ದಾವಣಗೆರೆ, ನ. 15 – ಹೆಚ್.ಎಸ್.ಆರ್.ಪಿ. (ಹೆಚ್ಚಿನ ಭದ್ರತೆಯ ನೋಂದಣಿ ಫಲಕ) ಅಳವಡಿಕೆಯ ಗಡುವನ್ನು ಮುಂದಿನ ವರ್ಷ ಫೆಬ್ರವರಿ 17ರವರೆಗೆ ಮುಂದೂಡಲಾಗಿದೆ. ಈ ಅವಧಿಯೊಳಗೆ ಎಲ್ಲಾ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಫಲಕ ಅಳವಡಿಸಿಕೊಳ್ಳದೇ ಇದ್ದರೆ ದಂಡ ವಿಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಹೆಚ್.ಎಸ್.ಆರ್.ಪಿ. ನೋಂದಣಿ ಫಲಕ ಗಳ ಅಳವಡಿಕೆ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2019ರ ಏಪ್ರಿಲ್ ನಂತರ ನೋಂದಣಿಯಾದ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಕೆ ಯಾಗಿದೆ. ಅದಕ್ಕೂ ಮೊದಲು ನೋಂದಣಿ ಯಾದ ಜಿಲ್ಲೆಯ 6.16 ಲಕ್ಷ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಕೆಯಾಗಬೇಕಿದೆ ಎಂದು ತಿಳಿಸಿದರು.
ಹೆಚ್.ಎಸ್.ಆರ್.ಪಿ.ಗಾಗಿ ಗ್ರಾಹಕರು www.siam.in ಹಾಗೂ https://bookmyhsrp.com ವೆಬ್ ತಾಣಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ನಂತರ ಆಯ್ದ ಕೇಂದ್ರಗಳಲ್ಲಿ ಫಲಕ ಅಳವಡಿಸಿಕೊಳ್ಳಬೇಕು ಎಂದವರು ಹೇಳಿದರು.
ಈ ಹಿಂದೆ ನ.17ರವರೆಗೆ ಫಲಕಗಳ ಅಳವಡಿಕೆ ಗಡುವಿತ್ತು. ಅದನ್ನು ಈಗ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಅವಧಿಯಲ್ಲೂ ಫಲಕಗಳನ್ನು ಅಳವಡಿಸಿಕೊಳ್ಳದೇ ಇದ್ದರೆ 500 ರೂ.ಗಳ ದಂಡ ವಿಧಿಸಲಾಗುವುದು ಎಂದು ಎಸ್ಪಿ ಎಚ್ಚರಿಸಿದರು.
ಫೆ.17ರ ಒಳಗೆ ವಾಹನಗಳಿಗೆ ಹೆಚ್ಚಿನ ಭದ್ರತೆಯ ನೋಂದಣಿ ಫಲಕ ಅಳವಡಿಕೆಗೆ ಎಸ್ಪಿ ಸೂಚನೆ
ರೈತರಿಗೂ ನಿಯಮ ಅನ್ವಯ
ಹೊಸ ವಾಹನಕ್ಕೂ ವಿನಾಯಿತಿ ಇಲ್ಲ
ಹೊಸ ವಾಹನಗಳ ಖರೀದಿಸಿದ ಸಂದರ್ಭದಲ್ಲಿ ಹೆಚ್.ಎಸ್.ಆರ್.ಪಿ. ಫಲಕಗಳು ಬರುವುದು ವಾರ ಕಾಲ ವಿಳಂಬವಾಗುತ್ತಿದೆ. ಅಲ್ಲಿಯವರೆಗೆ ನೋಂದಣಿ ಫಲಕವಿಲ್ಲದೇ ವಾಹನ ಚಲಾಯಿಸಲು ಅನುಮತಿ ಕೊಡಬೇಕು ಎಂದು ಶೋರೂಂಗಳ ಪ್ರತಿನಿಧಿಗಳು ಮನವಿ ಮಾಡಿಕೊಂಡರು. ಅಲ್ಲದೇ, ರೈತರು ತಮ್ಮ ಟ್ರ್ಯಾಕ್ಟರ್ಗಳಿಗೆ ಹೆಚ್.ಎಸ್.ಆರ್.