ಆರ್ಥಿಕವಾಗಿ ಹಿಂದುಳಿದವರು, ಶಿಕ್ಷಣ ವಂಚಿತರಿಗೆ ಮಾತ್ರ ಸೌಲಭ್ಯ ಸಿಗಲಿ

ಆರ್ಥಿಕವಾಗಿ ಹಿಂದುಳಿದವರು, ಶಿಕ್ಷಣ ವಂಚಿತರಿಗೆ ಮಾತ್ರ ಸೌಲಭ್ಯ ಸಿಗಲಿ

ದಾವಣಗೆರೆ, ಡಿ.7- ಜಾತಿ, ಧರ್ಮಗಳ ಬದಲಾಗಿ ನಿಜವಾಗಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಶಿಕ್ಷಣದಿಂದ ವಂಚಿತರಾದವರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಅಭಿಪ್ರಾಯಿಸಿದರು.

ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವಿದ್ಯಾನಗರ ಶಾಖಾ ಕೇಂದ್ರದ ಆವರಣದಲ್ಲಿ ಒಂದು ತಿಂಗಳ ವರೆಗೆ ನಡೆಯಲಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ ನಾಲ್ಕನೇ ದಿನವಾದ ಗುರುವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ತಳವರ್ಗಕ್ಕೆ ಸೌಲಭ್ಯ ಕೊಡಬೇಕಿರುವುದು ಸ್ವಾಗತ. ಆದರೆ ಜಾತಿ ವ್ಯವಸ್ಥೆ ನೋಡಿ ಸೌಲಭ್ಯ ಕೊಡುವುದು ಸರಿಯಲ್ಲ. ಯಾವುದೇ ಜಾತಿ ಇರಲಿ, ಆರ್ಥಿಕವಾಗಿ ದುರ್ಬಲರಾಗಿದ್ದವರನ್ನು ಗುರುತಿಸಿ, ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ಸೌಲಭ್ಯ ಕೊಡುವುದು ಮಾನವ ಧರ್ಮ ಎಂದು ಹೇಳಿದರು.

ಆರ್ಥಿಕತೆ ಆಧಾರದ ಮೇಲೆ ಸೌಲಭ್ಯ ನೀಡುವ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯವಿದೆ. ಆದರೆ, ಚುನಾವಣೆಯಲ್ಲಿ ಓಟು ಗಳಿಸಲು ಜಾತಿ, ಧರ್ಮಗಳ ಆಧಾರದ ಮೇಲೆ ವಿಂಗಡಿಸಿ, ಮತದಾರರನ್ನು ಓಲೈಸುವ ಪ್ರವೃತ್ತಿ ಹೆಚ್ಚಾಗಿರುವ ದಿನಗಳಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತಾಗಿದೆ ಎಂದು ವ್ಯಾಕುಲತೆ ವ್ಯಕ್ತಪಡಿಸಿದರು. ಕಲಹಗಳಿಗೆ ಮೂಲವಾಗಿದ್ದ ಲಿಂಗಭೇದ, ವರ್ಣಭೇದ, ಜಾತಿ-ಧರ್ಮ ಭೇದ, ವಯೋಭೇದ, ಭಾಷಾ ಭೇದ, ಪ್ರಾಂತ ಭೇದ ಇವೆಲ್ಲವನ್ನೂ ಹನ್ನೆರಡನೇ ಶತಮಾನದಲ್ಲಿ ಶರಣರು ಬೇರು  ಸಹಿತ ಕಿತ್ತು ಹಾಕಿದ್ದರು. ಶರಣರ ತತ್ವಗಳಲ್ಲಿ ಜಾತಿ ಭೇದಕ್ಕೆ, ಧರ್ಮ ಭೇದಕ್ಕೆ, ಕಲಹಕ್ಕೆ ಸ್ಥಾನವಿಲ್ಲ. ಆದರೆ ಇಂದು ನಾವಾಗಿಯೇ ಜಾತಿಗಳನ್ನು ಉಪ ಜಾತಿಗಳನ್ನು ಹುಟ್ಟುಹಾಕಿದ್ದೇವೆ. ಸಂಕೇತ, ವೇಷ ಭೂಷಣಗಳ ಮೂಲಕ ನಮ್ಮ ಜಾತಿಗಳನ್ನು ತೋರಿಸಿಕೊಳ್ಳಲಾರಂಭಿಸಿದ್ದೇವೆ ಎಂದರು.

