ಗ್ರಾಹಕರ ಗಮನ ಸೆಳೆದ ಮಕ್ಕಳ ಸಂತೆ

ಗ್ರಾಹಕರ ಗಮನ ಸೆಳೆದ ಮಕ್ಕಳ ಸಂತೆ

ದಾವಣಗೆರೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಮಂಗಳವಾರ ಪುಟಾಣಿಗಳೇ ಸಂತೆ ನಡೆಸಿದರು. ಶಾಲಾ ವತಿಯಿಂದ ಆಯೋಜಿಸಲಾಗಿದ್ದ ಈ ಸಂತೆಯಲ್ಲಿ ವಿದ್ಯಾರ್ಥಿಗಳು ವಿವಿಧ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಿದರು. 

ದಾವಣಗೆರೆ, ನ. 21- ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಏರ್ಪಾಡಾಗಿದ್ದ ಮಕ್ಕಳ ಸಂತೆ ಗ್ರಾಹಕರ ಗಮನ ಸೆಳೆಯಿತು.

ಮಕ್ಕಳು ಮತ್ತು ಪೋಷಕರೇ ಈ ಸಂತೆಯಲ್ಲಿ ಗ್ರಾಹಕರು. ಹಣ್ಣು, ತರಕಾರಿ, ಸೊಪ್ಪು, ದಿನಸಿ, ಕಾಳುಗಳನ್ನು ಮಾರಾಟ ಮಾಡಿ ದುಡ್ಡು ಎಣಿಸುತ್ತಿರುವ ದೃಶ್ಯ ಮತ್ತು ಮಕ್ಕಳೇ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.

ಮಕ್ಕಳಲ್ಲಿ ವ್ಯಾಪಾರಿ ಮನೋಭಾವನೆ ಬೆಳೆಯಬೇಕು. ಲೆಕ್ಕ ಹಾಗೂ ಲೆಕ್ಕಾಚಾರದ ಸುಲಭ ಗ್ರಹಿಕೆ ಮತ್ತು ಕಲಿಕೆಗಾಗಿ ಪ್ರಾಥಮಿಕ ಶಾಲೆ ಮಕ್ಕಳಿಗಾಗಿ ಈ ಸಂತೆಯನ್ನು ಆಯೋಜಿಸಲಾಗಿತ್ತು.

ಇತರೆ ಸಂತೆಗಳಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ಕೂಗಿ ಕರೆದು ವ್ಯಾಪಾರ ಮಾಡುವುದು ಕಂಡುಬಂತು. ಶೇಂಗಾ ಬೀಜ, ಕಡಲೆ, ಅಕ್ಕಿ, ಜೋಳ, ಅಡುಗೆ ಎಣ್ಣೆ, ಶಾಂಪು, ಚಾಕೋಲೇಟ್, ಕುರುಕುರೆ, ಮಂಡಕ್ಕಿ, ಬಿಸ್ಕತ್ತು, ಪೆನ್, ಸೇಬು, ಕಿತ್ತಲೆ, ಪೇರಲ ಹಣ್ಣುಗಳು ಸೇರಿದಂತೆ ಇತರೆ ದಿನಸಿ ಪದಾರ್ಥಗಳನ್ನು ಸಂತೆಯಲ್ಲಿ ಮಾರಾಟ ಮಾಡಲಾಯಿತು.

ಮಕ್ಕಳ ಪೋಷಕರು, ಗ್ರಾಹಕರು, ಶಿಕ್ಷಕರು ಸಂತೆಯಲ್ಲಿ ಮಾರಾಟ ಮಾಡಲಾದ ವಸ್ತುಗಳನ್ನು ಖರೀದಿಸಿದರು.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಕಾರ್ಯದರ್ಶಿ ಹೆಚ್. ಜಯಣ್ಣ, ಮುಖ್ಯ ಶಿಕ್ಷಕಿ ಭಾರತಿ ಹೆಗಡೆ ಮಕ್ಕಳ ಸಂತೆಗೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಹಲವರು ಮಕ್ಕಳ ಸಂತೆ ವೀಕ್ಷಿಸಿದರು.

error: Content is protected !!