105 ವರ್ಷಗಳ ನಂತರ ದಾವಣಗೆರೆ ಆತಿಥ್ಯ, 2 ಲಕ್ಷ ಜನ ಸೇರುವ ನಿರೀಕ್ಷೆ
ದಾವಣಗೆರೆಯ ಎಂ.ಬಿ.ಎ. ಕಾಲೇಜು ಆವರಣದಲ್ಲಿ ಇಂದು ಹಾಗೂ ನಾಳೆ ನಡೆಯಲಿ ರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ ಕ್ಷಣ ಗಣನೆ ನಡೆಯು ತ್ತಿದ್ದು, ಬಹುತೇಕ ಎಲ್ಲಾ ಸಿದ್ಧತೆಗಳೂ ಪೂರ್ಣ ಗೊಂಡಿವೆ. ಅಧಿವೇಶನಕ್ಕೂ ಮುನ್ನಾ ದಿನವಾದ ಶುಕ್ರವಾರವೇ ವಿವಿಧ ಜಿಲ್ಲೆಗಳಿಂದ ಸಮಾಜದ ಮುಖಂಡರುಗಳು ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಐತಿಹಾಸಿಕ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾಜದ ಪ್ರಮುಖರ ಜೊತೆ ಎರಡೂ ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಸಮಾರಂಭದ ತಯಾರಿಯಲ್ಲಿ ಕಳೆದೆರಡು ದಿನಗಳಿಂದ ತೊಡಗಿಸಿಕೊಂಡಿದ್ದಾರೆ.
ನಾಡಿನ 12 ಜಗದ್ಗುರುಗಳು, 400ಕ್ಕೂ ಹೆಚ್ಚು ಶಿವಾಚಾರ್ಯರು, ಹರ-ಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ.
ಬೃಹತ್ ಪೆಂಡಾಲ್ : ಸಮಾವೇಶಕ್ಕೆ ಮುಖ್ಯ ವೇದಿಕೆಗೆ 220×400 ಅಡಿಯ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಅತಿಥಿ ಗಣ್ಯರಿಗಾಗಿ 60×100 ವೇದಿಕೆ ಸಿದ್ಧಗೊಂಡಿದೆ. ವೇದಿಕೆ ಮುಂಭಾಗ 40 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯನ್ನು ಸಮೀಪದಿಂದಲೇ ನೋಡಲು ಅನುಕೂಲ ಮಾಡಿಕೊಡುವ ದೃಷ್ಟಿ ಯಿಂದ 10 ಎಲ್ಇಡಿ ವಾಲ್ಗಳನ್ನು ಅಳವಡಿಸ ಲಾಗಿದೆ. ಕೃಷಿ ಮತ್ತು ಕೈಗಾರಿಕೆಗೆ ಸಂಬಂಧಿಸಿದಂತೆ 120ಕ್ಕೂ ಹೆಚ್ಚು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ.
ಹಿಂದೆ ನಡೆದಿದ್ದ ಅಧಿವೇಶನಗಳು
1904-05ರ ಅವಧಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಮೊದಲ ಅಧಿವೇಶನವು ಧಾರವಾಣಡಲ್ಲಿ ನಡೆದಿತ್ತು. ಶಿರಸಂಗಿ ಲಿಂಗರಾಜ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.
1905-06ರಲ್ಲಿ ಶಿರಸಂಗಿ ಲಿಂಗರಾಜ ಅವರ ಅಧ್ಯಕ್ಷತೆ ಯಲ್ಲಿಯೇ ಬೆಂಗಳೂರಿನಲ್ಲಿ ಎರಡನೇ ಅಧಿವೇಶನ ನಡೆದಿತ್ತು.
1906-07ರಲ್ಲಿ ಸೊಲ್ಲಾಪುರದಲ್ಲಿ ಕೆ.ಪಿ. ಪುಟ್ಟಣ್ಣ ಶೆಟ್ಟಿ ಅಧ್ಯಕ್ಷತೆ ಯಲ್ಲಿ, 1907-09ರಲ್ಲಿ ಬಾಗಲಕೋಟೆಯಲ್ಲಿ ರಾಜಾರರಾಮನಗೌಡ ಅವರ ಅಧ್ಯಕ್ಷತೆಯಲ್ಲಿ, 1909-10ರಲ್ಲಿ ಬಳ್ಳಾರಿಯಲ್ಲಿ ವಾರದ ಮಲ್ಲಪ್ಪ ಅಧ್ಯಕ್ಷತೆಯಲ್ಲಿ, 1910-11ರಲ್ಲಿ ಬೆಳಗಾವಿಯಲ್ಲಿ ಮಾಮಲೆ ದೇಸಾಯಿ ಅಧ್ಯಕ್ಷತೆಯಲ್ಲಿ, 1911-17ರ ಅವಧಿಯಲ್ಲಿ ನಿಪ್ಪಾಣಿಯಲ್ಲಿ ಅರಟಾಳ ರುದ್ರಗೌಡ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆದಿದ್ದವು.