ಪಿ. ಫಲಕ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸಬೇಕೆಂದೂ ಪ್ರತಿನಿಧಿಗಳು ಕೋರಿದರು. ಈ ಬಗ್ಗೆ ಪ್ರತಿಕ್ರಿಯಿ ಸಿದ ಎಸ್ಪಿ ಉಮಾ ಪ್ರಶಾಂತ್, ಶೋ ರೂಂನಿಂದ ವಾಹನ ತರುವಾಗಲೇ ನೋಂದಣಿ ಫಲಕ ಕಡ್ಡಾಯ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ರೈತರ ವಾಹನಗಳಿಗೂ ಹೆಚ್.ಎಸ್.ಆರ್.ಪಿ. ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಖಾಸಗಿ ಶೋ ರೂಂನಲ್ಲಿ ಹೆಚ್ಚುವರಿ ಹಣ ವಸೂಲಿ
ನಗರದ ಖಾಸಗಿ ಶೋ ರೂಂ ಒಂದರಲ್ಲಿ ಹೆಚ್.ಎಸ್.ಆರ್.ಪಿ. ಅಳವಡಿಕೆಗೆ ಹೆಚ್ಚುವರಿಯಾಗಿ 100 ರೂ. ಪಡೆಯಲಾಗುತ್ತಿದೆ. ಹಣ ಕೊಡದೇ ಇದ್ದರೆ ಫಲಕ ಅಳವಡಿಸುವುದಿಲ್ಲ ಎಂದು ತಿಳಿಸಲಾಗುತ್ತಿದೆ ಎಂದು ಸಭೆಯಲ್ಲಿ ದೂರಲಾಯಿತು. ಹೆಚ್.ಎಸ್.ಆರ್.ಪಿ.ಗಾಗಿ ಆನ್ಲೈನ್ನಲ್ಲಿ ಹಣ ಪಾವತಿಸುವಾಗಲೇ ಅಳವಡಿಕೆ ಶುಲ್ಕ ಪಡೆಯಲಾಗಿರುತ್ತದೆ. ಹೆಚ್ಚುವರಿ ಶುಲ್ಕ ಪಡೆಯುವುದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ನಿಯಮ ಉಲ್ಲಂಘಿಸಿದ್ದೇವೆ ಹೆಚ್.ಎಸ್.ಆರ್.ಪಿ. ಕೊಡಿ!
ಹಳೆಯ ಸರಕು ಸಾಗಣೆ ವಾಹನಗಳಿಗೆ ನಿಯಮ ಮೀರಿ ಇಂಜಿನ್ ಬದಲಿಸಲಾಗಿದೆ. ಈ ರೀತಿಯ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಬುಕ್ಕಿಂಗ್ ಸಾಧ್ಯವಾಗುತ್ತಿಲ್ಲ ಎಂದು ವಾಣಿಜ್ಯ ವಾಹನಗಳ ಮಾಲೀಕರ ಸಂಘದ ಪ್ರತಿನಿಧಿಯೊಬ್ಬರು ದೂರಿದರು. ಆರ್.ಟಿ.ಒ. ಅನುಮತಿ ಪಡೆಯದೇ ಇಂಜಿನ್ ಬದಲಿಸಿದ್ದೇ ತಪ್ಪು. ನಿಯಮಗಳನ್ನು ಮೀರಿ ಮನಸಿಗೆ ಬಂದಂತೆ ವಾಹನಗಳನ್ನು ಬದಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ನಕಲಿ ವೆಬ್ಸೈಟ್ಗಳಿಂದ ವಂಚನೆ
ಹೆಚ್.ಎಸ್.ಆರ್.ಪಿ. ಹೆಸರಿನಲ್ಲಿ ಹಣ ಪಡೆಯುವ ನಕಲಿ ವೆಬ್ಸೈಟ್ಗಳಿವೆ. ಇಂತಹ ವೆಬ್ಸೈಟ್ ಒಂದಕ್ಕೆ ಹಣ ಪಾವತಿಸಿ ವಂಚನೆಯಾಗಿದೆ ಎಂದು ಸಭೆಯಲ್ಲಿದ್ದ ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಪರಿಶೀಲಿಸಿ ಸೈಬರ್ ಅಪರಾಧ ದಳ ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಸೂಚಿಸಿದರು.
