ದಾವಣಗೆರೆ, ಡಿ.12- ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಯಹೂದಿ ಈ ಎಲ್ಲಾ ಧರ್ಮಗಳೂ ಪರಮಾತ್ಮ ಒಬ್ಬನೇ ಎಂಬುದನ್ನು ಸಾರುತ್ತಿವೆ ಹಾಗೂ ಸ್ಪಷ್ಟಪಡಿಸಿವೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ತಿಳಿಸಿದರು.
ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾ ಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 9ನೇ ದಿನವಾದ ಮಂಗಳವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
ಹಿಂದೂ ಧರ್ಮದಲ್ಲಿ ಪುರಾತನ ಕಾಲದಿಂ ದಲೇ ಏಕದೇವೋಪಾಸನೆ ವ್ಯವಸ್ಥೆ ಇತ್ತು. ಆದರೆ, ಪುರಾಣಗಳ ಕಾಲದಿಂದ ಬಹುದೇವೋಪಾಸನೆ ಬೇರೂರಿತು ಎಂದು ಹೇಳಿದರು.
ಇಸ್ಲಾಂ ಧರ್ಮದಲ್ಲೂ ಆರಂಭದಲ್ಲಿ ಬಹುದೇವೋ ಪಾಸನೆ ಇತ್ತು. ಮೊಹಮ್ಮದ್ ಪೈಗಂಬರ್ ಅವರು ನಂತರ ಏಕದೇವೋಪಾಸನೆ ಪ್ರತಿಪಾದಿಸಿ, ಸಮಾಜಕ್ಕೆ ಪ್ರಬಲವಾಗಿ ಬೋಧಿಸಿ ಸಾಧಿಸಿದರು. ನಂತರ ಇಸ್ಲಾಂ ಏಕೇಶ್ವರನ ಉಪಾಸನೆ ಮಾಡುವ ಧರ್ಮವಾಗಿದೆ ಎಂದರು.
ಸಿಖ್ ಧರ್ಮದ ಧರ್ಮ ಗುರು ಗುರುನಾನಕ್ರ ಗುರು ಗ್ರಂಥ ಸಾಹೇಬ್ ಗ್ರಂಥದಲ್ಲಿ ಏಕೇಶ್ವರ ಉಪಾಸನೆ ಬಗ್ಗೆ ಹೇಳಿದ್ದಾರೆ. ಜೈನ ಧರ್ಮವೂ ಏಕೇಶ್ವರನ ಉಪಾಸನೆ ಮಾಡುತ್ತದೆ. ಹಾಸನ ಜಿಲ್ಲೆಯ ಹಳೇಬೀಡು ನಲ್ಲಿರುವ ಶಿಲಾಶಾಸನದಲ್ಲಿ ಏಕೇಶ್ವರನ ಬಗ್ಗೆ ಶ್ಲೋಕಗಳನ್ನು ಕಾಣಬಹುದಾಗಿದೆ ಎಂದು ವಿವರಿಸಿದರು.
ಪರಮಾತ್ಮನ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಈಶ್ವರೀಯ ವಿಶ್ವವಿದ್ಯಾಲಯ
ನನ್ನ ವಿದ್ಯಾರ್ಥಿ ಜೀವನದಲ್ಲಿ ಭಗವಂತ ಯಾರು? ಎಲ್ಲಿದ್ದಾನೆ? ಹೇಗಿದ್ದಾನೆ? ಎಂದು ತಿಳಿಯುವ ಬಗ್ಗೆ ಸಾಕಷ್ಟು ಕೌತುಕ ಉಂಟಾಗಿತ್ತು. ಅದನ್ನು ಅರಿಯುವ ಉದ್ದೇಶದಿಂದ ಅನೇಕ ಜಗದ್ಗುರುಗಳು, ಸದ್ಗುರುಗಳನ್ನು ಕೇಳಿದ್ದೆ. ಅವರಿಗೆ ತಿಳಿದ ವಿಚಾರಗಳನ್ನು ಅವರು ಬೋಧಿಸಿದ್ದರು. ಆದರೆ, ನನ್ನ ಮನಸ್ಸಿಗೆ ತೃಪ್ತಿಯಾಗಿರಲಿಲ್ಲ. ಇದರಾಚೆ ಬೇರೇ ಏನೋ ಸತ್ಯವಿದೆ ಅನಿಸಿತ್ತು.
ಬೆಂಗಳೂರಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪತ್ರಿಕೆಯೊಂದರಲ್ಲಿ ಪರಮಾತ್ಮನ ಜೊತೆ ಮಾತನಾಡುವುದು ಹೇಗೆ? ಕುರಿತು ಈಶ್ವರೀಯ ವಿದ್ಯಾಲಯದ ಸುದ್ದಿ ತಿಳಿದು, ವಿಳಾಸ ಹುಡುಕಿ ಹೋಗುವಷ್ಟರಲ್ಲಿ ಪ್ರವಚನ ಮುಗಿದಿತ್ತು.
ನಂತರ ಚಿಕ್ಕ ಬಾಡಿಗೆ ಮನೆಯಲ್ಲಿ ನಡೆಸುತ್ತಿದ್ದ ಈಶ್ವರೀಯ ವಿದ್ಯಾಲಯದಲ್ಲಿನ ಹೃದಯ ಪುಷ್ಪ ಮಾತಾಜಿಯವರನ್ನು ಭೇಟಿ ಮಾಡಿ, ನನಗಿರುವ ಕುತೂಹಲಗಳ ಬಗ್ಗೆ ವಿವರಿಸಿದಾಗ, ಅವರು ನಿತ್ಯ ಪ್ರವಚನಕ್ಕೆ ಬರುವಂತೆ ಹೇಳಿದ್ದರು.
ಪ್ರವಚನಕ್ಕೆ ಹೋದ ಕೆಲವೇ ದಿನಗಳಲ್ಲಿ ನನಗೆ ಜಗತ್ತಿನಲ್ಲಿ ಇರುವುದು ಎರಡೇ ವಿಚಾರ, ಅದು ಆತ್ಮ ಹಾಗೂ ಪರಮಾತ್ಮ ಎಂಬ ಸತ್ಯದ ಅರಿವಾಯಿತು. ಅಂದೇ ನಾನು ಜೀವನದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಸತ್ಯವನ್ನು ಮತ್ತಷ್ಟು ಅರ್ಥ ಮಾಡಿಕೊಂಡು ಪ್ರಚಾರ ಮಾಡಬೇಕು ಎಂದು ನಿರ್ಧರಿಸಿಕೊಂಡೆ.
ವಿದ್ಯಾಭ್ಯಾಸ ಮುಗಿಸಿ ಸರ್ಕಾರಿ ನೌಕರಿ ಮಾಡುತ್ತಾ 32 ವರ್ಷಗಳ ಕಾಲ ಪರಮಾತ್ಮನ ಬಗ್ಗೆ ತಿಳಿದೆ. ಇವರ ಭಾಷೆಯಲ್ಲಿಯೇ ಹೇಳಿದರೆ ಜನರಿಗೆ ಅರ್ಥವಾಗುವುದಿಲ್ಲ ಎಂದು ಅರಿತು ಭಗವದ್ಗೀತೆ ಅಧ್ಯಯನ ಮಾಡಿದೆ. ವಚನ ಸಾಹಿತ್ಯವನ್ನೂ ಅಭ್ಯಾಸ ಮಾಡಿದೆ. ಅಲ್ಲಿಯೂ ಪರಮಾತ್ಮನ ಸತ್ಯದ ಪರಿಚಾಯವಾಗಿ, ಪ್ರವಚನಗಳ ಮೂಲಕ ಸತ್ಯದ ಅರಿವು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಡಾ.ಬಸವರಾಜ ರಾಜಋಷಿ ಹೇಳಿದರು.
ರಾಷ್ಟ್ರಗೀತೆಯಲ್ಲೂ ಪರಮಾತ್ಮನ ಗುಣಗಾನ
ನಮ್ಮ ರಾಷ್ಟ್ರಗೀತೆಯೂ ಪರಮಾತ್ಮನನ್ನು ಧ್ಯಾನಿಸುವ, ಗುಣಗಾನ ಮಾಡುವ ಗೀತೆ ಎಂದು ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಪ್ರತಿಪಾದಿಸಿದರು.