1917-20ರ ಅವಧಿಯಲ್ಲಿ ದಾವಣಗೆರೆಯಲ್ಲಿ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅಧ್ಯಕ್ಷತೆಯಲ್ಲಿ ಪ್ರಥಮ ಬಾರಿಗೆ ಅಧಿವೇಶನ ನಡೆದಿತ್ತು. ನಂತರ ಬೀರೂರಿನಲ್ಲಿ 1920-27ರಲ್ಲಿ ಶಾಂತರವೀರಪ್ಪ ಮೆಣಸಿಕಾಯಿ ಅಧ್ಯಕ್ಷತೆಯಲ್ಲಿ, 1927-33ರಲ್ಲಿ ಧಾರವಾಡದಲ್ಲಿ ಡಾ.ಪಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ ಅಧ್ಯಕ್ಷತೆಯಲ್ಲಿ, 1937-38ರಲ್ಲಿ ರಾಯಚೂರಿನಲ್ಲಿ ಸಿದ್ದಪ್ಪ ಕಂಬಳಿ ಅಧ್ಯಕ್ಷತೆಯಲ್ಲಿ, 1938-1940ರಲ್ಲಿ ಹುಬ್ಬಳ್ಳಿಯಲ್ಲಿ ಎಸ್.ಎಸ್. ಬಸವನಾಳ್ ಅಧ್ಯಕ್ಷತೆ, 1940-45ರಲ್ಲಿ ಕುಂಭಕೋಣಂನಲ್ಲಿ ಎಂ.ಎಸ್. ಸರದಾರ್ ಅಧ್ಯಕ್ಷತೆಯಲ್ಲಿ ಸಮಾವೇಶಗಳು ನಡೆದಿವೆ.
1945-55ರ ಅವಧಿಯಲ್ಲಿ ತುಮಕೂರಿನಲ್ಲಿ ಸಿ.ಸಿ. ಹುಲಕೋಟೆ ಅಧ್ಯಕ್ಷತೆಯಲ್ಲಿ, 1955-60ರಲ್ಲಿ ಬಸವಕಲ್ಯಾಣದಲ್ಲಿ ಶ್ರೀ ಬಂಥನಾಳ ಸಂಗನಬಸವ ಸ್ವಾಮೀಜಿ, 1960-69ರಲ್ಲಿ ಶಿವಯೋಗ ಮಂದಿರದಲ್ಲಿ ಡಾ.ಡಿ.ಸಿ. ಪಾವಟೆ, 1969-73ರಲ್ಲಿ ಮುಂಬೈನಲ್ಲಿ ಜೆ.ಬಿ. ಮಲ್ಲಾರಾಧ್ಯ, 1973-82ರ ಅವಧಿಯಲ್ಲಿ ಜೆ.ಬಿ. ಮಲ್ಲಾರಾಧ್ಯ ಹಾಗೂ 1982-83ರ ಅವಧಿಯಲ್ಲಿ ಬೆಂಗಳೂರಿನಲ್ಲಿಯೇ ಕೆ.ಎಂ. ಮಂಜಪ್ಪ ಅಧ್ಯಕ್ಷತೆಯಲ್ಲಿ, 1983-92ರಲ್ಲಿ ಮೈಸೂರಿನಲ್ಲಿ ಈಶ್ವರ ಮಲ್ಲಪ್ಪ ಮುಗ್ದುಂ, 1992-99ರಲ್ಲಿ ಬೆಳಗಾವಿಯಲ್ಲಿ ಡಾ.ಶರಣಬಸಪ್ಪ ಅಪ್ಪಾ ಅವರುಗಳ ಅಧ್ಯಕ್ಷತೆಯಲ್ಲಿ, 1999-2011ರ ಅವಧಿಯಲ್ಲಿ ಮೈಸೂರಿನಲ್ಲಿ ಡಾ.ಭೀಮಣ್ಣ ಖಂಡ್ರೆ ಅಧ್ಯಕ್ಷತೆಯಲ್ಲಿ ಸಮಾವೇಶಗಳು ನಡೆದಿವೆ.
