ಶರಣರು ಕಂಡ ಶಿವ ಪ್ರವಚನ ಮಾಲೆಯಲ್ಲಿ ಡಾ.ಬಸವರಾಜ ರಾಜಋಷಿ
ದಾವಣಗೆರೆ, ಡಿ.10- ಸದಾ ಒತ್ತಡ ದಿಂದ ಕೂಡಿದ ಈ ಜೀವನದಲ್ಲಿ ಶಿವ ಯೋಗಕ್ಕಿಂತ ಸರಳ ಯೋಗ ಮತ್ತೊಂ ದಿಲ್ಲ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.
ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 7ನೇ ದಿನವಾದ ಭಾನುವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
ಐಷಾರಾಮಿ ಜೀವನವುಳ್ಳವರು ಶಿವಯೋಗದ ಕಡೆ ಹೋಗುವುದಿಲ್ಲ. ಆದರೆ ಹುಟ್ಟಿನ ಜೊತೆ ಮರಣ ನಿಶ್ಚಿತವಾಗಿರುವ ನಮಗೆ ಪರಮಾತ್ಮನ ಧ್ಯಾನಕ್ಕಾಗಿ ಶಿವಯೋಗ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಋಗ್ವೇದದ ಕಾಲಕ್ಕೆ ಮೊದಲೇ ಇಷ್ಟಲಿಂಗ ರೂಪದಲ್ಲಿ ಶಿವೋಪಾಸನೆ, ಶಿವಾರ್ಚನೆ ಮಾಡಲಾಗು ತ್ತಿತ್ತು ಎಂದು ಋಗ್ವೇದದ ಮಂತ್ರ ಆಧಾರದಿಂದ ಸ್ಪಷ್ಟೀ ಕರಣ ಮಾಡಿದರು. ಇಷ್ಟ ಲಿಂಗದ ಉಪಾಸನೆ, ಶೈವ ಪರಂ ಪರೆಯಲ್ಲಿ ವೀರಶೈವ ಪರಂಪರೆ ಯಾಗಿ ಮೂಡಿ ಬಂದಿದೆ. ಮೊದಲು ಎಲ್ಲರೂ ಶಿವಭಕ್ತರೇ, ಆದರೆ ಪುರಾಣ ಕಾಲ ಬಂದ ಮೇಲೆ ಒಂದೊಂದು ದೇವರಿಗೆ ಪ್ರತ್ಯೇಕ ದೇವಾಲಯಗಳು ನಿರ್ಮಾಣವಾದವು.
ಆತ್ಮಲಿಂಗವೂ ಅಲ್ಲ, ಗುರುಲಿಂಗವೂ ಅಲ್ಲ, ಶಿವಲಿಂಗವೇ ಸತ್ಯ
ಭಾರತ ಆತ್ಮ ಜ್ಞಾನಿಗಳು, ಪರಮಾತ್ಮ ಜ್ಞಾನಿಗಳು ಇದ್ದ ದೇಶ. ಧ್ಯಾನ ಮಾರ್ಗದಿಂದಲೇ ಅವರು ಆತ್ಮ ಹಾಗೂ ಪರಮಾತ್ಮನ ಧ್ಯಾನ ಮಾಡುತ್ತಿದ್ದರು. ಶ್ರೀ ಸಾಮಾನ್ಯನಿಗೆ ಅವನ ಬುದ್ದಿ ಮಟ್ಟಕ್ಕೆ ಆತ್ಮ ಜ್ಞಾನ, ಪರಮಾತ್ಮನ ಜ್ಞಾನ ಮುಟ್ಟದೇ ಇದ್ದುದರಿಂದ, ಅನೇಕ ಶಿವಾಲಯಗಳನ್ನು ನಿರ್ಮಿಸಲು ಪ್ರಯತ್ನಿಸಿದರು. ಪರಮ ಜ್ಯೋತಿರ್ಲಿಂಗದ ಸ್ವರೂಪವನ್ನು ಶಿಲೆಗಳಲ್ಲಿ ಮಾಡಿ ಪೀಠದ ಮೇಲಿಟ್ಟು ಶಿವಧ್ಯಾನ, ಶಿವಾರಾಧನೆ ಮಾಡಲು ಆರಂಭಿಸಿದರು.
ಆದಿಕಾಲದ ಭಕ್ತಿ ಮಾರ್ಗದ ಪ್ರಥಮ ಅಧ್ಯಾಯ ಇದಾಯಿತು. ಬೇರೆ ಯಾವ ದೇವತೆ, ದೇವರಿಗೂ ದಾರ್ಶನಿಕರಿಗೂ ದೇವಸ್ಥಾನಗಳಿರಲಿಲ್ಲ. ಶಿವಲಿಂಗ ಉಪಾಸನೆ ಮಾತ್ರ ನಡೆಯುತ್ತಿತ್ತು. ಅಂದಿನ ಶಿವಭಕ್ತರಿಗೆ ಅಂಗದ ಮೇಲೆ ಶಿವಲಿಂಗ ಕಟ್ಟಿ ಶಿವಲಿಂಗವೇ ದೇಹದ ಮೇಲೆ ಇದೆ. ನಿತ್ಯ ಪೂಜೆ ಮಾಡಿ ಆನಂದ ಪಡು ಎಂದು ಅಂಗದ ಮೇಲೆ ಲಿಂಗ ಧರಿಸಿದರು. ಲಿಂಗ ಧರಿಸಿದ ಮೇಲೆ ಲಿಂಗಾಯತರು ಎಂದಾಯ್ತು.