ಜನಗಣಮನ ಅಧಿನಾಯಕ ಎಂದರೆ ಜನಗಳ, ಗಣಗಳ, ಮನಗಳ ಅಧಿನಾಯಕ ಪರಮಾತ್ಮನೇ ಎಂದರ್ಥ. ಮುಂದಿನ ಸಾಲುಗಳಲ್ಲಿ `ಯಾವ ಪರ್ವತಗಳೇ ಇರಬಹುದು ಅವೆಲ್ಲಾ ಪರಮಾತ್ಮನ ಕಡೆ ತೋರಿಸುತ್ತವೆ ಎಂಬ ಭಾವನೆ ತುಂಬಿ ಬರೆಯಲಾಗಿದೆ.
`ತವ ಶುಭ ನಾಮೇ ಜಾಗೇ’ ಎಂದರೆ ನಿನ್ನ ಶುಭ ನಾಮವನ್ನು ಸದಾ ಉದ್ಘೋಷಿಸುತ್ತಿದ್ದೇವೆ. ಅದರ ಆಶ್ರಯದಿಂದ ಬದುಕುತ್ತಿದ್ದೇವೆ. `ಗಾಹೇ ತವ ಜಯಗಾಥ’ ಎಂಬುದು ನಿನ್ನ ಗುಣಗಾನ ಸದಾಕಾಲ ಮಾಡುತ್ತೇವೆ ಎಂದರ್ಥ.
ಜನಗಳ, ಗಣಗಳಿಗೆ ಮಂಗಳವನ್ನುಂಟು ಮಾಡುವವನು ಎಂದರೆ ಮಂಗಳಕಾರಿ, ಕಲ್ಯಾಣಕಾರಿ, ಅವನೇ ಶಿವ ಎಂಬರ್ಥದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ರಾಷ್ಟ್ರಗೀತೆ ಕೊಟ್ಟಿದ್ದಾರೆ.
ಇದು ಯಾವುದೇ ವ್ಯಕ್ತಿಯನ್ನು ಓಲೈಸುವ ಗೀತೆಯಲ್ಲ. ರಾಷ್ಟ್ರಕ್ಕೆ ಕೊಟ್ಟ ಅಮೂಲ್ಯ ಗೀತೆ. ಪರಮಾತ್ಮನ ಧ್ಯಾನಿಸುವ, ಗುಣಗಾನ ಮಾಡುವ ಗೀತೆಯಾಗಿದೆ ಎಂದು ಹೇಳಿದರು.
ಭಗವದ್ಗೀತೆಯ ಭಗವಂತ ಪರಮಾತ್ಮ
ಎಲ್ಲರೂ ಭಗವದ್ಗೀತೆಯ ಭಗವಂತ ಶ್ರೀ ಕೃಷ್ಣ ಎಂದು ತಿಳಿದಿದ್ದಾರೆ. ಆದರೆ, ಅರ್ಜುನನಗೆ ಕೃಷ್ಣನೇ `ಈಶ್ವರ ಎಂಬ ಪರಮಾತ್ಮನನ್ನು ನೀನು ಧ್ಯಾನ ಮಾಡು’ ಎಂದು ಹೇಳಿದ್ದಾನೆ.
ಜಗತ್ತಿಗೆ ಒಬ್ಬನೇ ಆದ ಪರಮಾತ್ಮನಿದ್ದಾನೆ. ಅವನು ಮೂರೂ ಲೋಕಕ್ಕೆ ಅಧಿಪತಿ. ಅವನನ್ನು ಧ್ಯಾನಿಸು, ಅವನಿಗೆ ಶರಣರಾಗು, ಅವನ ಅನುಗ್ರಹದಿಂದ ಶಾಂತಿ, ಮುಕ್ತಿ ಸಿಗುತ್ತದೆ ಎಂದು ಕೃಷ್ಣ ಹೇಳುತ್ತಾನೆ.