2012ರಲ್ಲಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿ 23ನೇ ಅಧಿವೇಶನವು ಡಾ.ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆ ಯಲ್ಲಿ ನಡೆದಿತ್ತು. ಇದೀಗ ಮತ್ತೆ 24ನೇ ಅಧಿವೇಶನ ಎಸ್ಸೆಸ್ ಅವರ ಅಧ್ಯಕ್ಷತೆಯಲ್ಲಿಯೇ ದಾವಣಗೆರೆಯಲ್ಲಿ ನಡೆಯಲಿದೆ.
105 ವರ್ಷಗಳ ನಂತರ ದಾವಣಗೆರೆಯಲ್ಲಿ ಮಹಾ ಅಧಿವೇಶನ ನಡೆಯುತ್ತಿದೆ. ದಾವಣಗೆರೆಯವರೇ ಆದ, ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ, ಶಾಸಕರೂ ಆದ ಡಾ.ಶಾಮನೂರು ಶಿವಶಂಕರಪ್ಪ ನವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯುತ್ತಿರು ವುದು ಹೆಮ್ಮೆಯ ವಿಷಯ. ಹಾನಗಲ್ ಶ್ರೀ ಕುಮಾರ ಸ್ವಾಮೀಜಿ ಅವರ ಆಶೀರ್ವಾದ ದಿಂದ ಅಧಿವೇಶನ ಯಶಸ್ವಿಯಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ.
– ದೇವರಮನೆ ಶಿವಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷರು, ವೀರಶೈವ ಮಹಾಸಭಾ.
ಅಧಿವೇಶನವೂ… ಬೆಣ್ಣೆ ದೋಸೆ ಉತ್ಸವವೂ..
ದಾವಣಗೆರೆಯ ಬೆಣ್ಣೆ ದೋಸೆಯನ್ನು ಬ್ರಾಂಡ್ ಮಾಡಲು ಚಿಂತನೆ ನಡೆಸಿರುವ ಜಿಲ್ಲಾಡಳಿತವು, ಇದೇ 23ರಿಂದ ಮೂರು ದಿನಗಳ ಕಾಲ ಬೆಣ್ಣೆ ದೋಸೆ ಉತ್ಸವ ಆಯೋಜಿಸಿದೆ.
ಅಖಿಲ ಭಾರತ ವೀರಶೈವ ಲಿಂಗಾ ಯತ ಮಹಾ ಅಧಿವೇಶನ ನಡೆಯುವ ಸ್ಥಳವಾದ ಎಂ.ಬಿ.ಎ. ಕಾಲೇಜು ಆವರಣ ದಲ್ಲಿಯೇ ಬೆಣ್ಣೆ ದೋಸೆ ಉತ್ಸವವೂ ನಡೆಯಲಿದೆ. ಅತ್ತ ಅಧಿವೇಶನ ತಯಾರಿ ಭರದಿಂದ ಸಾಗುತ್ತಿದ್ದರೆ, ವೇದಿಕೆಯ ಬಲ ಭಾಗದ ಕಡೆ ದೋಸೆ ಉತ್ಸವದ ತಯಾರಿಯೂ ನಡೆಯಿತ್ತಿದೆ.
ದೋಸೆ ಉತ್ಸವದ ಅಂಗವಾಗಿ ಜಿಲ್ಲಾಡಳಿತವು 20×10 ಅಡಿ ಅಳತೆಯ ತಾತ್ಕಾಲಿಕ ಶೆಡ್ ಸೇರಿದಂತೆ ನೀರಿನ ವ್ಯವಸ್ಥೆ ಕಲ್ಪಿಸುತ್ತಿದೆ. ಇದರ ಜೊತೆ ನಗರದ ಪ್ರಮುಖ ಹೋಟೆಲ್ ಮಾಲೀಕರು 8 ಮಳಿಗೆಗಳಲ್ಲಿ ತಮಗೆ ಬೇಕಾದ ಸೌಕರ್ಯಗಳನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಸಮೀಪ ಇರುವ ಗಾಜಿನ ಮನೆಯ ಬಳಿಯೂ 4 ಮಳಿಗೆಗಳಲ್ಲಿ ದೋಸೆ ವ್ಯಾಪಾರ ನಡೆಯಲಿದೆ.
