ಕಚೇರಿಗಳ ಭದ್ರತೆಗೆ ಗೃಹ ರಕ್ಷಕರು

ಕಚೇರಿಗಳ ಭದ್ರತೆಗೆ ಗೃಹ ರಕ್ಷಕರು

ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್

ದಾವಣಗೆರೆ, ಡಿ. 12 – ಜಿಲ್ಲಾ ಕಚೇರಿ ಗಳಲ್ಲಿ ಭದ್ರತೆಗಾಗಿ ಗೃಹ ರಕ್ಷಕರನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.

ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರಸಕ್ತ ಖಾಸಗಿಯವರ ಮೂಲಕ ಗಾರ್ಡ್‌ಗಳನ್ನು ನೇಮಿಸಲಾಗುತ್ತಿದೆ. ಕೆಲ ಕಚೇರಿಗಳಿಗೆ ಭದ್ರತಾ ಸಿಬ್ಬಂದಿ ಇದ್ದರೆ, ಇನ್ನು ಕೆಲವು ಕಚೇರಿಗಳಿಗೆ ಭದ್ರತಾ ಸಿಬ್ಬಂದಿ ಇಲ್ಲ. ಅಗತ್ಯವಿರುವ ಎಲ್ಲ ಕಚೇರಿಗಳಿಗೆ ಗೃಹ ರಕ್ಷಕರನ್ನೇ ಭದ್ರತೆಗಾಗಿ ನೇಮಿಸಲಾಗುವುದು ಎಂದು ಹೇಳಿದರು.

ಹಬ್ಬಗಳಿಂದ ಹಿಡಿದು ಚುನಾವಣೆ ಯವರೆಗೆ ಎಲ್ಲ ಭದ್ರತಾ ಕಾರ್ಯಗಳಲ್ಲಿ ಗೃಹ ರಕ್ಷಕ ದಳ ತೊಡಗಿಕೊಂಡಿದೆ. ವಿಕೋಪದ ಸಂದರ್ಭದಲ್ಲೂ ನೆರವಾಗುತ್ತಿದೆ ಎಂದವರು ತಿಳಿಸಿದರು.

ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಪ್ರಸಕ್ತ ಪೊಲೀಸ್ ಠಾಣೆಗಳಿಗೆ 20 ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ. ಇವರ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು. ಸಂಚಾರ ವ್ಯವಸ್ಥೆ ಸೇರಿದಂತೆ ಹಲವು ವಿಭಾಗ ಗಳಲ್ಲಿ ಗೃಹ ರಕ್ಷಕ ದಳದವರು ಪೊಲೀಸರಷ್ಟೇ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಸುಚಿತ್ ಕುಮಾರ್, ಗೃಹ ರಕ್ಷಕ ದಳದವರು ಇನ್ನಷ್ಟು ಕರ್ತವ್ಯ ನಿಷ್ಠೆ ಹಾಗೂ ಶಿಸ್ತಿನಿಂದ ಉನ್ನತವಾಗಿ ಬೆಳೆಯಬೇಕಿದೆ. ಗೃಹ ರಕ್ಷಕ ದಳಕ್ಕೆ ಇನ್ನಷ್ಟು ಮೌಲ್ಯ ತರಬೇಕಿದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಗೃಹ ರಕ್ಷಕರು, 25 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರು ಹಾಗೂ ಉತ್ತಮ ಕಾರ್ಯನಿರ್ವಹಣೆ ತೋರಿದವರಿಗೆ ಸನ್ಮಾನಿಸಲಾಯಿತು.

ದೇವರಬೆಳಕೆರೆಯ ಗೃಹ ರಕ್ಷಕ ತರಬೇತಿ ಕೇಂದ್ರದ ತರಬೇತುದಾರ ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಮನ್ಸೂರ್ ಅಹಮದ್ ವರದಿ ವಾಚಿಸಿದರು. ನಿಜ ಗುಣ ಶಿವಯೋಗಿ ಪ್ರಾರ್ಥಿಸಿದರು. ಕೆ.ಎಸ್. ಅಮರೇಶ್ ಸ್ವಾಗತಿಸಿದರು. ಎಂ. ರಾಘವೇಂದ್ರ ವಂದಿಸಿದರು.

error: Content is protected !!