಜಗದ್ಗುರು ಶ್ರೀ ಅನ್ನದಾನೀಶ್ವರ ಮಹಾಶಿವಯೋಗಿಗಳು ಮಾತನಾಡಿ, ಲಿಂಗಾಯತ ಹಾಗೂ ವೀರಶೈವ ಎರಡೂ ಒಂದೇ ಆಗಿದೆ. ಅಂಗದ ಮೇಲೆ ಲಿಂಗ ಧರಿಸುವವನು ಲಿಂಗಾಯತ. ಅಷ್ಟಾವರಣ, ಷಟ್ಸ್ಥಳ, ಪಂಚಾಚಾರಗಳನ್ನು ಪಾಲಿಸುವವನೇ ವೀರಶೈವ ಎಂದು ವಿಶ್ಲೇಷಿಸಿದರು.
ಹಾವೇರಿಯ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಕೇವಲ ಶ್ರೀಮಂತರು ಹಾಗೂ ಮೇಲ್ಜಾತಿಯವರಿಗೆ ಸೀಮಿತವಾಗಿತ್ತು. ಆ ಸಂದರ್ಭದಲ್ಲಿ ಹಾನಗಲ್ ಕುಮಾರೇಶ್ವರು ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಲು ವೀರಶೈವ ಮಹಾಸಭಾ ಸ್ಥಾಪಿಸಿದರು. ಶರಣ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದರು ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧಾರ್ಮಿಕ ಅಧಿವೇಶನ ಉದ್ಘಾಟಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಬಾಳೆಹೊಸೂರಿನ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಚಿಕ್ಕಮಗಳೂರಿನ ಬಸವ ತತ್ವಪೀಠದ ಶ್ರೀ ಬಸವ ಮರುಳಸಿದ್ದಸ್ವಾಮೀಜಿ, ವಿಭೂತಿಪುರ ಸಂಸ್ಥಾನ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗಾದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬೀದರ್ನ ಶ್ರೀ ರಾಜಶೇಖರ ಗೋರ್ಟಾ ಸ್ವಾಮೀಜಿ, ಮುಖಂಡರಾದ ಅಲ್ಲಂ ವೀರಭದ್ರಪ್ಪ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ಯತೀಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.