`ಜನತಾವಾಣಿ’ಯೊಂದಿಗೆ ಮಾತನಾಡಿದ ಹಳೇ ಸಾಗರ್ ಬೆಣ್ಣೆ ದೋಸೆ ಹೋಟೆಲ್ ಮಾಲೀಕ ಬಿ.ಎಂ. ವಿಜಯ ಕುಮಾರ್, ಇದೇ ಪ್ರಥಮ ಬಾರಿಗೆ ದೋಸೆ ಉತ್ಸವ ನಡೆಸಲಾಗುತ್ತಿದೆ.
ವೀರಶೈವ ಅಧಿವೇಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವುದರಿಂದ ವ್ಯಾಪಾರವೂ ಹೆಚ್ಚಿನ ಮಟ್ಟದಲ್ಲಿ ಆಗುವ ವಿಶ್ವಾಸವಿದೆ ಎಂದರು.
100 ಕೌಂಟರ್ಗಳಲ್ಲಿ ಊಟ: ಎರಡೂ ದಿನಗಳ ಸಮಾವೇಶಕ್ಕೆ ಆಗಮಿಸುವವರಿಗೆ ಭರ್ಜರಿ ಭೋಜನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೋದಿ ಪಾಯಸ, ಲಾಡು, ರೊಟ್ಟಿ, ಚಟ್ನಿಪುಡಿ, ಪಲ್ಯ, ಭಜಿ, ಮೊಸರು, ಚಿತ್ರಾನ್ನ ಇವು ಊಟದ ಮೆನು. ಇನ್ನು ವೇದಿಕೆ ಬಳಿ 100 ಕೌಂಟರ್ಗಳನ್ನು ನಿರ್ಮಿಸಲಾಗಿದೆ.
1 ಸಾವಿರ ಬಸ್ಗಳು: ರಾಜ್ಯದ ವಿವಿಧ ಜಿಲ್ಲೆಗಳಿಂದ 1 ಸಾವಿರ ಬಸ್ಗಳ ಮೂಲಕ ಜನರು ಆಗಮಿಸುವ ನಿರೀಕ್ಷೆ ಇದೆ. 300ಕ್ಕೂ ಕ್ರೂಸರ್ವಾಹನಗಳೂ ಸೇರಿದಂತೆ ಖಾಸಗಿ ವಾಹನಗಳ ಮೂಲಕವೂ ಜನರು ದೇವನಗರಿಗೆ ದಾಂಗುಡಿ ಇಡಲಿದ್ದಾರೆ.
ವಸತಿ ವ್ಯವಸ್ಥೆ: ಪರ ಊರುಗಳಿಂದ ಬರುವ ವರಿಗೆ ನಗರದ ಬಹುತೇಕ ಲಾಡ್ಜ್ಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ವಸತಿ ಸೌಲಭ್ಯ ಕಲ್ಪಿಸ ಲಾಗುತ್ತಿದೆ. ಇನ್ನು ಹರಿಹರ ಭಾಗದ ಭಕ್ತರಿಗೆ ಹರಿಹರದ ವೀರಶೈವ ಲಿಂಗಾಯತ ಪಂಚಮ ಸಾಲಿ ಮಠದಲ್ಲಿ ಹಾಗೂ ಚಿತ್ರದುರ್ಗ ಮಾರ್ಗ ವಾಗಿ ಬರುವ ಭಕ್ತರಿಗೆ ಸಿರಿಗೆರೆ ಶ್ರೀ ತರಳಬಾಳು ಮಠ ಹಾಗೂ ಚಿತ್ರದುರ್ಗದ ಮುರುಘಾ ಮಠದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಅಂದ ಹಾಗೆ ವೀರಶೈವ-ಲಿಂಗಾಯದ ಸಮುದಾಯದ ಎಲ್ಲಾ ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸುವ ಹಾಗೂ ಜಾತಿ ಗಣತಿಗೆ ಸಂಬಂಧಿತ ವಿಚಾರಗಳು ಪ್ರಮು ಖವಾಗಿ ಈ ಅಧಿವೇಶನದಲ್ಲಿ ಚರ್ಚಗೆ ಬರಲಿವೆ.
– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