ಹೀಗೆ ಇಷ್ಟ ಪಟ್ಟು ಕಟ್ಟಿಕೊಂಡ ಇಷ್ಟಲಿಂಗದ ಬಗ್ಗೆ ಮೂರು ಪ್ರಶ್ನೆಗಳಿವೆ. ಈ ಇಷ್ಟಲಿಂಗ ಆತ್ಮ ಲಿಂಗದ ಕುರುಹೋ ಅಥವಾ ಗುರುಕೊಟ್ಟ ಕಾರಣ ಗುರುಲಿಂಗವೋ? ಅಥವಾ ಶಿವಲಿಂಗವೋ ಯಾವುದರ ಸಂಕೇತ? ಎಂದು. ಈ ಬಗ್ಗೆ ಅಧ್ಯಯನ ನಡೆಸಿದಾಗ ಅಂಗೈಯಲ್ಲಿನ ಶಿವಲಿಂಗ ಗುರುಲಿಂಗವಲ್ಲ, ಆತ್ಮಲಿಂಗವೂ ಅಲ್ಲ, ಇದು ಶಿವಲಿಂಗ ಎಂಬುದು ಬಸವಣ್ಣನವರ ವಚನಗಳ ಅಧ್ಯಯನದಿಂದ ತಿಳಿಯಿತು. ಅಷ್ಟೇ ಅಲ್ಲದೆ, ಅಕ್ಕಮಹಾದೇವಿ, ಚನ್ನಬಸವಣ್ಣ, ಅಲ್ಲಮಪ್ರಭುಗಳೂ ಸಹ ಈ ಗೊಂದಲ ನಿವಾರಣೆಗೆ ವಚನಗಳ ಮೂಲಕ ಮಾರ್ಗದರ್ಶನ ಮಾಡಿದ್ದಾರೆ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.
ಶರಣ ಸಮಾಧಿ ಮೇಲೆ ಲಿಂಗ ಇಟ್ಟರೆ ಅದು ಆತ್ಮಲಿಂಗವಾಗುತ್ತದೆ. ಗುರುಗಳು ದೇಹ ತ್ಯಾಗ ಮಾಡಿದಾಗ ಅವರ ಸಮಾಧಿ ಮೇಲೆ ಇಡುವ ಲಿಂಗ ಗುರುಲಿಂಗ. ಅಂಗದ ಮೇಲೆ ಇಷ್ಟಪಟ್ಟು ಕಟ್ಟಿಕೊಂಡ ಲಿಂಗವೇ ಶಿವಲಿಂಗ ಎಂದು ಪ್ರತಿಪಾದಿಸಿದರು.
ಸದಾ ಶಿವಲಿಂಗ ಉಪಾಸನೆ ಮಾಡುವುದು ಶಿವಪಥ ಅರಿವು ಮಾರ್ಗ ಎಂಬ ಸತ್ಯವನ್ನು ಶರಣರು ತಿಳಿಸಿಕೊಟ್ಟಿದ್ದಾರೆ. ಶಿವಲಿಂಗ ಉಪಾಸನೆ ಮಾಡದ ಹೊರತು ಸದ್ಗತಿ ಪ್ರಾಪ್ತಿಯಾಗದು ಎಂದರು.
ವಿದ್ಯೆಗೆ ಸರಸ್ವತಿ, ಐಶ್ವಯಕ್ಕೆ ಲಕ್ಷ್ಮಿ, ವಿಘ್ನ ನಿವಾರಣೆಗೆ ವಿಘ್ನೇಶ್ವರ, ಮಳೆಗಾಗಿ ವರುಣ ಹೀಗೆ ಒಂದೊಂದು ದೇವತೆಗಳನ್ನು ರೂಪಿಸಿಕೊಂಡು ಇಷ್ಟಾನುಸಾರ ಪೂಜಿಸಲು ಆಂಭಿಸಲಾಯಿತು. ಆದರೆ ಅವೆಲ್ಲವುಗಳ ಆದಿಯಲ್ಲಿ ಇದ್ದದ್ದು ಪರಮಾತ್ಮನ ಚಿಹ್ನೆಯಾದ ಶಿವಲಿಂಗವಲ್ಲದೇ ಬೇರೇನೂ ಅಲ್ಲ. ಬೇರೆ ದೇವರುಗಳಿಗೆ ಹಣ್ಣು, ಹೂ, ಕಾಯಿ, ಅರ್ಚನೆ ಬೇಕು. ಆದರೆ ಶಿವಯೋಗಕ್ಕೆ ಧ್ಯಾನವೊಂದೇ ಸಾಕು ಎಂದು ವಿಶ್ಲೇಷಿಸಿದರು.
ಪುರಾತನ ಕಾಲದಿಂದಲೂ ಇಷ್ಟಲಿಂಗಕ್ಕೆ ಮಹತ್ವವಿದೆ. ಶಿವನನ್ನು ಅರಿಯಬೇಕಾದರೆ ಆತ್ಮಜ್ಞಾನ, ಪರಮಾತ್ಮ ಜ್ಞಾನ, ಅಧ್ಯಾತ್ಮಿಕ ತಳಹದಿಯ ಆಧಾರದ ಮೇಲೆಯೇ ಅರಿಯಬೇಕು ಎಂದು ಹೇಳಿದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಪ್ರವಚನ ಮಾಲೆಗೆ ಶುಭ ಹಾರೈಸಿದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.