`ಆತ್ಮ’ ಅನಾದಿ ಹಾಗೂ ಅವಿನಾಶಿ

`ಆತ್ಮ’ ಅನಾದಿ ಹಾಗೂ ಅವಿನಾಶಿ

ಋಣ ಸಂಬಂಧವಿದ್ದೆಡೆ ಆತ್ಮ ಪ್ರವೇಶ: ಡಾ.ಬಸವರಾಜ ರಾಜಋಷಿ

ದಾವಣಗೆರೆ, ಡಿ. 6- ಆತ್ಮ ಸ್ಥೂಲವಾದದ್ದೂ ಅಲ್ಲ, ಪಂಚಭೂತಗಳಿಂದ ಮಾಡಿದ್ದೂ ಅಲ್ಲ. ಅದು ಸಚೇತನ ಶಕ್ತಿ. ಅನಾದಿ ಹಾಗೂ ಅವಿನಾಶಿಯಾದದ್ದು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.

ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಳೀಯ ವಿದ್ಯಾನಗರ ಶಾಖಾ ಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಒಂದು ತಿಂಗಳ ಕಾಲದ `ಶರಣರು ಕಂಡ ಶಿವ’ ಪ್ರವಚನ ಮಾಲೆಯ ಮೂರನೇ ದಿನವಾದ ಬುಧವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ಆತ್ಮ ಮನುಷ್ಯನ ಹೃದಯದಲ್ಲಿರುವು ದಿಲ್ಲ. ಅದು ಬ್ರುಕುಟಿಗಳ ಮಧ್ಯೆ ಇರುವ ಮೆದುಳಿನಲ್ಲಿರುತ್ತದೆ. ಒಂದೇ ಕಡೆ ಇರುವ ಸೂರ್ಯ ಜಗತ್ತಿಗೆಲ್ಲಾ ಬೆಳಕು, ಶಕ್ತಿಯನ್ನು ಕೊಡುವಂತೆ ಶರೀರದಲ್ಲಿ ಬ್ರುಕುಟಿಗಳ ಮಧ್ಯೆ ಹಣೆಯಲ್ಲಿ ಆತ್ಮ ವಿರಾಜಮಾನವಾಗಿದ್ದಾನೆ ಎಂದು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಹಳೆಯ ಬಟ್ಟೆಯನ್ನು ಬಿಟ್ಟು ಹೊಸದನ್ನು ಬದಲಿಸುವಂತೆ ಶರೀರವು ವೃದ್ಧಾವಸ್ಥೆಗೆ ಬಂದಾಗ ಆತ್ಮ ಶರೀರವನ್ನು ಬಿಡುತ್ತದೆ. ಶಿಶುವಾಗಿ ಮತ್ತೆ ಜನ್ಮ ಪಡೆಯುತ್ತದೆ ಎಂದು ಹೇಳಿದರು.

ಆತ್ಮ ಜನ್ಮ ಪಡೆಯಲು ಮುಖ್ಯ ಕಾರಣ ಋಣ ಸಂಬಂಧ. ಅದನ್ನಿಟ್ಟುಕೊಂಡೇ ಆತ್ಮವು ಶರೀರ ಪಡೆಯುತ್ತದೆ. ಅಲ್ಲಿಂದ ಜೀವನ ಸಾಗಲಾರಂಭಿಸುತ್ತದೆ. ಶರೀರದ ಒಳಗಿನ ಆತ್ಮಕ್ಕೆ ಅನುಭಾವಗಳು ಪ್ರಾಪ್ತಿಯಾಗುತ್ತವೆ. ವರ್ತಮಾನ ಜಗತ್ತಿನಲ್ಲಿ ಆತ್ಮವು ಯಾವ ಸಂಬಂಧ? ಯಾವ ಜ್ಞಾನ ಪಡೆಯಬೇಕೋ ಅದನ್ನು ಆಯಾ ಸಮಯದಲ್ಲಿ ಪಡೆಯುತ್ತದೆ ಎಂದು ವಿವರಿಸಿದರು.

ಎಲ್ಲಿ ಋಣ ಸಂಬಂಧವಿರುತ್ತದೋ ಅಲ್ಲಿ ಆತ್ಮನ ಪ್ರವೇಶವಾಗುತ್ತದೆ.ಋಣ ಸಂಬಂಧವನ್ನು ಮುಕ್ತಾಯ ಮಾಡಲು ಮತ್ತೆ ಭೂಮಿಗೆ ಬರಲೇಬೇಕಾಗುತ್ತದೆ. ತಾಯಿಯ ಗರ್ಭದಲ್ಲಿ ಶಿಶುವಿನ ಮೆದುಳಿನ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ವೇಳೆ ಅಂದರೆ, ಮೂರೂವರೆ ನಾಲ್ಕು ತಿಂಗಳ  ಅವಧಿಯ ಸಮಯದಲ್ಲಿ ತಾಯಿ ಗರ್ಭದಲ್ಲಿ ಆತ್ಮ ಪ್ರವೇಶವಾಗುತ್ತದೆ. ಆಗ ಶಿಶುವಿನ ಚಲನವಲನ ಆರಂಭವಾಗುತ್ತದೆ ಎಂದು ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಸಲು ಯು ಟ್ಯೂಬ್  ಚಾನಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada)  ವೀಕ್ಷಿಸಬಹುದು.

error: Content is protected !!