ಖಾಸಗಿ ಬಸ್ಗಳು ಖಾಲಿಯಾಗಿ ನಿಶ್ಯಕ್ತಿ!
ಬಸ್ಗಳ ಫುಟ್ಬೋರ್ಡ್ ಮೇಲೆ ಮಕ್ಕಳು ನಿಲ್ಲುವ ದೃಶ್ಯಗಳು ಕಂಡು ಬರುತ್ತಿವೆ. ಈ ರೀತಿ ಮಾಡಿದರೆ ಬಸ್ಗಳ ಅನುಮತಿಯನ್ನೇ ರದ್ದುಗೊಳಿಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಸಿದರು. ಆಗ ಮಾತನಾಡಿದ ಖಾಸಗಿ ಬಸ್ ಪ್ರತಿನಿಧಿಯೊಬ್ಬರು, ಶಕ್ತಿ ಯೋಜನೆ ಬಂದ ಮೇಲೆ ಖಾಸಗಿ ಬಸ್ಗಳ ಸೀಟುಗಳೇ ತುಂಬುತ್ತಿಲ್ಲ. ಶಕ್ತಿ ಯೋಜನೆ ನಮಗೆ ನಿಶ್ಯಕ್ತಿ ತಂದಿದೆ. ಹೀಗಾಗಿ ಫುಟ್ಬೋರ್ಡ್ ಮೇಲೆ ನಿಲ್ಲಿಸುತ್ತಿರುವುದು ಸರ್ಕಾರಿ ಬಸ್ಗಳಷ್ಟೇ ಎಂದು ಹೇಳಿದರು.
ಹೆಚ್ಚಿನ ಭದ್ರತೆಯ ಫಲಕಗಳನ್ನು ನಕಲು ಮಾಡುವುದು ಕಷ್ಟಸಾಧ್ಯ. ಅಲ್ಲದೇ, ಫಲಕಗಳಲ್ಲಿ ವಾಹನದ ವಿವರಗಳು ಪೊಲೀಸರಿಗೆ ಲಭ್ಯವಾಗುತ್ತವೆ. ಇದು ಅಪರಾಧಿಕ ಚಟುವಟಿಕೆ ತಡೆಯಲು ನೆರವಾಗುತ್ತದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮಥೇಶ್, ಹೆಚ್.ಎಸ್.ಆರ್.ಪಿ. ಫಲಕಗಳನ್ನು ಅಳವಡಿಸುವಾಗ ದಾಖಲೆಗಳು ಸರಿ ಇರಬೇಕು. ವಾಹನದ ಮಾಹಿತಿಯಲ್ಲಿ ಲೋಪವಿದ್ದಲ್ಲಿ ಆರ್.ಟಿ.ಒ. ಕಚೇರಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕ ಶ್ರೀನಿವಾಸ ಮೂರ್ತಿ ಮಾತನಾಡಿ, 53 ಸರ್ಕಾರಿ ಬಸ್ಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಕೆಯಾಗಿದೆ. ಉಳಿದ 323 ಬಸ್ಗಳಿಗೆ ಅಳವಡಿಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಹೆಚ್.ಎಸ್.ಆರ್.ಪಿ. ಅಳವಡಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಆದರೆ, ಕೆಲ ಕಂಪನಿಗಳ ವಾಣಿಜ್ಯ ವಾಹನಗಳಿಗೆ ಫಲಕ ಅಳವಡಿಸುವ ಘಟಕಗಳು ದಾವಣಗೆರೆಯಲ್ಲಿ ಇಲ್ಲ ಎಂದು ಖಾಸಗಿ ವಾಹನಗಳ ಸಂಘದವರು ತಿಳಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಬಸ್, ಆಟೋ, ಖಾಸಗಿ ವಾಣಿಜ್ಯ ವಾಹನಗಳ ಸಂಘಗಳ ಪ್ರತಿನಿಧಿಗಳು, ವಾಹನಗಳ ಶೋರೂಂ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯ ಮೇಲೆ ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ದಾವಣಗೆರೆ ಸಂಚಾರ ವೃತ್ತದ ಸಿಪಿಐ ಮಂಜುನಾಥ್ ನೆಲವಾಗಲು ಮತ್ತಿತರರು ಉಪಸ್ಥಿತರಿದ್ದರು.