ಜೊತೆಗೆ ನಾನು ಪರಮಾತ್ಮನಲ್ಲ ಎಂದೂ ಸಹ ಪರೋಕ್ಷವಾಗಿ ಹೇಳಿದ್ದಾನೆ ಎಂದು ವಿಶ್ಲೇಷಿಸಿದರು.
ಸರ್ವಧರ್ಮಗಳಲ್ಲಿ ಪರಮಾತ್ಮ ಒಬ್ಬನೇ ಎಂದು ತಿಳಿಸಿದ್ದಾರೆ. ಆದರೆ, ಅವನ ಉಪಾಸನೆ ಮಾಡುವ ಸತ್ಯವನ್ನು ಭಾರತೀಯ ಸನಾತನ ಧರ್ಮ ನಮಗೆ ತಿಳಿಸಿಕೊಟ್ಟಿದೆ. ಎಲ್ಲರಿಗೂ ಜ್ಞಾನ ಬಲದಿಂದ ತಿಳಿಯಲು ಸಾಧ್ಯವಾಗದ ಕಾರಣ, ಪರಮಾತ್ಮನ ಜ್ಯೋತಿರ್ಲಿಂಗದ ರೂಪವನ್ನು ಶಿಲೆಗಳಲ್ಲಿ ಕಟೆದು ಈಶ್ವರನ ಗುಡಿಗಳಲ್ಲಿ ಸ್ಥಾಪಿಸಲಾಗಿದೆ.
ಶ್ರೀ ಸಾಮಾನ್ಯರಿಗೆ ಭಗವಂತನ ಮೇಲೆ ಪ್ರೀತಿ, ವಿಶ್ವಾಸ ಉಂಟಾಗಲಿ ಎಂಬ ಸದುದ್ಧೇಶ ದಿಂದ 12 ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಲಾ ಯಿತು. ಅವುಗಳನ್ನು 12 ಹೆಸರುಗಳಿಂದ ಉಪಾಸನೆ ಮಾಡಲಾಗುತ್ತಿತ್ತು. ಹೀಗೆ ಎಲ್ಲೆಲ್ಲಿ ಯಾವ ಊರಿನಲ್ಲಿ ಶಿವಲಿಂಗಗಳಿವೆಯೋ ಅವೆಲ್ಲವೂ ಶಿವನ ಸ್ವರೂಪ ಅರ್ಥೈಸಿಕೊಡಬಲ್ಲ ಕುರುಹುಗಳಾಗಿವೆ. ಭಕ್ತಿಯಿಂದ ಯಾವ ದೇವಸ್ಥಾನಕ್ಕೆ ಹೋಗಿ ನಮಿಸಿದರೂ ಫಲ ಒಂದೇ ಎಂದು ಅವರು ಪ್ರತಿಪಾದಿಸಿದರು.
ಪರಮಾತ್ಮ ಸರ್ವಜ್ಞ, ಜ್ಞಾನಸಾಗರ, ಎಲ್ಲಾ ಭಕ್ತರ ಮನಸ್ಸನ್ನು ಏಕ ಕಾಲದಲ್ಲೇ ಅರ್ಥ ಮಾಡಿಕೊಳ್ಳುವ ಮಹಾನ್ ಶಕ್ತಿವುಳ್ಳವನು. ಆದ್ದರಿಂದ ದೇವಸ್ಥಾನದಲ್ಲಿ ಅಷ್ಟೇ ಅಲ್ಲ, ಅಂಗದ ಮೇಲೂ ಇಷ್ಟಲಿಂಗದ ರೂಪದಲ್ಲಿ ಧರಿಸಲು ಶರಣರು ಹೇಳಿದ್ದಾರೆ. `ಓಂ ನಮಃ ಶಿವಾಯ’ ಮೂಲ ಮಂತ್ರದಿಂದ ಪರಮಾತ್ಮನನ್ನು ಹೇಗೆ ನಮಿಸಬೇಕು ಎಂದು ಬಸವಾದಿ ಶಿವಶರಣರು ನಮಗೆ ನೆನಪಿಸಿದ್ದಾರೆ ಎಂಬುದನ್ನು ವಚನಗಳ ಮೂಲಕ ವಿಶ್ಲೇಷಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾ ಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನದ ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.