ದೇವರು ಮನುಷ್ಯನನ್ನು ಸೃಷ್ಟಸಿದ. ಆದರೆ  ನಾವೆಲ್ಲಾ ಸೇರಿ ಜಾತಿ, ಧರ್ಮಗಳನ್ನು ಸೃಷ್ಟಿಸಿ ವಿಂಗಡಿಸಿಕೊಂಡಿದ್ದೇವೆ. ಸಂವಿಧಾನದಲ್ಲಿಯೇ ಜಾತ್ಯತೀತ ರಾಷ್ಟ್ರ ಎಂದು ಘೋಷಣೆಯಾಗಿದ್ದರೂ, ಶಾಲೆಗೆ ಮಗುವನ್ನು ಸೇರಿಸುವಾಗ ಜಾತಿ ನಮೂದಿಸಬೇಕಾಗಿ ಬಂದಿರುವುದು ದುರ್ದೈವ. ಇಂತಹ ಜಾತಿ, ಸೂತಕದಿಂದ ಬಿಡುಗಡೆ ಹೊಂದಿದಾಗ ಮಾತ್ರ ನಾವು ವಿಶ್ವ ಭ್ರಾತೃತ್ವ ಸಾಧಿಸಬಹುದು ಎಂದು ಅವರು ಪ್ರತಿಪಾದಿಸಿದರು.

ಜಾತಿಯ ಸೂತಕ ನಿರ್ಮಿಸಿಕೊಂಡು ಸತ್ಯಕ್ಕೆ ಶರಣಾಗುವ ವ್ಯವಸ್ಥೆಯನ್ನು ದೂರ ಇಟ್ಟಿದ್ದೇವೆ. ಶಾಲೆ, ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲೂ ಈ ಸತ್ಯವನ್ನು ಹೇಳುತ್ತಿಲ್ಲ.  ಜಾತಿ ವಾದಿಗಳನ್ನು ಜ್ಞಾನಿಗಳನ್ನಾಗಿ ಪರಿವರ್ತಿಸುವ ಸಮಾಜ ನಿರ್ಮಾಣವಾಗುವುದಾದರೂ ಎಂದು ? ಎಂದು ಅವರು ಪ್ರಶ್ನಿಸಿದರು.

ಪ್ರಸ್ತುತ ದಿನಗಳಲ್ಲಿ ಎಲ್ಲಿ ನೋಡಿದರೂ ಕಮ್ಯುನಲಿಸಂ, ಕಮರ್ಷಿಯಲಿಸಂ, ಟ್ರೆಡಿಷನಲಿಸಂ ನಡೆಯುತ್ತಿದೆ.  ಇವುಗಳಿಂದ ಹೊರ ಬರಬೇಕಾದರೆ ಅಧ್ಯಾತ್ಮಿಕ ಶಿಕ್ಷಣದ ಅಗತ್ಯವಿದೆ. ಶರಣರ ಮೌಲ್ಯಗಳನ್ನು ಅರಿತು ಶ್ರೇಷ್ಟ ಹಾಗೂ ಸರಳ ಸಮಾಜ ನಿರ್ಮಾಣ ಮಾಡುವತ್ತ ಹೆಜ್ಜೆ ಹಾಕೋಣ.  ಹನ್ನೆರಡನೇ ಶತಮಾನದ ಆದರ್ಶ ಜೀವನ ಅನುಕರಣೆ ಮಾಡೋಣ ಎಂದು ಕರೆ ನೀಡಿದರು.

ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada)  ವೀಕ್ಷಿಸಬಹುದು.

error: Content is protected !!